ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ಕುಮಾರ್ ಚುನಾವಣಾ ರ್ಯಾಲಿ
Published : Mar 20, 2024, 7:55 PM IST
ಶಿವಮೊಗ್ಗ: ಲೋಕಸಮರಕ್ಕೆ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿಗಳು ಭರ್ಜರಿ ಪ್ರಚಾರಕ್ಕೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಹಲವೆಡೆ ಪ್ರಚಾರ ಪ್ರಾರಂಭವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ಕುಮಾರ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಪತಿ, ನಟ ಶಿವರಾಜ್ಕುಮಾರ್ ಆಗಮಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಹಾಗೂ ನಟ ಶಿವರಾಜ್ಕುಮಾರ್ ದಂಪತಿ ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗದ ಭದ್ರಾವತಿಗೆ ಅಗಮಿಸಿದರು. ಭದ್ರಾವತಿಯ ಕಾರೆಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಂಪತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಶಿವಮೊಗ್ಗ ನಗರಕ್ಕೆ ಆಗಮಿಸಿದ ದಂಪತಿಯನ್ನು ಕಾಂಗ್ರೆಸ್ ಮುಖಂಡರುಗಳು ಬೆಕ್ಕಿನಕಲ್ಮಠದ ಬಳಿ ಬರಮಾಡಿಕೊಂಡರು. ಈ ವೇಳೆ ಶಿವರಾಜ್ಕುಮಾರ್ ದಂಪತಿ ಕಾರಿನಲ್ಲಿ ನಿಂತು ಅಭಿಮಾನಿಗಳ ಕಡೆ ಕೈಬೀಸಿದರು.
ಕಾಂಗ್ರೆಸ್ ಮುಖಂಡರಾದ ಯೋಗೀಶ್ ಹಾಗೂ ಇತರರು ಮೂಸುಂಬಿ ಹಾರವನ್ನು ಮಾಡಿದ್ದರು. ಹಾರದಲ್ಲಿ ತಮ್ಮ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರ ಫೋಟೋವನ್ನು ಹಾಕಲಾಗಿತ್ತು. ಮುಖಂಡರ ಕೋರಿಕೆಯ ಮೇರೆಗೆ ದಂಪತಿ ಹಾರದ ಬಳಿ ಬಂದರು. ಈ ವೇಳೆ ಅಭಿಮಾನಿಗಳು ಹ್ಯಾಟ್ರಿಕ್ ಹೀರೋನನ್ನು ನೋಡಲು ಮುಗಿಬಿದ್ದಿದ್ದರು. ರ್ಯಾಲಿ ನಂತರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.
ಇದನ್ನೂ ಓದಿ: ಗೀತಾ ಶಿವರಾಜ್ಕುಮಾರ್ಗೆ ಸಿಕ್ತು ನಿರ್ಮಾಪಕರ ಬೆಂಬಲ: ಗೀತಾಗೆ ಸಾಥ್ ಕೊಡುತ್ತೇವೆ ಎಂದ ನಿರ್ಮಾಪಕರು