ವೋಟ್‌ ಮಾಡಿದ ರಾಜಕೀಯ ನಾಯಕರು ಯಾರೆಲ್ಲಾ?- ವಿಡಿಯೋ ನೋಡಿ - Political Leaders Voting

By ETV Bharat Karnataka Team

Published : May 13, 2024, 9:23 AM IST

Updated : May 13, 2024, 11:47 AM IST

thumbnail
ರಾಜಕೀಯ ನಾಯಕರಿಂದ ಮತದಾನ (ETV Bharat)

ಲೋಕಸಭೆ ಚುನಾವಣೆಗೆ ಇಂದು 4ನೇ ಹಂತದ ಮತದಾನ ನಡೆಯುತ್ತಿದೆ. ಒಂಭತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಜನಸಾಮಾನ್ಯರು, ರಾಜಕೀಯ ಗಣ್ಯರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 

ಮಧ್ಯಪ್ರದೇಶ ಸಿಎಂ ಮತದಾನ: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರು ಉಜ್ಜಯಿನಿಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು, "ಮತ ಚಲಾಯಿಸಲು ನನಗೆ ತುಂಬಾ ಸಂತೋಷವಾಗಿದೆ. ರಾಜ್ಯದ ಜನತೆಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ಭಾರೀ ಬಹುಮತ ಪಡೆದು ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲಿ 29 ಸ್ಥಾನಗಳನ್ನೂ ನಾವು ಗೆಲ್ಲಲಿದ್ದೇವೆ" ಎಂದು ಹೇಳಿದರು.

ಜೆಕೆಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಜೆಕೆಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶ್ರೀನಗರದಲ್ಲಿ ಮತ ಚಲಾಯಿಸಿದರು. 

ಬಿಹಾರದಲ್ಲಿ ಗಿರಿರಾಜ್ ಸಿಂಗ್ ಹಕ್ಕು ಚಲಾವಣೆ: ಕೇಂದ್ರ ಸಚಿವ ಮತ್ತು ಬೇಗುಸರಾಯ್‌ನ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ಬಿಹಾರದ ಲಖಿಸರಾಯ್‌ನಲ್ಲಿ ಮತ ಹಾಕಿ ಜನರಿಗೆ ಮತದಾನ ಮಾಡುವಂತೆ ಕರೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಿಮ್ಮ ಪ್ರತೀ ಮತ ನರೇಂದ್ರ ಮೋದಿ ಅವರಿಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತವೆ. ನಿಮ್ಮ ಒಂದು ಮತ ಬಡವರಿಗೆ ಶಕ್ತಿ ನೀಡುತ್ತದೆ" ಎಂದರು.  

ಪವನ್ ಕಲ್ಯಾಣ್ ವೋಟಿಂಗ್​: ಆಂಧ್ರಪ್ರದೇಶದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಮಂಗಳಗಿರಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.  

ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಎಐಎಂಐಎಂ ಪಕ್ಷದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಮತ ಚಲಾಯಿಸಿ ಶಾಯಿ ಹಾಕಿದ ಬೆರಳನ್ನು ತೋರಿಸಿದರು. ಬಳಿಕ ಮಾತನಾಡಿದ ಅವರು, "ಪ್ರತಿ ಚುನಾವಣೆಯೂ ಐದು ವರ್ಷಗಳ ಹಿಂದಿನಂತೆಯೇ ಇರಲು ಸಾಧ್ಯವಿಲ್ಲ. ಈ ಬಾರಿ ಸವಾಲುಗಳು, ಸಮಸ್ಯೆಗಳು ವಿಭಿನ್ನ. ಇದು ನಮ್ಮ ದೇಶದ ಅತ್ಯಂತ ಮಹತ್ವದ, ಐತಿಹಾಸಿಕ ಸಂಸದೀಯ ಚುನಾವಣೆ" ಎಂದರು.

ಮಾಧವಿ ಲತಾ ಮತ ಚಲಾವಣೆ: ಹೈದರಾಬಾದ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅಮೃತ ವಿದ್ಯಾಲಯ ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾತನಾಡಿ, "ಸಬ್​ ಕಾ ಸಾಥ್​, ಸಬ್ ಕಾ ವಿಕಾಸ್. ಎಲ್ಲರೂ ಮತ ಚಲಾಯಿಸಿ. ನಿಮ್ಮ ಮತ ಬದಲಾವಣೆ ತರುತ್ತದೆ, ದೇಶ ಅಭಿವೃದ್ಧಿಯತ್ತ ಸಾಗುತ್ತದೆ" ಎಂದು ಕರೆ ನೀಡಿದರು.

ಚಂದ್ರಬಾಬು ನಾಯ್ಡು ವೋಟ್​: ಆಂಧ್ರಪ್ರಧೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದೆ. ಮಾಜಿ ಸಿಎಂ ಮತ್ತು ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಗುಂಟೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಆಂಧ್ರ ಸಿಎಂ ಜಗನ್ ಮತದಾನ: ಆಂಧ್ರಪ್ರದೇಶದ ಕಡಪ ಕ್ಷೇತ್ರದ ಜಯಮಹಲ್ ಅಂಗನವಾಡಿ ಮತಗಟ್ಟೆ ಸಂಖ್ಯೆ 138ರಲ್ಲಿ ಆಂಧ್ರಪ್ರದೇಶ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮತ ಚಲಾಯಿಸಿ ಇಂಕ್ ಹಾಕಿದ ಬೆರಳನ್ನು ತೋರಿಸಿ ಎಲ್ಲರೂ ಮತ ಚಲಾಯಿಸುವಂತೆ ಮನವಿ ಮಾಡಿದರು.

ಕೇಂದ್ರ ಸಚಿವ ಕಿಶನ್ ರೆಡ್ಡಿ ಮತದಾನ: ಇನ್ನು, ಕೇಂದ್ರ ಸಚಿವ ಮತ್ತು ಸಿಕಂದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಕಿಶನ್ ರೆಡ್ಡಿ ಕುಟುಂಬಸಮೇತರಾಗಿ  ತೆಲಂಗಾಣದ ಬರ್ಕತ್‌ಪುರದ ದೀಕ್ಷಾ ಮಾದರಿ ಶಾಲೆಯ ಮತಗಟ್ಟೆಗೆ ಆಗಮಿಸಿ ಸಂಖ್ಯೆ 214 ರಲ್ಲಿ ಮತ ಚಲಾಯಿಸಿದರು. ಬಳಿಕ ಮಾತನಾಡುತ್ತಾ, "ಮತದಾನ ಮೂಲಭೂತ ಹಕ್ಕು. ಇದು ಪ್ರತಿಯೊಬ್ಬರ ಜವಾಬ್ದಾರಿ ಕೂಡಾ. ದೇಶದ ಅಭಿವೃದ್ಧಿ, ಭದ್ರತೆಗಾಗಿ ಮತ ಚಲಾಯಿಸಿ" ಎಂದು ಕರೆ ಕೊಟ್ಟರು. 

ಎಂ.ವೆಂಕಯ್ಯ ನಾಯ್ಡು ಮತದಾನ: ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪತ್ನಿ ಉಷಾ ನಾಯ್ಡು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ 4ನೇ ಹಂತದ ಮತದಾನ ಆರಂಭ: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ - Lok Sabha Election 2024

Last Updated : May 13, 2024, 11:47 AM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.