ETV Bharat / bharat

Maharashtra Politics: ಅಜಿತ್​ ನನ್ನ ಸೋದರ ಸಂಬಂಧಿ, ಭೇಟಿಯಲ್ಲಿ ತಪ್ಪೇನು?- ಶರದ್ ಪವಾರ್

author img

By

Published : Aug 13, 2023, 9:23 PM IST

Maharashtra Politics: ಕೆಲವು ಹಿತೈಷಿಗಳು ನಮ್ಮ ನಿಲುವಿನಲ್ಲಿ ಬದಲಾವಣೆಯಾಗಬಹುದೇ ಎಂದು ನೋಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿಯ ಯಾವುದೇ ಸಂಬಂಧವು ಎನ್‌ಸಿಪಿಯ ರಾಜಕೀಯ ನೀತಿಗೆ ಹೊಂದಿಕೆ ಆಗಲ್ಲ ಎಂದು ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್ ಹೇಳಿದ್ದಾರೆ.

Ajit Pawar and Sharad Pawar
ಶರದ್​ ಪವಾರ್ ಮತ್ತು ಅಜಿತ್​ ಪವಾರ್

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ತಿಂಗಳ ಹಿಂದೆ ಎರಡು ಬಣಗಳಾಗಿ ಇಬ್ಭಾಗವಾಗಿತ್ತು. ಒಂದೆಡೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗು ಹಿರಿಯ ರಾಜಕಾರಣಿ ಶರದ್​ ಪವಾರ್​ ಬಿಜೆಪಿಯನ್ನು ಕಟುವಾಗಿ ವಿರೋಧಿಸುತ್ತಿದ್ದಾರೆ. ಮತ್ತೊಂದೆಡೆ, ಸಂಬಂಧದಲ್ಲಿ ಪುತ್ರರಾದ ಅಜಿತ್​ ಪವಾರ್​ ಅವರು ಶಿವಸೇನೆ (ಏಕನಾಥ್ ಶಿಂಧೆ ಬಣ) ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ಸೇರುವ ಮೂಲಕ ಕೇಸರಿ ಪಕ್ಷದ ಸಖ್ಯ ಬೆಳೆಸಿದ್ದಾರೆ. ಹೀಗಾಗಿ ಎನ್​ಸಿಪಿ ಶರದ್​ ಹಾಗೂ ಅಜಿತ್​ ಬಣವಾಗಿ ರೂಪುಗೊಂಡಿದೆ. ಆದರೂ, ಇಬ್ಬರು ನಾಯಕರು ಮೇಲಿಂದ ಮೇಲೆ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ಮಹಾರಾಷ್ಟ್ರ ಮಾತ್ರವಲ್ಲ, ದೇಶದ ರಾಜಕಾರಣದ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಆಗಸ್ಟ್ 25 - 26ಕ್ಕೆ ಮುಂಬೈನಲ್ಲಿ ನಡೆಯಲಿದೆ 'ಇಂಡಿಯಾ'ದ ಮೂರನೇ ಸಭೆ

ಕಳೆದ ತಿಂಗಳು ಏಕನಾಥ್ ಶಿಂಧೆ ಬಣ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅಧಿಕಾರ ಸ್ವೀಕರಿಸಿದ್ದರು. ಅವರ ಬೆಂಬಲಿತ ಎನ್‌ಸಿಪಿಯ ಇತರ 8 ಶಾಸಕರು ಕೂಡ ಸಚಿವರಾಗಿದ್ದಾರೆ. ಶರದ್​ ಪವಾರ್ ಬೆಂಬಲಿತ ಮತ್ತೊಂದು ಗುಂಪು ಪ್ರತಿಪಕ್ಷದಲ್ಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಎದುರಿಸಲು ಸಜ್ಜಾಗುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಶರದ್​ ಕೂಡ ಪ್ರಮುಖರು. ಇದರ ನಡುವೆ ಜುಲೈ 16ರಂದು ಶರದ್​ ಪವಾರ್ ಹಾಗೂ ಅಜಿತ್​ ಪವಾರ್​ ಭೇಟಿ ಮಾಡಿದ್ದರು. ಇದೀಗ ಒಂದು ತಿಂಗಳ ಅಂತರದಲ್ಲಿ ಅಂದರೆ ಶನಿವಾರ (ಆಗಸ್ಟ್​ 12) ಸಹ ಉಭಯ ನಾಯಕರು ಪುಣೆಯಲ್ಲಿ ಭೇಟಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಭಾನುವಾರ ಶರದ್​ ಪವಾರ್ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿ, ಹೊಸ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಹಿತೈಷಿಗಳಿಂದ ನನ್ನ ಮನವೊಲಿಕೆ - ಶರದ್​: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಳದಲ್ಲಿ ಮಾತನಾಡಿದ ಶರದ್ ಪವಾರ್​, ಕೆಲವು ಹಿತೈಷಿಗಳು ನನ್ನ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ, ನಮ್ಮ ಪಕ್ಷ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ''ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ನನ್ನ ಪಕ್ಷ (ಎನ್‌ಸಿಪಿ) ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಭಾರತೀಯ ಜನತಾ ಪಕ್ಷದೊಂದಿಗಿನ ಯಾವುದೇ ಸಂಬಂಧವು ಎನ್‌ಸಿಪಿಯ ರಾಜಕೀಯ ನೀತಿಗೆ ಹೊಂದಿಕೆಯಾಗುವುದಿಲ್ಲ'' ಎಂದು ಸುದ್ದಿಗಾರರಿಗೆ ತಿಳಿಸಿದರು.

ಮುಂದುವರೆದು ಮಾತನಾಡಿ, ''ನಮ್ಮಲ್ಲಿ ಕೆಲವರು (ಅಜಿತ್ ಪವಾರ್ ಗುಂಪು) ವಿಭಿನ್ನ ನಿಲುವು ತಳೆದಿದ್ದಾರೆ. ನಮ್ಮ ಕೆಲವು ಹಿತೈಷಿಗಳು ನಮ್ಮ ನಿಲುವಿನಲ್ಲೂ ಏನಾದರೂ ಬದಲಾವಣೆಯಾಗಬಹುದೇ ಎಂದು ನೋಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಸೌಹಾರ್ದಯುತವಾಗಿ ಚರ್ಚಿಸಲು ಪ್ರಯತ್ನಿಸುತ್ತಿದ್ದಾರೆ'' ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

ಅಜಿತ್ ಪವಾರ್ ಅವರೊಂದಿಗೆ ಶನಿವಾರ ಪುಣೆಯಲ್ಲಿ ನಡೆದ ''ರಹಸ್ಯ'' ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಅವರು (ಅಜಿತ್ ಪವಾರ್)​ ನನ್ನ ಸೋದರ ಸಂಬಂಧಿ ಎಂಬ ಸತ್ಯವನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ನನ್ನ ಸೋದರ ಸಂಬಂಧಿಯನ್ನು ಭೇಟಿಯಾಗುವುದರಲ್ಲಿ ತಪ್ಪೇನು?, ಒಂದು ಕುಟುಂಬದ ಹಿರಿಯ ವ್ಯಕ್ತಿಯು ಇನ್ನೊಬ್ಬ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಬಯಸಿದರೆ, ಅದರಲ್ಲಿ ಯಾವುದೇ ರಹಸ್ಯ ಇರಬಾರದು'' ಎಂದೂ ಹೇಳಿದರು. ಇದೇ ವೇಳೆ, ''ಶಿವಸೇನೆ (ಉದ್ಧವ್​ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿಗೆ ಜನತೆ ರಾಜ್ಯದ ಆಡಳಿತವನ್ನು ನೀಡಲು ಬಯಸುತ್ತಿದ್ದಾರೆ'' ಎಂದರು.

ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಸೊಲ್ಲಾಪುರ ಜಿಲ್ಲೆಯಲ್ಲಿ ಭಾನುವಾರ ದಿವಂಗತ ಶಾಸಕ ಗಣಪತ್ರಾವ್ ದೇಶಮುಖ್ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಶರದ್​ ಪವಾರ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಆಗಸ್ಟ್​ 1ರಂದು ಪುಣೆಯಲ್ಲಿ ಲೋಕಮಾನ್ಯ ತಿಲಕ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೂ ಶರದ್​ ಪವಾರ್​ ವೇದಿಕೆ ಹಂಚಿಕೊಂಡಿದ್ದನ್ನು ಗಮನಿಸಬಹುದು.

ಇದನ್ನೂ ಓದಿ: Maharashtra Politics: ಕುತೂಹಲಕಾರಿ ಬೆಳವಣಿಗೆ.. ಶರದ್ ಪವಾರ್ ಭೇಟಿಯಾದ ಅಜಿತ್ ಪವಾರ್, ಪ್ರಫುಲ್ ಪಟೇಲ್ ಬಣದ NCP ಸಚಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.