ಹಾವೇರಿ: ಕಾಂಗ್ರೆಸ್ ಸರ್ಕಾರ ಹಿಂದೆಂದೂ ಕಾಣದಂತಹ ರಾಜಕಾರಣ ಮಾಡುತ್ತಿದೆ. ಲೋಕಸಭೆ ಚುನಾವಣೆಯನ್ನ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಪ್ರವೃತ್ತಿ ಈ ರಾಜ್ಯ ಸರ್ಕಾರಕ್ಕಿದೆ ಎಂದು ಮಾಜಿ ಸಿಎಂ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಕೊಡುವುದು ತಡವಾಯಿತು ಎನ್ನುವ ಆರೋಪವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಯುಪಿಯ ಸರ್ಕಾರ ಇದ್ದ ಸಮಯದಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದಾಗ ವರ್ಷ ಹಾಗೂ ಕೆಲ ತಿಂಗಳುಗಳ ನಂತರ ಬರ ಪರಿಹಾರ ನೀಡಿರುವ ಉದಾಹರಣೆಗಳಿವೆ. ಆವತ್ತು ಇವರಿಗೆ ರಾಜ್ಯಕ್ಕೆ ಅನ್ಯಾಯವಾಗಿರುವುದು ಕಾಣಲಿಲ್ವಾ ಎಂದು ಪ್ರಶ್ನಿಸಿದರು.
ಬರ ಪರಿಹಾರಕ್ಕೆ ತನ್ನದೇ ಆದ ಕಾನೂನು ನೀತಿ ಇದೆ. ಬರ ಪರಿಹಾರ ನೀಡಿದ ಮೇಲೆ ಆ ಮೊತ್ತ ಕಡಿಮೆಯಾಯಿತು ಎಂದು ಈಗ ಪ್ರತಿಭಟನೆ ಮಾಡಿದ್ದಾರೆ. ಆನೆಯ ಹೊಟ್ಟಿಗೆ ಅರೆ ಕಾಸಿನ ಮಜ್ಜಿಗೆ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಕೇಳಿದಷ್ಟು ಹಣವನ್ನು ನೀವು ರಾಜ್ಯದ ಜನರಿಗೆ ನೀಡಿದ್ದರೆ ಪರಿಹಾರ ಕೇಳಲು ನಿಮಗೆ ನೈತಿಕ ಹಕ್ಕಿತ್ತು. ಆದರೆ ಹಣ ಬಿಡುಗಡೆ ಮಾಡದೆ ನಿಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ಮರೆತು, ನಿಮ್ಮ ತಪ್ಪು ಮುಚ್ಚಿಕೊಳ್ಳಲು, ಸರ್ಕಾರ ದಿವಾಳಿಯಾಗಿರುವುದನ್ನು ಮುಚ್ಚಿಕೊಳ್ಳಲು ಹಣ ಮಂಜೂರಾದರು ಸಹ ನಾಟಕ ಮುಂದುವರೆಸಿದ್ದೀರಾ ಎಂದು ವಾಗ್ದಾಳಿ ನಡೆಸಿದರು.