ಕರ್ನಾಟಕ

karnataka

ಬಸ್​ - ಟಾಟಾ ಸುಮೋ ಕಾರು ನಡುವೆ ಅಪಘಾತ: ದೇವರ ದರ್ಶನ ಮುಗಿಸಿ ಬರುತ್ತಿದ್ದ ಏಳು ಮಂದಿ ಸಾವು

By ETV Bharat Karnataka Team

Published : Oct 24, 2023, 8:04 AM IST

Updated : Oct 24, 2023, 9:00 AM IST

ಸರ್ಕಾರಿ ಬಸ್ ಮತ್ತು ಟಾಟಾ ಸುಮೋ ಕಾರು ಅಪಘಾತ ಸಂಭವಿಸಿ ​ಏಳು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

7-assam-people-lost-their-life-in-an-accident-near-chengam
ಬಸ್​ - ಟಾಟಾ ಸುಮೋ ಕಾರು ನಡುವೆ ಅಪಘಾತ : ದೇವರ ದರ್ಶನ ಮುಗಿಸಿ ಬರುತ್ತಿದ್ದ ಏಳು ಮಂದಿ ಸಾವು

ತಿರುವಣ್ಣಾಮಲೈ (ತಮಿಳುನಾಡು): ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ಅಣ್ಣಾಮಲೈಯರ್​ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ. ಮೃತರೆಲ್ಲರೂ ಅಸ್ಸೋಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇವರು ತಿರುವಣ್ಣಾಮಲೈ ಅಣ್ಣಾಮಲೈಯರ್​ ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹಿಂತಿರುಗುವಾಗ ಅಪಘಾತದ ಸಂಭವಿಸಿದೆ.

ಇಲ್ಲಿನ ಚೆಂಗಾಮ್​ನ ಪಕ್ಕಿರಿಪಾಲಯಂ​ ಬಳಿ ಧರ್ಮಪುರಿಯಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಸರ್ಕಾರಿ ಬಸ್​ ಮತ್ತು ತಿರುವಣ್ಣಾಮಲೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಾಟಾ ಸುಮೋದಲ್ಲಿ ಒಟ್ಟು 10 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ 4 ಮಂದಿ ಮತ್ತು ಬಸ್​ನಲ್ಲಿದ್ದ 10 ಮಂದಿ ಸೇರಿ ಒಟ್ಟು 14 ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆ ಮತ್ತು ಚೆಂಗಾಮ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರಲ್ಲಿ ಓರ್ವ ಚೆಂಗಾಮ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇನ್ನೋರ್ವ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ.

ಕಾರು ಲಾರಿ ಡಿಕ್ಕಿ..ಏಳು ಮಂದಿ ಸಾವು: ಕಳೆದ ಅಕ್ಟೋಬರ್​ 15ರಂದು ಇಲ್ಲಿನ ಚೆಂಗಾಮ್​ ಬಳಿಯ ಪಕ್ಕಿರಿಪಾಲಯಂ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿ ಮಕ್ಕಳು ಸೇರಿ ಏಳು ಮಂದಿ ಸಾವನ್ನಪ್ಪಿದ್ದರು.

ಶಬರಿಮಲೆ ಯಾತ್ರಿಕರ ಬಸ್​ ಅಪಘಾತ : ಶಬರಿಮಲೆಗೆ ತೆರಳುತ್ತಿದ್ದ ಯಾತ್ರಿಕರ ಬಸ್​ ಅಪಘಾತವಾಗಿ 13ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಘಟನೆ ಇತ್ತೀಚೆಗೆ ಕೇರಳದ ಕೊಟ್ಟಾಯಂನಲ್ಲಿ ನಡೆದಿತ್ತು. 40 ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್​ ಇಲ್ಲಿನ ಎರುಮೇಲಿ ಸಮೀಪದ ಕನಮಾಲ ಎಂಬಲ್ಲಿ ಅಪಘಾತವಾಗಿತ್ತು. ಅಪಘಾತದಲ್ಲಿ ಕೋಲಾರ ಮೂಲದ ಶಬರಿಮಲೆ ಯಾತ್ರಾರ್ಥಿಗಳ ಗಾಯಗೊಂಡಿದ್ದರು.

ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸ್​ ಅಧಿಕಾರಿ, ಕರ್ನಾಟಕದ ಕೋಲಾರದಿಂದ ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್​ ಚಾಲಕನ ನಿಯಂತ್ರಣ ತಪ್ಪಿ ಕೊಟ್ಟಾಯಂನಲ್ಲಿ ಅಪಘಾತಕ್ಕೀಡಾಗಿದೆ. ಬಸ್​ನಲ್ಲಿ 40 ಯಾತ್ರಾರ್ಥಿಗಳು ಸೇರಿ 43 ಮಂದಿ ಇದ್ದರು. ಇದರಲ್ಲಿ 13 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ :ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ: ಪ್ರಯಾಣಿಕರಿಗೆ ಗಾಯ

Last Updated :Oct 24, 2023, 9:00 AM IST

ABOUT THE AUTHOR

...view details