ETV Bharat / bharat

ತೆಲಂಗಾಣದಲ್ಲಿ ಭಾರೀ ಮಳೆ; ಸಿಡಿಲು ಬಡಿದು ಮೂವರು ಸಾವು - RAIN IN TELANGANA

author img

By ETV Bharat Karnataka Team

Published : May 12, 2024, 6:41 PM IST

ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿದೆ. ಆದಿಲಾಬಾದ್ ಮತ್ತು ಮೇದಕ್ ಜಿಲ್ಲೆಗಳಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

HEAVY RAINS IN MANY DISTRICTS  SEVERAL PEOPLE DIED  THUNDERSTORMS  RAIN IN TELANGANA
ರಾಜ್ಯಾದ್ಯಂತ ಚಂಡಮಾರುತ ಎಫೆಕ್ಟ್​-ಸಿಡಿಲು ಬಡಿದು ಮೂವರ ಸಾವು (ಸಂಗ್ರಹ ಚಿತ್ರ (ETV Bharat))

ಹೈದರಾಬಾದ್​ (ತೆಲಂಗಾಣ): ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಚಂಡಮಾರುತ ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಆದಿಲಾಬಾದ್ ಮತ್ತು ಮೇದಕ್ ಜಿಲ್ಲೆಗಳಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೇದಕ್ ಜಿಲ್ಲೆಯ ಪೆದ್ದ ಶಂಕರಂಪೇಟದಲ್ಲಿ ಸಿಡಿಲು ಬಡಿದು ಅಜ್ಜ-ಮೊಮ್ಮಗ ಸಾವನ್ನಪ್ಪಿರುವ ಘಟನೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಸಿಡಿಲು ಬಡಿದು ಗಾಯಗೊಂಡ ನಾಲ್ವರಿಗೆ ವೈದ್ಯಕೀಯ ನೆರವು ನೀಡುವಂತೆ ಸಿಎಂ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದರು.

ಸಂಯೋಜಿತ ಮೇದಕ್ ಜಿಲ್ಲೆಯಲ್ಲಿ ಚಂಡಮಾರುತ ಅವಾಂತರ ಸೃಷ್ಟಿಸಿದೆ. ಪೆದ್ದ ಶಂಕರಂಪೇಟ ಮಂಡಲದಲ್ಲಿ ಸಿಡಿಲು ಬಡಿದು ಅಜ್ಜ, ಮೊಮ್ಮಗ ಸಾವನ್ನಪ್ಪಿದ್ದಾರೆ. ಐಕೆಪಿ ಕೇಂದ್ರದಲ್ಲಿ ರಾಶಿ ರಾಶಿ ಧಾನ್ಯಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಲು ಹೋದಾಗ ಅಜ್ಜ ಶ್ರೀರಾಮುಲು (50) ಮತ್ತು ವಿಶಾಲ್ (11) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅದಿಲಾಬಾದ್‌ನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು: ಅದಿಲಾಬಾದ್ ಜಿಲ್ಲೆಯಲ್ಲಿ ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಜೈನಾಥ್ ತಾಲೂಕಿನ ಗಿಮ್ಮ ಗ್ರಾಮದ ಉಪನಗರದಲ್ಲಿ ಸಿಡಿಲು ಬಡಿದು ಐವರು ಗಾಯಗೊಂಡಿದ್ದರು. ಈ ಪೈಕಿ ಗಿಮ್ಮನ ಗ್ರಾಮದ ಮಾಮಿಡಿಪಲ್ಲಿ ಕಿರಣ್‌ ಎಂಬುವರು ಮೃತಪಟ್ಟಿದ್ದಾರೆ. ಎಂಪಿಟಿಸಿ ಸದಸ್ಯ ಕೋಲ ಭೋಜಣ್ಣ, ಮಾಜಿ ಎಂಪಿಟಿಸಿ ಸದಸ್ಯ ರಮೇಶ್ ಹಾಗೂ ಉಪ ಸರಪಂಚ್ ಪತಿ ರಮೇಶ್ ಗಾಯಗೊಂಡಿದ್ದು, ಮತ್ತೋರ್ವ ಸಾಂಟೆಣ್ಣ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲಾ ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಿಆರ್​ಎಸ್ ಜಿಲ್ಲಾಧ್ಯಕ್ಷ ಜೋಗು ರಾಮಣ್ಣ, ಆದಿಲಾಬಾದ್ ಶಾಸಕ ಪಾಯಲ್ ಶಂಕರ್ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿದರು.

ರಾಜ್ಯದಲ್ಲಿ ಐದು ದಿನಗಳು ಮಳೆ: ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರ ತಿಳಿಸಿದೆ. ಇಂದು ಕರೀಂನಗರ, ವಾರಂಗಲ್, ಖಮ್ಮಂ, ರಂಗಾರೆಡ್ಡಿ ಸೇರಿದಂತೆ ಇನ್ನು ಕೆಲ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದಿಲಾಬಾದ್, ನಿಜಾಮಾಬಾದ್, ಖಮ್ಮಂ, ರಂಗಾ ರೆಡ್ಡಿ ಮತ್ತು ಹೈದರಾಬಾದ್ ಸಂಯೋಜಿತ ಜಿಲ್ಲೆಗಳಲ್ಲಿ ನಾಳೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆ ಆಗಲಿದೆ ಎಂದು ಘೋಷಿಸಲಾಗಿದೆ.

ಇಂದು ಹೈದರಾಬಾದ್ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಪ್ರಕಟಿಸಿದೆ. ನಗರಕ್ಕೆ ಭಾರೀ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ನಗರದ ನಿವಾಸಿಗಳು ಜಾಗೃತರಾಗಬೇಕು ಎಂದು ಜಿಎಚ್‌ಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ಸಂಪರ್ಕಿಸಲು 040 21111111 ಮತ್ತು 9000113667 ಸಂಖ್ಯೆಗಳನ್ನು ನೀಡಿದೆ.

ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಮಳೆಯಿಂದಾಗಿ ಹಲವೆಡೆ ಧಾನ್ಯಗಳು ಒದ್ದೆಯಾಗಿದ್ದವು. ಜೋರಾದ ಗಾಳಿಗೆ ಧಾನ್ಯಗಳ ರಾಶಿಯ ಮೇಲಿನ ಟಾರ್ಪಾಲಿನ್ ಹೊದಿಕೆಗಳು ಹಾರಿಹೋಗಿವೆ. ಸಂಗಾರೆಡ್ಡಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ನಾಗಲಿಗಿಡ್ಡ ತಾಲೂಕಿನ ಮುಕ್ತಾಪುರದಲ್ಲಿ 5.1 ಸೆಂ.ಮೀ ಮಳೆ ದಾಖಲಾಗಿದೆ. ಪಾಪಣ್ಣಪೇಟೆ ಮಂಡಲದ ಮೊಗುಡಂಪಲ್ಲಿಯಲ್ಲಿ 2.6 ಸೆಂ.ಮೀ ಹಾಗೂ ಲಿಂಗಾಯಿಪಲ್ಲಿಯಲ್ಲಿ 1.9 ಸೆಂ.ಮೀ ಮಳೆ ದಾಖಲಾಗಿದೆ.

ಆಸಿಫಾಬಾದ್​ನಲ್ಲಿ ಬಿರುಸಿನ ಗಾಳಿ ಸಹಿತ ಮಳೆಯಾಗುತ್ತಿದೆ. ಕೇಂದ್ರದಲ್ಲಿ ಚುನಾವಣಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ವೇಳೆ ಗಾಳಿಯ ರಭಸಕ್ಕೆ ಟೆಂಟ್ ಗಳು ಕುಸಿದು ಬಿದ್ದಿವೆ. ಚುನಾವಣಾ ಸಿಬ್ಬಂದಿ ಚುನಾವಣಾ ಪರಿಕರ ಕೇಂದ್ರದ ವರಾಂಡದಲ್ಲಿ ಅಡಗಿಕೊಂಡರು. ಭಾರೀ ಮಳೆಯಿಂದಾಗಿ ಮತಗಟ್ಟೆ ಸಿಬ್ಬಂದಿ ಹಲವು ಕೇಂದ್ರಗಳಿಗೆ ತೆರಳಲು ಪರದಾಡುತ್ತಿದ್ದಾರೆ.

ಓದಿ: ಮಹಾ ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, 56 ಮಂದಿ ಸಾವು, ಹಲವರು ನಾಪತ್ತೆ: ಫೋಟೋಗಳು - Brazil Flood

ETV Bharat Logo

Copyright © 2024 Ushodaya Enterprises Pvt. Ltd., All Rights Reserved.