ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಸ್ಪರ್ಧೆ ಕೇವಲ ಚರ್ಚೆ ಮಾತ್ರ: ಶಾಸಕ ಮುನವಳ್ಳಿ
ಗಂಗಾವತಿ: ಸ್ವತಂತ್ರ ಪಕ್ಷ ಸ್ಥಾಪಿಸುವ ಮೂಲಕ ಹಾಗೂ ಗಂಗಾವತಿ ಕ್ಷೇತ್ರದಿಂದಲೇ ಕಣಕ್ಕಿಳಿದು ರಾಜಕೀಯದ 2ನೇ ಇನ್ನಿಂಗ್ಸ್ ಆರಂಭಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಆಪ್ತ ಸ್ನೇಹಿತ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿ ರೆಡ್ಡಿಗೆ ಕಡಿವಾಣ ಹಾಕಲು ಬಿಜೆಪಿ ಮುಂದಾಗಿದೆ ಎಂಬ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ಮತಗಳ ವಿಭಜನೆಗೆ ಕಾರಣವಾಗುವ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆಗೆ ಮುಂದಾಗಿದೆ ಎನ್ನಲಾಗಿದೆ.
ಈ ಬಗ್ಗೆ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್ ಏನೇ ನಿರ್ಧಾರ ತಳೆದರೂ ಅದಕ್ಕೆ ನಾನು ಬದ್ಧ. ಜನಾರ್ದನ ರೆಡ್ಡಿ ವಿರುದ್ಧ ರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಚಿಂತನೆ ಕೇವಲ ಚರ್ಚೆ ಮಾತ್ರ. ಮುಂದಿನ 3 ತಿಂಗಳುಗಳ ಕಾಲ ಕೇವಲ ಚರ್ಚೆಗಳೇ ನಡೆಯುತ್ತವೆ. ಆದರೆ ಅವು ಅಂತಿಮವಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಸಹಜ ಪ್ರಕ್ರಿಯೆ. ಟಿಕೆಟ್ ಘೋಷಣೆಯಾಗಿ ಅಭ್ಯರ್ಥಿಗಳು ಅಂತಿಮವಾಗುವವರೆಗೂ ನಾನಾ ಚರ್ಚೆ ನಡೆಯುತ್ತಿರುತ್ತವೆ. ಇದರಲ್ಲಿ ರೆಡ್ಡಿ-ರಾಮುಲು ಸ್ಪರ್ಧೆಯೂ ಇರಬಹುದು. ನಾನು 2023ರ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದ ಪ್ರಬಲ ಅಕಾಂಕ್ಷಿಯಾಗಿದದೇನೆ. ಆದರೆ ಪಕ್ಷ ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧ ಎಂದು ಹೇಳಿದರು.
ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅತ್ತಿಂದಿತ್ತ ಪಕ್ಷಾಂತರ ಮಾಡುವುದು ಸಹಜ. ಈ ಬಗ್ಗೆ ನಾನು ಹೆಚ್ಚು ತಲೆಕೆಸಿಕೊಳ್ಳಲಾರೆ. ನಮ್ಮ ಬಿಜೆಪಿಯ ಬಹಳಷ್ಟು ಜನ ರೆಡ್ಡಿಯ ಕೆಆರ್ಪಿಪಿ(ಕಲ್ಯಾಣ ರಾಜ್ಯ ಪ್ರಗತಿ ಪಕ್ಷ)ಗೆ ಸೇರ್ಪಡೆಯಾಗಿದ್ದಾರೆ ಎಂಬ ವದಂತಿ ಸೃಷ್ಟಿಸಲಾಗಿದೆ. ಆದರೆ ಕೇವಲ ನಾಲ್ಕೈದು ಜನ ಬಿಟ್ಟರೆ ಬೇರೆ ಯಾರೂ ಪ್ರಮುಖ ನಾಯಕರು ರೆಡ್ಡಿಯ ಪಕ್ಷಕ್ಕೆ ಹೋಗಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿರುವುದರಿಂದ ಯಾರು ಎಲ್ಲಿಯಾದರೂ ಸ್ಪರ್ಧಿಸುವ ಮುಕ್ತ ಅವಕಾಶವಿದೆ ಎಂದರು.
ಇದನ್ನೂ ಓದಿ: ನಾನು ಯಾರ ಕೈ ಹಿಡಿಯುತ್ತೇನೆ ಅನ್ನೋದು ಮೇ ಚುನಾವಣೆ ನಂತರ ಗೊತ್ತಾಗಲಿದೆ: ಜನಾರ್ದನ ರೆಡ್ಡಿ