ETV Bharat / sukhibhava

ಭಾರತೀಯ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಧುಮೇಹ: ಕಾರಣ, ಲಕ್ಷಣ, ಪರಿಹಾರ ಹೀಗಿದೆ..

author img

By ETV Bharat Karnataka Team

Published : Nov 10, 2023, 11:55 AM IST

ಈ ಹಿಂದೆಲ್ಲಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಧುಮೇಹ ಇಂದು ಯುವ ಜನತೆಯನ್ನು ತೀವ್ರವಾಗಿ ಬಾಧಿಸುತ್ತಿದೆ.

type 2 diabetes increasing in young Indians due to life style
type 2 diabetes increasing in young Indians due to life style

ನವದೆಹಲಿ: ಜಾಗತಿಕವಾಗಿ ಅದ್ರಲ್ಲೂ ವಿಶೇಷವಾಗಿ ಭಾರತೀಯ ಯುವ ಜನತೆಯಲ್ಲಿ ಟೈಪ್​ 2 ಮಧುಮೇಹಕ್ಕೆ ಪ್ರಮುಖ ಕಾರಣ ಶೂನ್ಯ ವ್ಯಾಯಾಮ ಮತ್ತು ಜಂಕ್​ ಆಹಾರಗಳ ಸೇವನೆ. ಕಳೆದ 10 ವರ್ಷಗಳಿಂದ ಯುವಜನರಲ್ಲಿ ಬದಲಾದ ಜೀವನ ಶೈಲಿಯು ಮಧುಮೇಹದ ಉಲ್ಬಣಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನವೆಂಬರ್​ 14ರಂದು ವಿಶ್ವ ಮಧುಮೇಹ ದಿನಾಚರಿಸಲಾಗುವುದು. ಈ ದಿನದಂದು ರಕ್ತದ ಸಕ್ಕರೆ ಮಟ್ಟದ ಹೆಚ್ಚುವಿಕೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತದೆ. ಇತ್ತೀಚಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಇಂಡಿಯಾ ಡಯಾಬಿಟೀಸ್​ (ಐಸಿಎಂಆರ್​-ಐಎನ್​ಡಿಐಎಬಿ) ಅಧ್ಯಯನದಲ್ಲಿ 10ನೇ ಒಂದು ಭಾಗದಷ್ಟು ಭಾರತೀಯರು ಮಧುಮೇಹ ಹೊಂದಿರುವುದಾಗಿ ತಿಳಿದುಬಂದಿದೆ. ಭಾರತದಲ್ಲಿ 101 ಮಿಲಿಯನ್​ ಮಂದಿ ಮಧುಮೇಹದಿಂದ ಬಳಲುತ್ತಿದ್ದು, 136 ಮಿಲಿಯನ್​ ಮಂದಿ ಪೂರ್ವ ಮಧುಮೇಹ ಹೊಂದಿದ್ದಾರೆ. ಈ ದೀರ್ಘಕಾಲದ ಆರೋಗ್ಯ ಸವಾಲಿನ ಸಮಸ್ಯೆಯು ಹೃದಯ ರಕ್ತನಾಳ ವ್ಯವಸ್ಥೆ, ಕಿಡ್ನಿ ಮತ್ತು ಇತರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಟೈಪ್​ 2 ಮಧುಮೇಹದ ಲಕ್ಷಣಗಳು: ಪದೆ ಪದೇ ಮೂತ್ರ ವಿಸರ್ಜನೆ, ಬಾಯಾರಿಕೆ, ಅಧಿಕ ಹಸಿವು, ಅನಿರೀಕ್ಷಿತ ತೂಕ ನಷ್ಟ, ದೀರ್ಘ ಆಲಸ್ಯ, ಮಂದ ದೃಷ್ಟಿ, ಗಾಯ ನಿಧಾನವಾಗಿ ಮಾಸುವಿಕೆ ಮತ್ತು ಸೋಂಕು. ಈ ಲಕ್ಷಣಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸೂಚಿಸಬಹುದು. ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಸೂಕ್ತ. ಮಧುಮೇಹದ ಅಪಾಯ ತಡೆಯಲು ರೋಗದ ಆರಂಭಿಕ ಪತ್ತೆ ಮತ್ತು ನಿರ್ವಹಣೆ ಅತ್ಯಗತ್ಯ ಎಂದು ಫರಿದಾಬಾದ್​ನ ಅಮೃತ್​ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಮೋಹಿತ್​ ಶರ್ಮಾ ತಿಳಿಸಿದ್ದಾರೆ.

ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಈ ಹಿಂದೆ ನಾವು ಕೇವಲ ವಯಸ್ಸಾದ ಮಂದಿಯಲ್ಲಿ ಮಾತ್ರ ಮಧುಮೇಹ ಕಾಣುತ್ತಿದ್ದೆವು. ಆದರೀಗ ಯುವ ಜನರಲ್ಲೂ ಮಧುಮೇಹ ಕಾಣುತ್ತಿದ್ದೇವೆ ಎಂದು ಗುರುಗ್ರಾಮ್​ನ ಸಿ.ಕೆ.ಬಿರ್ಲಾ ಆಸ್ಪತ್ರೆಯ ಇಂಟರ್ನಲ್​ ಮೆಡಿಸಿನ್​ ಮುಖ್ಯ ಕನ್ಸಲ್ಟಂಟ್​ ಡಾ.ತುಶಾರ್​​ ತಯಲ್​ ಹೇಳಿದರು.

ಯುವ ಜನತೆಯಲ್ಲಿಂದು ಮಧುಮೇಹ ಉಲ್ಬಣಕ್ಕೆ ಪ್ರಮುಖ ಕಾರಣ ಜೀವನ ಶೈಲಿ. ಇಂದು ನಾವು ಕಡಿಮೆ ವ್ಯಾಯಾಮ ಮಾಡುತ್ತಿದ್ದು, ಹೆಚ್ಚಾಗಿ ಜಂಕ್​ಫುಡ್​ ಸೇವನೆ ಮಾಡುತ್ತಿದ್ದೇವೆ. ರಿಫೈಂಡ್​ ಸಮೃದ್ಧ ಹಿಟ್ಟು ಮತ್ತು ಸಕ್ಕರೆ ಮತ್ತು ಅಧಿಕ ಮಟ್ಟದ ಟ್ರಾನ್ಸ್​ ಕೊಬ್ಬಿನ ಸೇವನೆ ಮಾಡುತ್ತಿದ್ದೇವೆ ಎಂದರು.

ಹಲವು ಆರೋಗ್ಯ ಸಮಸ್ಯೆಗಳು: ಟೈಪ್​ 2 ಮಧುಮೇಹ ಹೃದಯರಕ್ತನಾಳದ ವ್ಯವಸ್ಥೆ ಮೇಲೆ ಗಮನಾರ್ಹ ಪರಿಣಾಮ ಹೊಂದಿದೆ. ಹೃದಯಾಘಾತ, ಅಂಜಿನಾ, ದಿಢೀರ್​ ಹೃದಯ ಸಾವು, ಹೃದಯ ವೈಫಲ್ಯ, ಸ್ಟ್ರೋಕ್​, ಅಪಧಮನಿ ರೋಗ ಅಪಾಯ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದು ಮೂತ್ರಪಿಂಡದ ಮೇಲೂ ಅಡ್ಡ ಪರಿಣಾಮ ಬೀರುತ್ತದೆ.

ಯುವಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಗರ್ಭಾವಸ್ಥೆ ಮಧುಮೇಹ ಮತ್ತು ಅವಧಿಗೆ ಮುನ್ನ ಪ್ರೌಢವಸ್ಥೆಗೆ ತಲುಪುವುದನ್ನು ಕಾಣಬಹುದು. ಜನಾಂಗೀಯ, ಅಲ್ಪಸಂಖ್ಯಾತರು, ಕಡಿಮೆ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಜನರು ಹೆಚ್ಚಾಗಿ ಇಂತಹ ನಗರ ಪರಿಸರಕ್ಕೆ ಒಡ್ಡಿಕೊಳ್ಳುವುದು ಸಹ ಇದರ ದರ ಹೆಚ್ಚಲು ಕಾರಣ ಎನ್ನುತ್ತಾರೆ ವೈದ್ಯರು.

ಪರಿಹಾರವೇನು? ಶಿಸ್ತುಬದ್ಧ ಜೀವನಶೈಲಿಗಳು ಇಂತಹ ಅಪಾಯದಿಂದ ದೂರಾಗಲು ಇರುವ ಪರಿಹಾರ. ವಾರಕ್ಕೆ ಕನಿಷ್ಟ 150 ನಿಮಿಷ ವ್ಯಾಯಾಮ ಅಥವಾ ನಿತ್ಯ 30 ನಿಮಿಷದ ವೇಗದ ನಡಿಗೆ, ಸೈಕಲಿಂಗ್​, ಜಾಗಿಂಗ್​, ರನ್ನಿಂಗ್​, ಸ್ವಿಮ್ಮಿಂಗ್​ ತಪ್ಪದೆ ರೂಢಿಸಿಕೊಳ್ಳುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡಿದ್ದಾರೆ. ಇದರ ಜೊತೆಗೆ ಆರೋಗ್ಯಯುತ ತಿನ್ನುವ ಅಭ್ಯಾಸ ಮತ್ತು ರಿಫೈಂಡ್​ ಹಿಟ್ಟು ಮತ್ತು ಸಕ್ಕರೆ, ಟ್ರಾನ್ಸ್​ ಕೊಬ್ಬಿನಿಂದ ದೂರ ಇರುವಂತೆಯೂ ಸಲಹೆ ನೀಡುತ್ತಾರೆ. (ಐಎಎನ್​ಎಸ್​)

ಇದನ್ನೂ ಓದಿ: ವ್ಯಾಯಾಮ ಮಾಡಿದ್ದರಷ್ಟೇ ಸಾಲದು; ಈ ರೀತಿ ತಿಂದ್ರೆ ಮಾತ್ರ ಫಿಟ್​ ಆಗಿರಬಹುದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.