ETV Bharat / state

ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ: ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಚಿಕ್ಕೋಡಿ ಕರವೇ ಕಾರ್ಯಕರ್ತರು

author img

By ETV Bharat Karnataka Team

Published : Oct 1, 2023, 9:40 PM IST

Updated : Oct 1, 2023, 10:56 PM IST

ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳು ವಿಭಿನ್ನವಾಗಿ ನಡೆಯುತ್ತಿವೆ.

ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳು
ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳು

ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ

ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕಿಚ್ಚು ಆರುವ ಲಕ್ಷಣಗಳು ಕಾಣುತ್ತಿಲ್ಲ. ಇಂದು (ಭಾನುವಾರ) ಕೂಡ ರೈತಪರ ಸಂಘಟನೆಗಳು ವಿನೂತನವಾಗಿ ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಕಾವೇರಿ ನದಿಗೆ ಎಳ್ಳು, ಜೀರಿಗೆ ಬಿಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮತ್ತೊಂದೆಡೆ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಡೆಸುತ್ತಿರುವ ಧರಣಿಯೂ ಮುಂದುವರೆದಿತ್ತು. ಭೋವಿ ಸಮಾಜದ ಮುಖಂಡರು ಸೇರಿದಂತೆ ಹಲವಾರು ಸಂಘಟನೆಗಳು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದವು.

ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವವರೆಗೂ ಯಾವುದೇ ಕಾರಣಕ್ಕೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ಮಾಡಲು ಬಿಡುವುದಿಲ್ಲ. ನಮ್ಮನ್ನು ಬಂಧಿಸಿದರೂ ಕೂಡ ಸಂಘಟನೆಗಳು ಒಮ್ಮತದಿಂದ ಇದ್ದೇವೆ. ಈ ಹಿಂದೆ ನಮ್ಮ ಸಂಘಟನೆಗಳೇ ಸೇರಿಕೊಂಡು ದಸರಾ ಮಾಡಿರುವಂತೆ ಮತ್ತೊಮ್ಮೆ ಮಾಡುತ್ತೇವೆ. ಹೋರಾಟ ಮಾತ್ರ ನಿಲ್ಲಿಸುವುದಿಲ್ಲ ಎಂದು ರೈತ ಮುಖಂಡ ಕೃಷ್ಣೇಗೌಡ ಎಚ್ಚರಿಕೆ ನೀಡಿದರು.

ತಮಿಳುನಾಡಿಗೆ ಕಾವೇರಿ ನೀರನ್ನು ರಾಜ್ಯ ಸರ್ಕಾರ ಕದ್ದು ಮುಚ್ಚಿ ಬಿಟ್ಟಿರುವುದನ್ನು ಖಂಡಿಸಿ ಕಾವೇರಿ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನೆ ವೇದಿಕೆಗೆ ನಮ್ಮ ಭೋವಿ ಸಮಾಜದವರು ಬಂದು ನಾವು ಹೋರಾಟ ಮಾಡಿದ್ದೇವೆ. ಇನ್ನು ಮುಂದೆಯೂ ಸಹ ನೀರು ನಿಲ್ಲುವವರೆಗೂ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದು ಬೋವಿ ಸಮಾಜದ ಅಧ್ಯಕ್ಷ ಗುರುವಪ್ಪ ಹೇಳಿದರು.

ಪ್ರಧಾನಿ ಮೋದಿಗೆ ಅವರಿಗೆ ರಕ್ತದಲ್ಲಿ ಪತ್ರ ಬರೆದ ಕರವೇ ಕಾರ್ಯಕರ್ತರು
ಪ್ರಧಾನಿ ಮೋದಿಗೆ ಅವರಿಗೆ ರಕ್ತದಲ್ಲಿ ಪತ್ರ ಬರೆದ ಕರವೇ ಕಾರ್ಯಕರ್ತರು

ಪ್ರಧಾನಿಗೆ ರಕ್ತದಲ್ಲಿ ಪತ್ರ: ಕರ್ನಾಟಕದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬಾರದು ಎಂದು ಹಾಗೂ ಕಾವೇರಿ ವಿಚಾರದಲ್ಲಿ ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಚಿಕ್ಕೋಡಿ ಕರವೇ ಕಾರ್ಯಕರ್ತರು ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಇಂಥ ಸಮಯದಲ್ಲಿ ಅನ್ಯರಿಗೆ ನಾವು ನೀರು ಸರಬರಾಜು ಮಾಡುವುದು ಎಷ್ಟು ಸರಿ? ಇಲ್ಲಿ ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ದಕ್ಕೆ ಕಾವೇರಿ ತೀರದ ರೈತರು ಆತಂಕ ಪಡುವಂತಾಗಿದೆ. ಇದರಿಂದ ಕಾವೇರಿ ನೀರು ಉಳಿವಿಗಾಗಿ ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಕಷ್ಟ ಸೂತ್ರ ರಚಿಸುವಂತೆ ಒತ್ತಾಯಿಸಿ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇವೆ. ನಾವು ಕೃಷ್ಣ ನದಿ ತೀರದ ರೈತರಾದರೂ ಕಾವೇರಿ-ಕೃಷ್ಣ ನದಿಗಳು ಕರ್ನಾಟಕ ಎರಡು ಕಣ್ಣುಗಳಿದ್ದ ಹಾಗೆ. ಪ್ರಧಾನಿ ಮಧ್ಯಸ್ಥಿಕೆ ವಹಿಸಿ ನಮಗೆ ನ್ಯಾಯ ಕೊಡಬೇಕು ಆಗ್ರಹಿಸಿದರು.

ಇದನ್ನೂ ಓದಿ: ಕಾವೇರಿ ಸಮಸ್ಯೆಗೆ 'ಸಂಕಷ್ಟ ಸೂತ್ರ'ವೊಂದೇ ಶಾಶ್ವತ ಪರಿಹಾರ: ಎಸ್.ಎಂ.ಕೃಷ್ಣ

Last Updated :Oct 1, 2023, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.