ETV Bharat / state

ಭಗವದ್ಗೀತೆಯನ್ನು ನಮ್ಮ ಕುಟುಂಬದಲ್ಲೇ ಹೇಳಿಕೊಡಲಾಗುತ್ತದೆ: ಹೆಚ್​ಡಿಕೆ

author img

By

Published : Mar 19, 2022, 7:45 AM IST

ಭಗವದ್ಗೀತೆಯನ್ನು ಕುಟುಂಬದಲ್ಲೇ ನಮ್ಮ ತಂದೆ - ತಾಯಿ, ಹಿರಿಯರು ಹೇಳಿಕೊಡುತ್ತಾರೆ. ಸರ್ಕಾರದ ಕೆಲಸ ಏನಿದ್ದರೂ ಉತ್ತಮ ಶಿಕ್ಷಣ ನೀಡಿ ಮಕ್ಕಳ ಬದುಕನ್ನು ಕಟ್ಟಿ ಕೊಡುವುದು ಎಂದು ಹೆಚ್‌.ಡಿ ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ

ಹಾಸನ: ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯನ್ನು ಕುಟುಂಬದಲ್ಲೇ ನಮ್ಮ ತಂದೆ-ತಾಯಿ, ಹಿರಿಯರು ಹೇಳಿಕೊಡುತ್ತಾರೆ. ಸರ್ಕಾರದ ಕೆಲಸ ಏನಿದ್ದರೂ ಉತ್ತಮ ಶಿಕ್ಷಣ ನೀಡಿ ಮಕ್ಕಳ ಬದುಕು ಕಟ್ಟಿ ಕೊಡುವುದು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಂತಹ ವಿಚಾರಗಳು ಪಠ್ಯಗಳಲ್ಲಿ, ಶಾಲೆಗಳಲ್ಲಿ ಇರಬೇಕು ಎಂದರು.

ಹಿಂದೂ ಬಂಧುಗಳಲ್ಲಿ ಮನವಿ: ನಾನು ಹಿಂದೂ ಬಂಧುಗಳಲ್ಲಿ ಮನವಿ ಮಾಡುತ್ತೇನೆ. ನಾವು ಹುಟ್ಟಿರುವುದು ಹಿಂದೂ ಕುಟುಂಬದಲ್ಲೇ. ನಮ್ಮ ಕುಟುಂಬ ದೈವದಲ್ಲಿ ಬಹಳ ನಂಬಿಕೆ ಇಟ್ಟು ಶ್ರದ್ಧೆಯಿಂದ ನಡೆದುಕೊಳ್ಳುತ್ತಿರುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ನಮ್ಮ ಮಕ್ಕಳಿಗೆ ಬೇಕಿರುವುದು ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಶಿಕ್ಷಣ. ಮೊದಲು ಆ ಕಡೆ ಗಮನ ಕೊಡಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಕೇವಲ ಮತ ಬ್ಯಾಂಕ್‌ಗಾಗಿ ಇಂತಹ ಸೂಕ್ಷ್ಮ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಒಂದು ಕಾಲದಲ್ಲಿ ವಿದ್ಯೆ ಎನ್ನುವುದು ಒಂದು ವರ್ಗಕ್ಕೆ ಮಾತ್ರ ಸೇರಿದ್ದು ಎನ್ನುವ ವಾತಾವರಣ ಇತ್ತು. ಇಂದು ಅದೇ ವರ್ಗದ ಜನರು ಈ ರೀತಿಯ ವಾತಾವರಣವನ್ನು ಎಲ್ಲರ ಮೇಲೂ ಹೇರಲು ಹೊರಟಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಏನನ್ನೂ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಮೊದಲು ಅವುಗಳನ್ನು ಸರಿ ಮಾಡಬೇಕು. ಇದನ್ನು ಬಿಟ್ಟು ಸೂಕ್ಷ್ಮ ವಿಷಯಗಳನ್ನು ಕೆದಕಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲಾಗುತ್ತಿದೆ. ಶಾಲಾ ಮಕ್ಕಳ ಮನಸ್ಸು ಪರಿಶುದ್ಧ ಹಾಲಿನಂತಹದ್ದು, ಆ ಮನಸ್ಸನ್ನು ಕಲುಷಿತಗೊಳಿಸಬೇಡಿ ಎಂದರು.

ನನ್ನ ಹೇಳಿಕೆ ತಿರುಚಿದ್ದಾರೆ: ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ನನ್ನ ಹೇಳಿಕೆಯನ್ನು ವ್ಯಾಟ್ಸ್​ಆ್ಯಪ್​​​ನಲ್ಲಿ ತಿರುಚಿದ್ದಾರೆ. ನಾನು ಎಲ್ಲೂ ಸಹ ವೈಯುಕ್ತಿಕವಾಗಿ ಹಿಜಾಬ್ ಬಗ್ಗೆ ಚರ್ಚೆ ಮಾಡಿಲ್ಲ. ಹೈಕೋರ್ಟ್ ತೀರ್ಪಿಗೆ ನಾವೆಲ್ಲರೂ ತಲೆ ಭಾಗಿ ಸ್ವೀಕರಿಸಬೇಕು ಎಂದು ಹೇಳಿದ್ದೇನೆ ಎಂದರು. ಒಂದು ಕಾಲದಲ್ಲಿ ಒಂದು ವರ್ಗದಲ್ಲಿ ಯಾರಾದರೂ ತೀರಿಕೊಂಡರೆ ತಲೆ ಬೋಳಿಸಿ, ಬಳೆ ಒಡೆದು, ತಲೆಗೆ ಸೆರಗು ಹಾಕಿಕೊಂಡು ಇರಬೇಕು ಎಂಬ ಮೌಢ್ಯ ತಂದಿದ್ದರು. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟಾಗ ಆ ಮೌಲ್ಯಗಳೆಲ್ಲ ಹೋದವು. ಈಗ ಹಿಜಾಬ್ ವಿಷಯ ಇಟ್ಟುಕೊಂಡು ಕೆಲವರು ರಾಜಕಾರಣ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.