ETV Bharat / state

ನಾವು ಮಾಡಿರುವ ಕೆಲಸ ನೋಡಿ ಕಾಂಗ್ರೆಸ್​ನವರಿಗೆ ಹೊಟ್ಟೆ ಉರಿ: ಸಿ.ಟಿ. ರವಿ

author img

By ETV Bharat Karnataka Team

Published : Jan 4, 2024, 11:30 AM IST

ನಾವು ಮಾಡಿರುವ ಕೆಲಸಗಳನ್ನು ನೋಡಿ ಕಾಂಗ್ರೆಸ್​ನವರು ಈಗ ಹೊಟ್ಟೆಯುರಿಯಿಂದ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ ಟಿ ರವಿ ಟೀಕಿಸಿದ್ದಾರೆ.

Former MLA C T Ravi
ಮಾಜಿ ಶಾಸಕ ಸಿ. ಟಿ. ರವಿ

ಮಾಜಿ ಶಾಸಕ ಸಿ. ಟಿ. ರವಿ

ಚಿಕ್ಕಮಗಳೂರು: "ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನಸ್ಸಿಲ್ಲದವರು, ಅದು ಧಾರ್ಮಿಕ ಕಾರ್ಯಕ್ರಮವಲ್ಲ, ಪಕ್ಷದ ಕಾರ್ಯಕ್ರಮ ಎನ್ನುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅನ್ಯಾಯ, ಸುಳ್ಳು, ಮೋಸಗಳು ಧರ್ಮವಲ್ಲ. ಅದು ಧಾರ್ಮಿಕ ಕಾರ್ಯಕ್ರಮ ಅಲ್ಲ ಅಂತ ಅವರಿಗೇಕೆ ಅನ್ನಿಸಿತು?" ಎಂದು ಮಾಜಿ ಶಾಸಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಮುಖಂಡ ಬಿ.ಕೆ. ಹರಿಪ್ರಸಾದ್​ ಅವರ ಹೇಳಿಕೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ದೇವರು ಅವಕಾಶ ನೀಡಿದಾಗ ಸತ್ಯವನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಅವರು ಮಾಡಿಲ್ಲ. ನಾವು ಇಷ್ಟೆಲ್ಲ ಮಾಡಿದ್ದನ್ನು ನೋಡಿ ಈಗ ಅವರಿಗೆ ಹೊಟ್ಟೆ ಉರಿಯಾಗುತ್ತಿದೆ. ಈ ಕೆಲಸವನ್ನು ಅವರೇ ಮಾಡುತ್ತಿದ್ದರೆ ಅವರೇ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತಿದ್ದರು. ಆದರೆ ಅದನ್ನು ಅವರು ಮಾಡಲಿಲ್ಲ" ಎಂದು ಹೇಳಿದರು.

"ಆಗ ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ 50 ಎಕರೆ ಜಾಗ ನೀಡಿದ್ದರೆ, ಅಂಬೇಡ್ಕರ್​ ಅವರಿಗೆ ಅಪಮಾನ ಮಾಡಿದ್ರು ಅಂತ ಹೇಳಿಸಿಕೊಳ್ಳುವ ಪ್ರಶ್ನೆಯೇ ಬರುತ್ತಿರಲಿಲ್ಲ. ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆಯನ್ನು ಅವರೇ ನಿಂತು ಬಗೆಹರಿಸಿದ್ದರೆ, ನಾವು ಕರಸೇವೆ ಹಾಗೂ ಹೋರಾಟ ಮಾಡಬೇಕಾದಂತಹ ಅವಶ್ಯಕತೆಯೇ ಬರುತ್ತಿರಲಿಲ್ಲ. ಕಾಶಿ ಕಾರಿಡಾರ್ ಅನ್ನು ಅವರೇ ನಿರ್ಮಾಣ ಮಾಡಿ ಗಂಗಾರತಿ ಮಾಡಿದ್ದರೆ, ಮೋದಿ ಅವರು ಹಿಂದೂ ಹೃದಯ ಸಾಮ್ರಾಟ್ ಅಂತ ಕರೆಸಿಕೊಳ್ಳುತ್ತಿರಲಿಲ್ಲ. ಜವಾಹರ್​ ಲಾಲ್​ ನೆಹರೂ ಅವರೇ ಹಿಂದೂ ಹೃದಯ ಸಾಮ್ರಾಟ್ ಆಗಬಹುದಿತ್ತು. ಆದರೆ ಅದ್ಯಾವುದನ್ನೂ ಅವರು ಮಾಡಲಿಲ್ಲ" ಎಂದರು.

ಕೇಸ್​ ರಿ-ಓಪನ್​ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪು ಮಾಡಿದವರನ್ನು ಬಿಡೋದಕ್ಕೆ ಆಗುತ್ತಾ ಎಂದು ಹೇಳಿದ್ರು, ಆದರೆ ಡಿಜೆ ಹಳ್ಳಿ- ಕೆಜೆ ಹಳ್ಳಿಗೆ ಬೆಂಕಿ ಹಾಕಿದವರ ಬಿಡಿ ಎಂದು ನಿಮ್ಮ ಮಂತ್ರಿಯೇ ಶಿಫಾರಸು ಮಾಡಿದ್ದಾರಲ್ಲ. ಮೈಸೂರಿನಲ್ಲಿ ಗಲಭೆ ಮಾಡಿದ ಎಸ್​ಡಿಪಿಐ ಹಾಗೂ ಪಿಎಫ್​ಐ ಮೇಲಿದ್ದ ಕೇಸ್​ಗಳನ್ನು ನಿಮ್ಮ ಸರ್ಕಾರವೇ ವಿತ್ ​ಡ್ರಾ ಮಾಡಿಕೊಂಡಿತ್ತಲ್ಲ. ಅವರು ತಪ್ಪು ಮಾಡಿದವರು ಎಂದು ಅನ್ನಿಸಲಿಲ್ಲವೇ ಸಿದ್ದರಾಮಯ್ಯನವರೇ? ನಿಮ್ಮದು ಪೂರ್ವಾಗ್ರಹ ಪೀಡಿತ ಮನಸ್ಥಿತಿಯಾ? ಅದಕ್ಕೆ ಹೀಗೆ ಮಾತನಾಡ್ತಿದ್ದೀರಾ? ಎಂದು ಸಿ.ಟಿ. ರವಿ ಪ್ರಶ್ನಿಸಿದರು.

ಇದನ್ನೂ ಓದಿ: ಗೋಧ್ರಾ ಘಟನೆ ಕುರಿತು ಬಿ ಕೆ ಹರಿಪ್ರಸಾದ್ ನೀಡಿರುವ ಹೇಳಿಕೆ ವಿರುದ್ಧ ಕಾನೂನು ಹೋರಾಟ: ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.