ETV Bharat / state

ಭೂಸ್ವಾಧೀನ ಪರಿಹಾರ ಅಕ್ರಮ ಆರೋಪ: ನಿರಾಣಿ-ಮರಿತಿಬ್ಬೇಗೌಡ ನಡುವೆ ಜಟಾಪಟಿ

author img

By

Published : Feb 21, 2023, 2:09 PM IST

Murugesh nirani vs Maritibbe Gowda
ನಿರಾಣಿ-ಮರಿತಿಬ್ಬೇಗೌಡ ನಡುವೆ ಜಟಾಪಟಿ

ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬಿಎಂಆರ್​ಸಿಎಲ್​ಗೆ ಹಂಚಿಕೆ ಮಾಡಿ 22 ಕೋಟಿ ರೂ. ಪರಿಹಾರ ಕೊಡಲಾಗಿದೆ. 12 ಗುಂಟೆ ಬಿಡಿಎ ಆಸ್ತಿಗೆ ಖಾಸಗಿ ವ್ಯಕ್ತಿಗೆ 22 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದರು.

ಬೆಂಗಳೂರು: ಭೂಸ್ವಾಧೀನ ಪರಿಹಾರ ಅಕ್ರಮ ವಿಚಾರದ ಕುರಿತು ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ಎಂಬ ಮರಿತಿಬ್ಬೇಗೌಡ ಹೇಳಿಕೆಗೆ ಕೈಗಾರಿಕಾ ಸಚಿವ ನಿರಾಣಿ ತಿರುಗೇಟು ನೀಡಿದರು. ಸರಿಯಾಗಿ ಮಾತನಾಡಿ, ಅರಚಾಡಬೇಡಿ. ನಾನು ಉತ್ತರ ಕರ್ನಾಟಕದವನು. ನಿಮಗಿಂತ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲ ಸೃಷ್ಟಿಯಾಯಿತು.

ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬಿಎಂಆರ್​ಸಿಎಲ್​ಗೆ ಹಂಚಿಕೆ ಮಾಡಿ 22 ಕೋಟಿ ರೂ. ಪರಿಹಾರ ಕೊಡಲಾಗಿದೆ. 12 ಗುಂಟೆ ಬಿಡಿಎ ಆಸ್ತಿಗೆ ಖಾಸಗಿ ವ್ಯಕ್ತಿಗೆ 22 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದರು.

ಅವ್ಯವಹಾರ ನಡೆದಿಲ್ಲ: ಇದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಹೋಬಳಿಯಲ್ಲಿ 32 ಗುಂಟೆ ಸ್ವಾಧೀನ, ಕಟ್ಟಡಗಳಿದ್ದ ಕಾರಣ 12 ಗುಂಟೆಯನ್ನು ಸ್ವಾಧೀನದಿಂದ ಕೈಬಿಡಲಾಗಿತ್ತು. 15 ವರ್ಷವಾದರೂ ಭೂಮಿ ಕಳೆದುಕೊಂಡ ವ್ಯಕ್ತಿಗೆ ಪರಿಹಾರ ಸಿಕ್ಕಿಲ್ಲ. ಸ್ವಾಧೀನಪಡಿಸಿಕೊಂಡ ಜಮೀನು ಸ್ವಾಧೀನವಾಗದೇ ಇದ್ದಲ್ಲಿ ಸ್ವಾಧೀನ ಪ್ರಕ್ರಿಯೆ ರದ್ದಾಗಲಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡು ಪರಿಹಾರ ನೀಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ನಿಮಗೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸಚಿವ ನಿರಾಣಿ ಸರಿಯಾಗಿ ಮಾತನಾಡಿ, ಅರಚಾಡಬೇಡಿ. ಇವರ ಯೋಗ್ಯತೆಗೆ ನಾಚಿಕೆಯಾಗಬೇಕು ಎಂದರು. ಅಲ್ಲಿಗೆ ಚರ್ಚೆ ಸ್ಥಗಿತಗೊಳಿಸಿ ಸಭಾಪತಿಗಳು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು.

ಉತ್ತರ ಖಂಡಿಸಿ ಮರಿತಿಬ್ಬೇಗೌಡ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಧ್ಯಪ್ರವೇಶ ಮಾಡಿ ಸಚಿವರು ಉತ್ತರ ಕೊಡುತ್ತಿದ್ದಾರೆ ಮಾತನಾಡಲು ಬಿಡಿ ಎಂದರು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಾನು ಅನುಮತಿ ನೀಡಲ್ಲ. ಬಾಯಿ ಇದೆ ಎಂದು ಮನಸ್ಸಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಸದನ ನಡೆಸಬೇಕೋ ಬೇಡವೋ? ಬೇರೆ ಸದಸ್ಯರಿಲ್ಲವೆ?, ನೀವು ಹೇಳಿದಂತೆ ಸದನ ನಡೆಸಲು ಸಾಧ್ಯವಿಲ್ಲ ಎಂದರು.

ಈ ವೇಳೆ ಸರ್ಕಾರದ ಮುಖ್ಯ ಸಚೇತಕ ನಾರಾಯಣಸ್ವಾಮಿ ಅವಕಾಶ ಕೊಡಬೇಡಿ ಎಂದರು. ಇದಕ್ಕೆ ಕಿಡಿಕಾರಿದ ಹರಿಪ್ರಸಾದ್ ನೀವು ಅಧ್ಯಕ್ಷರಾ? ಬೇಡ ಎನ್ನಲು ನೀವು ಯಾರು? ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ, ನಿರ್ಧಾರ ಪ್ರಕಟಿಸಿದ್ದೇನೆ ಎಂದು ಸಭಾಪತಿಗಳು ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಪುಟ್ಟಣ್ಣ- ಇದು ನಮ್ಮ ಸರ್ಕಾರದ ಕಾಲದಲ್ಲಿ ಆಗಿಲ್ಲ. ಹಿಂದಿನ ಕಾಲದಲ್ಲಿ ಆಗಿದೆ ಎಂದು ಸಚಿವರು ಹೇಳಿದ್ದಾರೆ. ಹಾಗಾಗಿ ತನಿಖೆ ಮಾಡಿಸಿ ಎಂದರು. ಇದನ್ನು ತಳ್ಳಿಹಾಕಿದ ಸಭಾಪತಿಗಳು, ನಾನು ಮುಂದಿನ ಪ್ರಶ್ನೆ ಕರೆದಿದ್ದೇನೆ. ನನ್ನ ನಿರ್ಧಾರದಲ್ಲಿ ಬದಲಿಲ್ಲ. ಬೇರೆ ರೂಪದಲ್ಲಿ ಕೊಡಿ ಪರಿಗಣಿಸಲಾಗುತ್ತದೆ. ನಾಳೆ ನಾಡಿದ್ದರಲ್ಲಿ ಪರಿಗಣನೆ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟರು.

ಇದನ್ನೂ ಓದಿ: ಪರಿಷತ್ ಕಲಾಪದಲ್ಲಿ ಗುಜರಾತ್ ಗಲಭೆ ಪ್ರಸ್ತಾಪ, ಬಿಜೆಪಿ-ಜೆಡಿಎಸ್ ಜಟಾಪಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.