ಕನ್ನಡ ಚಿತ್ರರಂಗದಲ್ಲಿ ಇನ್ನೂ ಮೂರು ವರ್ಷ ಬ್ಯುಸಿಯಾಗಿರೋ ಸ್ಟಾರ್ ಹೀರೋ ಅಂದ್ರೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್. ವೇದಾ, ಗೋಸ್ಟ್, ಹೆಸರಿಡದ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಮತ್ತೊಂದು ಬಿಗ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ದೇಶಕ ಸಚಿನ್ ರವಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಅವನೇ ಶ್ರೀಮನ್ನಾರಾಯಣ ಸಿನಿಮಾದ ನಂತರ, ನಿರ್ದೇಶಕ ಸಚಿನ್ ರವಿ ಮುಂದಿನ ಸಿನಿಮಾ ಹೇಗಿರಲಿದೆ? ಯಾವ ಸ್ಟಾರ್ ಆ್ಯಕ್ಷನ್ ಕಟ್ ಹೇಳ್ತಾರೆ? ಯಾವ ಬ್ಯಾನರಿನ ಸಿನಿಮಾ ಮಾಡಲಿದ್ದಾರೆ? ಅನ್ನೋ ಪ್ರಶ್ನೆ ಚಿತ್ರರಸಿಕರ ಮನದಲ್ಲಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಚಿನ್ ಮುಂದಿನ ಸಿನಿಮಾವನ್ನ ಸೆಂಚುರಿ ಸ್ಟಾರ್ಗೆ ನಿರ್ದೇಶನ ಮಾಡಲಿದ್ದಾರೆ.
ಸಚಿನ್ ರವಿ ನಿರ್ದೇಶನ ಮಾಡಲಿರುವ, ಈ ಚಿತ್ರದಲ್ಲಿ ಶಿವಣ್ಣ ಮಹಾಭಾರತದ ಅಶ್ವತ್ಥಾಮನಾಗಿ ಬಣ್ಣ ಹಚ್ಚಲಿದ್ದು, ಇದೊಂದು ಆ್ಯಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತ ಸಾಗುವ ಇಡೀ ಕಥೆಯಲ್ಲಿ ಶಿವಣ್ಣ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಸಚಿನ್ ರವಿ, ಈ ಸಿನಿಮಾಗೆ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದು, ತಮ್ಮದೇ ಹೋಮ್ ಬ್ಯಾನರ್ ಜೊತೆಗೆ ಕಾರ್ಪೊರೇಟ್ ಕಂಪೆನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸದ್ಯದಲ್ಲಿಯೇ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ನೀಡಲಿದೆ.
ಕನ್ನಡದ ಮಟ್ಟಿಗೆ ಸೂಪರ್ ಹೀರೋ ಹಿನ್ನೆಲೆಯ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ರೀತಿಯಲ್ಲಿ ಕಂಗೊಳಿಸಲಿದ್ದಾರೆ. ಜೊತೆಗೆ ವಿಎಫ್ಎಕ್ಸ್ಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸದ್ಯ ಸಿನಿಮಾ ಬಗ್ಗೆ ಇಷ್ಟು ಗುಟ್ಟು ಬಿಟ್ಟುಕೊಟ್ಟಿರುವ ಸಚಿನ್, ಮುಂದಿನ ದಿನಗಳಲ್ಲಿ ಉಳಿದ ಕಲಾವಿದರು ಹಾಗೂ ತಂತ್ರಜ್ಞಾನ ತಂಡವನ್ನು ಪರಿಚಯಿಸಲಿದ್ದು, ಬರುವ ಸೆಪ್ಟಂಬರ್ನಿಂದ ಶೂಟಿಂಗ್ ಮಾಡಲು ಪ್ಲಾನ್ ಮಾಡಿದ್ದಾರೆ.