ETV Bharat / bharat

ಮುಂಬೈ ಟು ಚೆನ್ನೈ, ಎರಡು ಪಕ್ಷ, ಎರಡು ಚಿಹ್ನೆ: ಇಬ್ಭಾಗದ ಹಾದಿಯಲ್ಲಿ ಶಿವಸೇನೆ-ಎಐಎಡಿಎಂಕೆ!

author img

By

Published : Jun 28, 2022, 5:16 PM IST

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದ ನೇತಾರ ಏಕನಾಥ್ ಶಿಂದೆ ಶಿವಸೇನೆಯ ಬಿಲ್ಲು ಬಾಣದ ಗುರುತು ಪಡೆಯಲು ಹವಣಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಪಕ್ಷದ ಹಿಡಿತಕ್ಕಾಗಿ ಇ. ಪಳನಿಸಾಮಿ ಮತ್ತು ಒ. ಪನ್ನೀರಸೆಲ್ವಂ ಮಧ್ಯೆ ಅಕ್ಷರಶಃ ಹೋರಾಟ ನಡೆಯುತ್ತಿದೆ.

Shiv Sena & AIADMK in the Same Leaky Boat to Reach EC
ಇಬ್ಭಾಗದ ಹಾದಿಯಲ್ಲಿ ಶಿವಸೇನೆ-ಎಐಎಡಿಎಂಕೆ

ಮುಂಬೈ/ಚೆನ್ನೈ: ದೇಶದ ಇಂದಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಿವಸೇನೆ ಹಾಗೂ ಎಐಎಡಿಎಂಕೆ ಈ ಎರಡೂ ಪ್ರಾದೇಶಿಕ ಪಕ್ಷಗಳು ಒಂದೇ ದೋಣಿಯಲ್ಲಿ ಸಾಗುತ್ತಿವೆ ಎನಿಸುತ್ತಿದೆ. ಎರಡೂ ಪಕ್ಷಗಳಿಗೆ 50ಕ್ಕೂ ಹೆಚ್ಚು ವರ್ಷ ವಯಸ್ಸಾಗಿದ್ದು, ಎರಡೂ ಒಡೆದು ಛಿದ್ರವಾಗುವ ಹಂತದಲ್ಲಿವೆ!.

ಠಾಕ್ರೆ vs ಶಿಂದೆ- ಯಾರಿಗೆ ಬಿಲ್ಲು ಬಾಣ?: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದ ನೇತಾರ ಏಕನಾಥ್ ಶಿಂದೆ ಶಿವಸೇನೆಯ ಬಿಲ್ಲು ಬಾಣದ ಗುರುತು ಪಡೆಯಲು ಹವಣಿಸುತ್ತಿದ್ದಾರೆ. ತಾವೇ ನಿಜವಾದ ಶಿವಸೈನಿಕರು ಹಾಗೂ ನಿಜವಾದ ಬಾಳಾಸಾಹೇಬ್ ಠಾಕ್ರೆ ಹಿಂದುತ್ವದ ಪ್ರತಿಪಾದಕರು ಎಂದು ಶಿಂದೆ ಬಣದ ಶಾಸಕರು ಹೇಳುತ್ತಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಾಕಷ್ಟು ಸಂಖ್ಯೆಯ ಶಾಸಕರನ್ನು ತಮ್ಮ ಗುಂಪಿನೊಂದಿಗೆ ಹೊಂದಿರುವುದು ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸಿಲುಕದಿರುವುದು ಶಿವಸೇನಾ ಬಂಡಾಯ ಶಾಸಕರ ಗುಂಪಿನ ಸದ್ಯದ ಆದ್ಯತೆ. ಇದಾದ ನಂತರ ನಿಜವಾದ ಶಿವಸೇನೆ ಯಾರದ್ದು ಎಂಬುದು ಖಾತ್ರಿಯಾಗುತ್ತದೆ. ಈ ವಿಷಯವನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ವಿಧಾನಸಭೆಯಲ್ಲಿ ಬಹುಮತ ಯಾರಿಗಿದೆ ಎಂಬುದು ಇಲ್ಲಿ ಮೊದಲ ಪ್ರಶ್ನೆ. ಎರಡನೆಯದಾಗಿ, ಇಂಥ ಬಿಕ್ಕಟ್ಟುಗಳಲ್ಲಿ ಪಕ್ಷದ ಚಿಹ್ನೆ ಯಾರಿಗೆ ನೀಡಬೇಕೆಂಬುದರ ಬಗ್ಗೆ ಹಿಂದೆ ಚುನಾವಣಾ ಆಯೋಗ ಯಾವ ರೀತಿ ನಿರ್ಧಾರಗಳನ್ನು ಕೈಗೊಂಡಿದೆ ಎಂಬುದಾಗಿದೆ.

ಪಕ್ಷದ ಚಿಹ್ನೆಯ ವಿಚಾರ ನಂತರ ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ತಮ್ಮದೇ ನಿಜವಾದ ಶಿವಸೇನೆ, 39 ಶಾಸಕರು ತಮ್ಮೊಂದಿಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಶಿಂದೆ ಗುಂಪು ಪ್ರಯತ್ನಿಸುತ್ತಿದೆ. 55ರಲ್ಲಿ ಎರಡು ಮೂರಾಂಶದಷ್ಟು ಶಾಸಕರು ತಮ್ಮೊಂದಿಗಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ತಮಗೆ ಅನ್ವಯವಾಗಲಾರದು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

"ವಿಶ್ವಾಸಮತ ಯಾಚನೆಯ ನಂತರ ಹಾಗೂ ವಿಧಾನಸಭೆಯಲ್ಲಿನ ಎಲ್ಲ ಅಡ್ಡಿ ಆತಂಕಗಳು, ಕಾನೂನಾತ್ಮಕ ಸಮಸ್ಯೆಗಳು ನಿವಾರಣೆಯಾದ ನಂತರ ಇವರು ಪಕ್ಷದ ಚಿಹ್ನೆಯ ವಿಷಯವನ್ನು ಚುನಾವಣಾ ಆಯೋಗದ ಬಳಿಗೆ ಕೊಂಡೊಯ್ಯಲಿದ್ದಾರೆ. ಇದಕ್ಕಾಗಿ ಅವರಿಗೆ ವಲಯವಾರು ಶಾಖೆಗಳು, ಜಿಲ್ಲಾ ಕಾರ್ಯಕಾರಿಣಿ ಮತ್ತು ಕಾರ್ಯಕರ್ತರ ಬೆಂಬಲ ಬೇಕಾಗುತ್ತದೆ. ಈ ವಿಷಯದಲ್ಲಿ ಶಿವಸೇನೆಯು ಖಂಡಿತವಾಗಿಯೂ ಅವರಿಗೆ ಪೈಪೋಟಿ ನೀಡಲಿದೆ.

ಆದರೆ ಡೆಪ್ಯೂಟಿ ಸ್ಪೀಕರ್​ರಿಂದ ಅವರು ಅರ್ಹ ಎಂದು ಘೋಷಿಸಲ್ಪಟ್ಟರೆ ಮತ್ತು ಸುಪ್ರೀಂಕೋರ್ಟ್​ನಲ್ಲಿ ಜಯಗಳಿಸಿದರೆ ಸಂಪೂರ್ಣ ಕತೆ ಬದಲಾಗುತ್ತದೆ. ಹಾಗಾದರೆ ಪಕ್ಷದ ಚಿಹ್ನೆ ಯಾರ ಬಳಿ ಉಳಿಯಲಿದೆ? ಹೆಚ್ಚು ಸಂಖ್ಯೆಯ ಶಾಸಕರು ತಮ್ಮೊಂದಿಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಪಕ್ಷದ ಚಿಹ್ನೆ ಏಕನಾಥ್ ಶಿಂದೆ ಗುಂಪಿಗೆ ಸಿಗುತ್ತದೆ ಎಂಬುದರ ಬಗ್ಗೆ ಯಾವುದೇ ಗ್ಯಾರಂಟಿಯಿಲ್ಲ.

ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು, ಶಾಸಕರು ಮತ್ತು ಸಂಸದರ ಹೆಚ್ಚು ಬೆಂಬಲ ಪಡೆದರೆ ಮಾತ್ರ ಅಂಥ ಗುಂಪು ನಿಜವಾದ ಶಿವಸೇನೆ ಆಗಲಿದೆ. ಕೇವಲ ಹೆಚ್ಚು ಸಂಖ್ಯೆಯ ಶಾಸಕರಿರುವ ಮಾತ್ರಕ್ಕೆ ಆ ಗುಂಪಿಗೆ ಪಕ್ಷದ ಮಾನ್ಯತೆ ಸಿಗಲಾರದು.

ಪಕ್ಷಾಂತರ ನಿಷೇಧ ಕಾಯ್ದೆಯನ್ವಯ, ಒಂದು ವೇಳೆ ಶಿವಸೇನೆಯು ಇಬ್ಭಾಗವಾದರೆ ಹಾಗೂ ಶಿಂದೆ ಗುಂಪು ಹೆಚ್ಚು ಶಾಸಕರನ್ನು ಹೊಂದಿದ್ದರೆ, ಹೊಸ ಗುಂಪಿಗೆ ತಕ್ಷಣವೇ ಹೊಸ ಪಕ್ಷದ ಮಾನ್ಯತೆ ಸಿಗಲಾರದು. ಶಾಸಕಾಂಗ ಬಣದಲ್ಲಿ ಹಾಗೂ ಪಕ್ಷದಲ್ಲಿ ಯಾವ ಗುಂಪಿಗೆ ಹೆಚ್ಚು ಬೆಂಬಲವಿದೆ ಎಂಬುದನ್ನು ಆಧರಿಸಿ ಯಾರಿಗೆ ಪಕ್ಷದ ಚಿಹ್ನೆ ನೀಡಬೇಕೆಂಬುದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ.

ತಮಿಳುನಾಡಿನಲ್ಲೂ ಪವರ್‌ ಪಾಲಿಟಿಕ್ಸ್‌: ಸದ್ಯ ಬಿಲ್ಲು ಬಾಣ ಮಾತ್ರವಲ್ಲ.. ಇನ್ನೊಂದು ಪಕ್ಷದ ಚಿಹ್ನೆಯ ಬಗ್ಗೆಯೂ ಹಗ್ಗಜಗ್ಗಾಟ ನಡೆದಿದೆ. ತಮಿಳುನಾಡಿನಲ್ಲಿ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಪಕ್ಷದ ಹಿಡಿತಕ್ಕಾಗಿ ಇ. ಪಳನಿಸಾಮಿ ಮತ್ತು ಒ. ಪನ್ನೀರಸೆಲ್ವಂ ಮಧ್ಯೆ ಅಕ್ಷರಶಃ ಹೋರಾಟ ನಡೆದಿದೆ.

ಒ.ಪನ್ನೀರಸೆಲ್ವಂ ಪಕ್ಷದ ಸಂಯೋಜಕರಾಗಿರುವುದು ಹಾಗೂ ಎಡಪ್ಪಾಡಿ ಪಳನಿಸಾಮಿ ಸಹ-ಸಂಯೋಜಕರಾಗಿರುವುದು ವಿವಾದಕ್ಕೆಡೆ ಮಾಡಿದೆ. ಪಕ್ಷದೊಳಗೆ ಎರಡು ಅಧಿಕಾರದ ಧ್ರುವಗಳಿರುವುದು ಬೇಡ ಎಂದು ಬಹುತೇಕ ಎಐಎಡಿಎಂಕೆ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಐಎಡಿಎಂಕೆ ಅತ್ಯುಚ್ಚ ನಾಯಕಿಯಾಗಿದ್ದ ಜೆ. ಜಯಲಲಿತಾ ಅವರು 2016 ರಲ್ಲಿ ತೀರಿಕೊಂಡ ನಂತರ ಪಕ್ಷದ ಮೇಲೆ ಹಿಡಿತ ಸಾಧಿಸಲು ಹಲವಾರು ಬಾರಿ ವಿವಾದಗಳುಂಟಾಗಿವೆ.

ಒಟ್ಟಾರೆಯಾಗಿ ನೋಡಿದರೆ, ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸುವ ಓರ್ವ ವ್ಯಕ್ತಿ ಯಾರು, ಜಯಲಲಿತಾ ಅವರಿದ್ದರೆ ಯಾರಿಗೆ ಅಧಿಕಾರ ನೀಡುತ್ತಿದ್ದರು ಎಂಬ ವಿಷಯವನ್ನು ನಿರ್ಣಯಿಸುವುದೇ ಕಗ್ಗಂಟಾಗಿದೆ.

ಮಹಾರಾಷ್ಟ ಹಾಗೂ ತಮಿಳುನಾಡಿನಲ್ಲಿ ಪಕ್ಷದ ಚಿಹ್ನೆಗಾಗಿ ಎರಡು ಪ್ರತ್ಯೇಕ ಹೋರಾಟಗಳು ನಡೆದಿವೆ. ಚುನಾವಣಾ ಆಯೋಗದ ನಿರ್ಧಾರ ಹಾಗೂ ಸೂಕ್ತ ನಿರ್ಧಾರ ತಳೆಯುವ ಅದರ ಸಾಮರ್ಥ್ಯದ ಬಗ್ಗೆ ಎಲ್ಲರ ದೃಷ್ಟಿ ನೆಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.