ETV Bharat / bharat

ದೇಶವಾಸಿಗಳಿಗೆ ನೋವುಂಟು ಮಾಡುವ ತಪ್ಪುಗಳು ಮರುಕಳಿಸಬಾರದು: ರಾಜನಾಥ್ ಸಿಂಗ್

author img

By ETV Bharat Karnataka Team

Published : Dec 27, 2023, 7:40 PM IST

Lapses which hurt countrymen should not be repeated: Rajnath Singh to troops in J&K after Poonch civilian killings
ದೇಶವಾಸಿಗಳಿಗೆ ನೋವುಂಟು ಮಾಡುವ ತಪ್ಪುಗಳು ಮರುಕಳಿಸಬಾರದು: ಜಮ್ಮುನಲ್ಲಿ ರಕ್ಷಣಾ ಸಚಿವ ರಾಜನಾಥ್

Rajnath Singh Jammu Visit: ಕಣಿವೆ ನಾಡು ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜೌರಿ ಜಿಲ್ಲೆಯಲ್ಲಿ ಇಂದು ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

ರಕ್ಷಣಾ ಸಚಿವ ರಾಜನಾಥ್ ಹೇಳಿಕೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ''ಭದ್ರತಾ ಸಿಬ್ಬಂದಿ ದೇಶವಾಸಿಗಳ ಹೃದಯ ಗೆಲ್ಲಬೇಕು. ಅವರಿಗೆ ನೋವುಂಟು ಮಾಡುವ ತಪ್ಪುಗಳು ಪುನರಾವರ್ತನೆ ಆಗಬಾರದು'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಳಿದ್ದಾರೆ. ಪೂಂಚ್​ ಜಿಲ್ಲೆಯಲ್ಲಿ ಕಳೆದ ವಾರ ಭಾರತೀಯ ಸೇನಾ ವಾಹನದ ಮೇಲೆ ನಡೆದ ದಾಳಿ, ನಾಗರಿಕರ ಹತ್ಯೆ ಹಾಗು ಅದರ ವಿರುದ್ಧ ನಡೆದ ಪ್ರತಿಭಟನೆಯ ಬಳಿಕ ಸಚಿವರು ಸೇನೆಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಪೂಂಚ್‌ನಲ್ಲಿ ಉಗ್ರರ ದಾಳಿ, ಮೂವರು ಸೈನಿಕರು ಹುತಾತ್ಮ

ಜಮ್ಮು ಪ್ರಾಂತ್ಯಕ್ಕೆ ಭೇಟಿ ನೀಡಿರುವ ರಾಜನಾಥ್, ರಾಜೌರಿ ಜಿಲ್ಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ''ಸರ್ಕಾರವು ನಿಮ್ಮ ಕಲ್ಯಾಣಕ್ಕೆ ಬದ್ಧ. ನೀವು ದೇಶದ ಕಾವಲುಗಾರರು. ಆದರೆ, ಅದೇ ಸಮಯದಲ್ಲಿ ದೇಶವಾಸಿಗಳ ಹೃದಯ ಗೆಲ್ಲುವ ದೊಡ್ಡ ಜವಾಬ್ದಾರಿಯೂ ನಿಮ್ಮ ಮೇಲಿದೆ. ನೀವು ನಿಮ್ಮ ಸ್ವಂತ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಆದರೆ, ಅಲ್ಲಿ ಕೆಲವು ಲೋಪಗಳಿವೆ. ದೇಶವಾಸಿಗಳಿಗೆ ನೋವುಂಟು ಮಾಡುವ ಇಂತಹ ತಪ್ಪುಗಳು ಮರುಕಳಿಸಬಾರದು. ದೇಶವನ್ನು ಕಾಪಾಡುವುದರ ಜೊತೆಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ನಂಬಿಕೆಯನ್ನು ಗೆಲ್ಲಲು ಪ್ರಯತ್ನಿಸಬೇಕು'' ಎಂದು ಕರೆ ನೀಡಿದರು.

ಇದೇ ವೇಳೆ ಸೈನಿಕರ ಕಾರ್ಯವನ್ನು ಶ್ಲಾಘಿಸಿದ ಸಚಿವರು, ''ನಾನು ನಿಮ್ಮ ಶೌರ್ಯ ಮತ್ತು ಸ್ಥೈರ್ಯವನ್ನು ನಂಬುತ್ತೇನೆ. ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು. ನೀವು ಇದೇ ಬದ್ಧತೆಯೊಂದಿಗೆ ಮುಂದುವರಿಯಬೇಕು. ಇದರಲ್ಲಿ ನೀವು ವಿಜಯ ಸಾಧಿಸುವಿರಿ ಎಂಬ ಸಂಪೂರ್ಣ ನಂಬಿಕೆ ನನಗಿದೆ'' ಎಂದು ತಿಳಿಸಿದರು.

ಪೂಂಚ್​ನಲ್ಲಿ ಉಗ್ರರ ದಾಳಿಯನ್ನು 'ದೊಡ್ಡ ಘಟನೆ' ಎಂದು ಕರೆದ ರಾಜನಾಥ್, ''ನಮ್ಮ ನಾಲ್ವರು ಯೋಧರು ಹುತಾತ್ಮರಾಗಿರುವುದು ಅತ್ಯಂತ ದುರದೃಷ್ಟಕರ. ಹುತಾತ್ಮ ಯೋಧರಿಗೆ ನನ್ನ ನಮನಗಳು. ಗಾಯಗೊಂಡ ಯೋಧರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ'' ಎಂದರು.

ಇದನ್ನೂ ಓದಿ: ಪೂಂಚ್ ಜಿಲ್ಲೆಯಲ್ಲಿ ಮೂವರು ನಾಗರಿಕರ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಸೇನೆ ಆದೇಶ

ಮುಂದುವರೆದು ಮಾತನಾಡಿದ ಅವರು, ''ಈ ಘಟನೆಯ ಗಂಭೀರತೆಯನ್ನು ಗಮನಿಸಿ, ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಾಗುತ್ತಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಮಗೆ ಪ್ರತಿಯೊಬ್ಬ ಸೈನಿಕನ ಜೀವನ ಮುಖ್ಯ ಮತ್ತು ಪ್ರತಿಯೊಬ್ಬ ಯೋಧ ಕೂಡ ನಮ್ಮ ಕುಟುಂಬದ ಸದಸ್ಯರಂತೆ. ಇದು ಪ್ರತಿಯೊಬ್ಬ ಭಾರತೀಯನ ಭಾವನೆ. ಯಾರೋ ನಿಮ್ಮ ಮೇಲೆ ಕೆಟ್ಟ ಕಣ್ಣು ಹಾಕುತ್ತಾರೆ ಎಂದರೆ, ನಾವು ಅದನ್ನು ಎಂದಿಗೂ ಸಹಿಸುವುದಿಲ್ಲ'' ಎಂದು ಅಭಯ ನೀಡಿದರು.

''ಅಂತಹ ದಾಳಿಗಳನ್ನು ವಿಫಲಗೊಳಿಸುವಲ್ಲಿ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ತಮ್ಮ ಪಾತ್ರವನ್ನು ಸುಧಾರಿಸಲು ಈ ಸಂಸ್ಥೆಗಳು ಪ್ರಯತ್ನಿಸುತ್ತಿದ್ದಾರೆ. ಈ ಏಜೆನ್ಸಿಗಳಿಗೆ ಸಂಪೂರ್ಣ ಬೆಂಬಲ ನೀಡಲು ಸರ್ಕಾರ ಕೂಡ ಉತ್ಸುಕವಾಗಿದೆ. ಆದರೆ, ಈ ಘಟನೆಗಳನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ. ನಾವು ಹೆಚ್ಚು ಜಾಗೃತರಾಗಬೇಕು. ನೀವು ಎಚ್ಚರವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ'' ಎಂದು ರಕ್ಷಣಾ ಸಚಿವರು ಹೇಳಿದರು.

ಇದನ್ನೂ ಓದಿ: ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ತಗುಲಿದ ಗುಂಡು: 8 ವರ್ಷದಿಂದ ಕೋಮಾದಲ್ಲಿದ್ದ ಸೇನಾಧಿಕಾರಿ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.