ಕರ್ನಾಟಕ

karnataka

ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಸೇರಿ ಮಾಜಿ ಸಚಿವರ ನಿವಾಸಗಳ ಮೇಲೆ ಇಡಿ ದಾಳಿ

By ETV Bharat Karnataka Team

Published : Feb 7, 2024, 11:06 AM IST

ಉತ್ತರಾಖಂಡದ ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಮತ್ತು ಇತರರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಮಾಹಿತಿಯ ಪ್ರಕಾರ, ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ED conducts raids  minister Harak Singh Rawat  money laundering case  ಹರಕ್ ಸಿಂಗ್ ರಾವತ್  ಜಾರಿ ನಿರ್ದೇಶನಾಲಯ ದಾಳಿ
ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಮೇಲೆ ಇಡಿ ದಾಳಿ

ಡೆಹ್ರಾಡೂನ್, ಉತ್ತರಾಖಂಡ್​:ಉತ್ತರಾಖಂಡದಲ್ಲಿ ಬುಧವಾರ ಬೆಳಗ್ಗೆ ಇಡಿ ದಾಳಿ ಸಂಚಲನ ಮೂಡಿಸಿದೆ. ಸಂಪುಟದ ಮಾಜಿ ಸಚಿವರು ಸೇರಿದಂತೆ ರಾಜ್ಯದ ಹಲವು ಅಧಿಕಾರಿಗಳ ನಿವಾಸಗಳ ಮೇಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಕಾರ್ಬೆಟ್‌ಗೆ ಸಂಬಂಧಿಸಿದ ಎಲ್ಲ ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ED ಅಗತ್ಯ ಮಾಹಿತಿ ಸಂಗ್ರಹಿಸುತ್ತಿದೆ.

ಉತ್ತರಾಖಂಡದಲ್ಲಿ ಮಾಜಿ ಕ್ಯಾಬಿನೆಟ್ ಸಚಿವರು ಸೇರಿದಂತೆ ರಾಜ್ಯದ ಕೆಲವು ಅಧಿಕಾರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಮಾಹಿತಿ ಪ್ರಕಾರ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಉತ್ತರಾಖಂಡ್​ನ ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಅವರಿಗೆ ಸಂಬಂಧಿಸಿದ (ಉತ್ತರಾಖಂಡ, ದೆಹಲಿ ಮತ್ತು ಚಂಡೀಗಢ) ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹತ್ತಾರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವುದು ಮತ್ತು ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಡಿ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಹರಕ್ ಸಿಂಗ್ ರಾವತ್ ಹೊರತಾಗಿ ಇತರ ಕೆಲವರ ಮೇಲೂ ಇಡಿ ದಾಳಿ ನಡೆಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ವಿಜಿಲೆನ್ಸ್ ಇಲಾಖೆ ಕೂಡ ರಾವತ್ ವಿರುದ್ಧ ಕ್ರಮ ಕೈಗೊಂಡಿರುವುದು ಗಮನಾರ್ಹ.

ಲೋಕಸಭೆ ಚುನಾವಣೆಗೆ ಮುನ್ನ ಬುಧವಾರ ನಡೆದ ಇಡಿ ದಾಳಿ ಕಾಂಗ್ರೆಸ್‌ನ ಹಿರಿಯ ನಾಯಕ ಹರಕ್​ ಸಿಂಗ್ ರಾವತ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ವರ್ಷವೂ ಈ ಪ್ರಕರಣದಲ್ಲಿ ವಿಜಿಲೆನ್ಸ್ ಡಿಎಫ್‌ಒ ಅವರನ್ನು ಜೈಲಿಗೆ ಕಳುಹಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಂದಿನ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಮತ್ತು ಕೆಲವು ಅರಣ್ಯಾಧಿಕಾರಿಗಳ ನಿವಾಸಗಳಲ್ಲಿಯೂ ಇಡಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಅವರ ನಿವಾಸ, ಕಾಲೇಜು ಮತ್ತು ಇತರ ಸಂಸ್ಥೆಗಳಲ್ಲಿ ಇಡಿ ಬೆಳಗ್ಗೆಯಿಂದ ಪರಿಶೀಲನೆ ಮಾಡುತ್ತಿದೆ.

ಹರಕ್ ಸಿಂಗ್ ರಾವತ್ ಕಾಂಗ್ರೆಸ್‌ಗಿಂತ ಮೊದಲು ಬಿಜೆಪಿಯಲ್ಲಿದ್ದರು. 2022ರಲ್ಲಿ ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್ ಸೇರಿದ್ದರು. ಈ ಹಿಂದೆ 2016ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದರು. 2022ರ ವಿಧಾನಸಭಾ ಚುನಾವಣೆಗೆ ಮೊದಲು ಹರಕ್ ಸಿಂಗ್ ರಾವತ್ ಜೊತೆಗೆ ಅವರ ಸೊಸೆ ಅನುಕೃತಿ ಗೋಸೈನ್ ಕೂಡ ಕಾಂಗ್ರೆಸ್ ಸೇರಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಿದ್ದರು. 1991ರಲ್ಲಿ ಹರಕ್ ಸಿಂಗ್ ರಾವತ್ ಅತ್ಯಂತ ಕಿರಿಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಪೌರಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ರುದ್ರಪ್ರಯಾಗ, ಲ್ಯಾನ್ಸ್‌ಡೌನ್ ಮತ್ತು ಕೋಟ್‌ದ್ವಾರದಿಂದಲೂ ಗೆಲುವು ಸಾಧಿಸಿದ್ದರು ಎಂಬುದು ಗಮನಾರ್ಹ.

ಹಣಕಾಸು ವಹಿವಾಟು ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಎಲೆಕ್ಟ್ರಾನಿಕ್ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕಾರ್ಬೆಟ್ ಟೈಗರ್ ರಿಸರ್ವ್ ಪ್ರಕರಣದಲ್ಲಿ ಇಡಿ ತನ್ನ ಕ್ರಮವನ್ನು ಪ್ರಾರಂಭಿಸಿದೆ ಮತ್ತು ಈ ಪ್ರಕರಣದಲ್ಲಿ, ಇಡಿ ಹಣಕಾಸಿನ ವಹಿವಾಟು ಮತ್ತು ಮನಿ ಲಾಂಡರಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸುತ್ತಿದೆ. ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ಉತ್ತರಾಖಂಡ ಅರಣ್ಯ ಕೇಂದ್ರ ಕಚೇರಿಗೆ ಪತ್ರ ಬರೆದು ರಾಜ್ಯದ ಹಲವು ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿತ್ತು. ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಮತ್ತೊಂದೆಡೆ ತಡಮಾಡದೇ ಇಡಿ ಬುಧವಾರ ಬೆಳಗ್ಗೆಯೇ ದಾಳಿ ಆರಂಭಿಸಿದೆ.

ಓದಿ:‘ಚಲೋ ದೆಹಲಿ’: ಜಂತರ್​ ಮಂತರ್​ನಲ್ಲಿ ಇಂದು ಕರ್ನಾಟಕ ಕಾಂಗ್ರೆಸ್​ ಪ್ರತಿಭಟನೆ

ABOUT THE AUTHOR

...view details