ಕರ್ನಾಟಕ

karnataka

ರಾಷ್ಟ್ರಪತಿ ಸ್ವಾಗತಕ್ಕೆ ಚಾಮರಾಜನಗರದಲ್ಲಿ ಭರದ ಸಿದ್ಧತೆ: ಬಹುಕೋಟಿ ವೆಚ್ಚದ ನೂತನ ಆಸ್ಪತ್ರೆ ನಾಳೆ ಲೋಕಾರ್ಪಣೆ

By

Published : Oct 6, 2021, 9:41 PM IST

ಚಾಮರಾಜನಗರದ ಹೊರವಲಯದ ಯಡಪುರದಲ್ಲಿ ನಿರ್ಮಾಣ ಮಾಡಲಾಗಿರುವ 450 ಹಾಸಿಗೆಗಳ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ 3.30 ಕ್ಕೆ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಾಷ್ಟ್ರಪತಿ ಸ್ವಾಗತಕ್ಕೆ ಚಾಮರಾಜನಗರದಲ್ಲಿ ಭರದ ಸಿದ್ಧತೆ
ರಾಷ್ಟ್ರಪತಿ ಸ್ವಾಗತಕ್ಕೆ ಚಾಮರಾಜನಗರದಲ್ಲಿ ಭರದ ಸಿದ್ಧತೆ

ಚಾಮರಾಜನಗರ:ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಿಳಿಗಿರಿರಂಗನ ಬೆಟ್ಟ ಮತ್ತು ಚಾಮರಾಜನಗರಕ್ಕೆ ನಾಳೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಚಾಮರಾಜನಗರ ಮೆಡಿಕಲ್ ಕಾಲೇಜು ಸಮೀಪ ಒಟ್ಟು 5 ಹೆಲಿಪ್ಯಾಡ್​​ಗಳನ್ನು ನಿರ್ಮಿಸಲಾಗಿದ್ದು, ಬಿಳಿಗಿರಿರಂಗನ ಬೆಟ್ಟದಲ್ಲಿ 3 ಹೆಲಿಪ್ಯಾಡ್ ಸ್ಥಾಪನೆಯಾಗಿದೆ. ಚಾಮರಾಜನಗರ ಮೆಡಿಕಲ್ ಕಾಲೇಜು ಪ್ರವೇಶದ್ವಾರದಿಂದಲೇ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಅನಾವಶ್ಯಕವಾಗಿ ಓಡಾಡುವುದನ್ನು ನಿರ್ಬಂಧಿಸಲಾಗಿದೆ.

ಬಹುಕೋಟಿ ವೆಚ್ಚದ ನೂತನ ಆಸ್ಪತ್ರೆ ನಾಳೆ ಲೋಕಾರ್ಪಣೆ

ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಬಂದೋಬಸ್ತ್:

ಈಗಾಗಲೇ, ಮೆಡಿಕಲ್ ಕಾಲೇಜು ದಾರಿಯಲ್ಲಿ 3 ಚೆಕ್​​ಪೋಸ್ಟ್ ನಿರ್ಮಾಣಗೊಂಡಿದ್ದು, ರಾಷ್ಟ್ರಪತಿ ಮತ್ತು ಅವರ ಕುಟುಂಬ ವಿರಮಿಸಲು ಮೆಡಿಕಲ್ ಕಾಲೇಜಿನಲ್ಲಿ ಸುಸಜ್ಜಿತವಾದ ಒಂದು ಕೊಠಡಿಯನ್ನು ರೂಪಿಸಲಾಗಿದೆ. ರಾಷ್ಟ್ರಪತಿಗಳ 12 ವಾಹನಗಳ ಬೆಂಗಾವಲು ವಾಹನ, ವಾಯು ಸೇನೆಯ 3 ಹೆಲಿಕಾಪ್ಟರ್​​ಗಳು ಹತ್ತಾರು ಬಾರಿ ಪರಿಶೀಲನೆ ನಡೆಸಿ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಸನ್ನದ್ಧವಾಗಿದೆ.

ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಬಂದೋಬಸ್ತ್

2 ದಿನದ ಮೊದಲು ಸಾರ್ವಜನಿಕರ ಪ್ರವೇಶ ನಿರ್ಬಂಧ:

ಬಿಳಿಗಿರಿರಂಗನ ಬೆಟ್ಟ ದೇಗುಲ ಭೇಟಿ ರಾಷ್ಟ್ರಪತಿಗಳ ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಎರಡು ದಿನ ಮೊದಲೇ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದು, ಬೆಟ್ಟದ ತಪ್ಪಲಿನಿಂದ ದೇಗುಲದ ವರೆಗೆ ಪಿಡಬ್ಲ್ಯೂಡಿ ಅಧಿಕಾರಿಗಳು ತಾತ್ಕಾಲಿಕ ರ‍್ಯಾಂಪ್​ ನಿರ್ಮಿಸಿದ್ದಾರೆ.

ಹೆಲಿಪ್ಯಾಡ್ ಬಳಿ ಸಾರ್ವಜನಿಕರಿಗೆ ಮತ್ತು ದೇವಾಲಯ ದರ್ಶನದ ವೇಳೆ ಪತ್ರಕರ್ತರಿಗೂ ನಿರ್ಬಂಧ ವಿಧಿಸಲಾಗಿದ್ದು, ರಾಷ್ಟ್ರಪತಿಗಳೊಂದಿಗೆ ಅವರ ಪತ್ನಿ, ಪುತ್ರಿ ದೇವರ ದರ್ಶನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೇದಿಕೆಯಲ್ಲಿ ಐವರು- ದೇವಾಲಯದಲ್ಲಿ ಓರ್ವ ಅರ್ಚಕ:
ರಾಷ್ಟ್ರಪತಿಗಳು ಬಿಳಿಗಿರಿರಂಗನ ಬೆಟ್ಟ ದೇವಾಲಯ ಭೇಟಿ ವೇಳೆ ಓರ್ವ ಅರ್ಚಕರಿಗಷ್ಟೇ ಅವಕಾಶ ನೀಡಲಾಗಿದೆ. ಮೆಡಿಕಲ್ ಕಾಲೇಜು ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಐವರು ಅರ್ಚಕರು ಇರಲಿದ್ದಾರೆ. ರಾಷ್ಟ್ರಪತಿ ದಂಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ವೇದಿಕೆ ಅಲಂಕರಿಸುವರು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ಕುಟುಂಬ ಹಾಗೂ ಸಿಎಂ ಅವರು ಚಾಮರಾಜನಗರದಲ್ಲಿ ಭೋಜನ ಸರಿಯುವ ಹಿನ್ನೆಲೆಯಲ್ಲಿ ವಿಶೇಷ ಬಾಣಸಿಗರು ಈಗಾಗಲೇ ಚಾಮರಾಜನಗರಕ್ಕೆ ಆಗಮಿಸಿದ್ದು, ಭೋಜನ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಚಾಮರಾಜನಗರ ಜಿಲ್ಲಾ ದಸರಾ ಉದ್ಘಾಟನೆಯೂ ಗುರುವಾರ ನಡೆಯಲಿದ್ದು, ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಬಹುಕೋಟಿ ವೆಚ್ಚದ ನೂತನ ಆಸ್ಪತ್ರೆ ಲೋಕಾರ್ಪಣೆ:

ಚಾಮರಾಜನಗರ ಮೆಡಿಕಲ್ ಕಾಲೇಜಿನ ನೂತನ ಆಸ್ಪತ್ರೆ ರಾಷ್ಟ್ರಪತಿಗಳಿಂದ ಉದ್ಘಾಟನೆಯಾಗುವ ಮೂಲಕ ಸ್ಮರಣೀಯ ಕಾರ್ಯಕ್ರಮವಾಗುತ್ತಿದೆ. ಇದರೊಂದಿಗೆ ಚಾಮರಾಜನಗರಕ್ಕೆ ಸಿಎಂ ಬರುವುದಿಲ್ಲ ಎಂಬ ಅಪವಾದದಿಂದ ಬೊಮ್ಮಾಯಿ ಕೂಡ ಹೊರ ಬರಲಿದ್ದಾರೆ.

ಯಡಪುರದಲ್ಲಿ ನಿರ್ಮಾಣ ಮಾಡಲಾಗಿರುವ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ

ಚಾಮರಾಜನಗರದ ಹೊರವಲಯದ ಯಡಪುರದಲ್ಲಿ ನಿರ್ಮಾಣ ಮಾಡಲಾಗಿರುವ 450 ಹಾಸಿಗೆಗಳ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಯನ್ನು ರಾಮನಾಥ್ ಕೋವಿಂದ್ ಅವರು ಗುರುವಾರ 3.30 ಕ್ಕೆ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಆಸ್ಪತ್ರೆಯಲ್ಲಿನ ವ್ಯವಸ್ಥೆ ಹೇಗಿದೆ?:

ಭಾರತೀಯ ವೈದ್ಯಕೀಯ ಮಂಡಳಿಯ ಮಾರ್ಗಸೂಚಿಗಳ ಅನ್ವಯ ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಅನುಮೋದನೆ ನೀಡಿತ್ತು. 450 ಹಾಸಿಗೆಗಳ ಬಹು ಮಹಡಿ (ನೆಲ+ನಾಲ್ಕು), ಸಿಐಎಮ್‍ಎಸ್ ಬೋಧನಾ ಆಸ್ಪತ್ರೆ 30,728 ಚ.ಮಿ. ವಿಸ್ತೀರ್ಣ ಹೊಂದಿದ್ದು, ಇದನ್ನು 166.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಹೊಸ ಬೋಧನಾ ಆಸ್ಪತ್ರೆಯಲ್ಲಿ 9 ಆಧುನಿಕ ಆಪರೇಷನ್ ಥಿಯೇಟರ್​​‍ಗಳು, ಸುಸಜ್ಜಿತ 50 ಹಾಸಿಗೆಯ ಐಸಿಯು ವಾರ್ಡ್‍ಗಳು, 20 ಕೆಎಲ್ ದ್ರವ ಆಮ್ಲಜನಕ ಸಂಗ್ರಹ ಟ್ಯಾಂಕ್, 2,000 ಎಲ್‍ಪಿಎಂ ಸಾಮರ್ಥ್ಯದ ಆಮ್ಲಜನಕ ಜನರೇಟರ್​​‍ಗಳು, ಕೇಂದ್ರಿತ ವೈದ್ಯಕೀಯ ಗ್ಯಾಸ್ ಪೈಪ್‍ಲೈನ್ ವ್ಯವಸ್ಥೆ, ಹೊರರೋಗಿಗಳು (ಒಪಿಡಿ) ಮತ್ತು ಒಳರೋಗಿಗಳು (ಐಪಿಡಿ) ವಿಭಾಗಗಳಲ್ಲದೆ 30 ಹಾಸಿಗೆಗಳ ತುರ್ತು ವಿಭಾಗ ಕೂಡ ಇವೆ.

ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಸಕಲ ಸಿದ್ಧತೆ:

ಆಸ್ಪತ್ರೆಯು ಕ್ರಿಟಿಕಲ್ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ವಿಭಾಗಗಳಾದ ಹೃದ್ರೋಗ, ಮೂತ್ರಪಿಂಡ, ಡಯಾಲಿಸಿಸ್ ಘಟಕ, ಮೂತ್ರಶಾಸ್ತ್ರ ಮತ್ತು ನರವಿಜ್ಞಾನಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ನೆಲ ಮಹಡಿಯು 6,056 ಚ.ಮೀ. ವಿಸ್ತೀರ್ಣವಿದ್ದು ಸಾಮಾನ್ಯ ಔಷಧ, ಚರ್ಮ, ಮನೋವೈದ್ಯಶಾಸ್ತ್ರ, ಕ್ಷಯರೋಗ ಮತ್ತು ಎದೆ, ದಂತ ವೈದ್ಯಶಾಸ್ತ್ರ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆ, ರೇಡಿಯಾಲಜಿ, ಇಎನ್‍ಟಿ, ನೇತ್ರ ಚಿಕಿತ್ಸೆ ಮತ್ತು ತುರ್ತು ಚಿಕಿತ್ಸೆ ವಲಯಗಳನ್ನು ಹೊಂದಿದೆ.

ಯಡಪುರದಲ್ಲಿ ನಿರ್ಮಾಣ ಮಾಡಲಾಗಿರುವ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ

ಮೊದಲನೇ ಮಹಡಿಯು ಒಟ್ಟು ವಿಸ್ತೀರ್ಣ 6,730 ಚ.ಮಿ. ವಿಸ್ತೀರ್ಣವಿದ್ದು ವಿಶೇಷ, ಅರೆ ವಿಶೇಷ ಮತ್ತು ಸಾಮಾನ್ಯ ವಾರ್ಡ್‍ಗಳು, ರಕ್ತಕೇಂದ್ರ, ಮುಖ್ಯಸ್ಥರ ಕೊಠಡಿ, ಆಸ್ಪತ್ರೆ ಕಚೇರಿ ಮತ್ತು ಕೇಂದ್ರ ಔಷಧಾಲಯಗಳಿವೆ.

2ನೇ ಮಹಡಿಯು 5,917 ಚ.ಮೀ. ವಿಸ್ತೀರ್ಣವಿದ್ದು, ಸೆಮಿನಾರ್ ಕೊಠಡಿ, ವಿಭಾಗದ ಮುಖ್ಯಸ್ಥರು, ಸಮಾಲೋಚನೆ ಕೊಠಡಿ, ಔಷಧಾಲಯ, ಸಾಮಾನ್ಯವಾರ್ಡ್, ವಿಶೇಷವಾರ್ಡ್, ಹಿರಿಯ ಮತ್ತು ಕಿರಿಯ ವೈದ್ಯರ ವಿಶ್ರಾಂತಿ ಕೊಠಡಿಗಳು ಇವೆ.

3ನೇ ಮಹಡಿಯು 5,941 ಚದರ ಮೀಟರ್ ಅಳತೆ ಹೊಂದಿದ್ದು, ಈ ಮಹಡಿಯಲ್ಲಿ ಉಪನ್ಯಾಸ ಸಭಾಂಗಣ, ಗ್ರಂಥಾಲಯ, ರೋಗಾಣು ಮುಕ್ತ ಸಂಗ್ರಹ ಕೊಠಡಿ, ಅಭ್ಯಾಸ ಕೊಠಡಿ, ಔಷಧಾಲಯ, ವಸ್ತ್ರಗಳ ಕೊಠಡಿ, ಸಾಮಾನ್ಯ ವಾರ್ಡ್, ಅರೆ ವಿಶೇಷ ವಾರ್ಡ್, ವಿಶೇಷ ವಾರ್ಡ್, ವೈದ್ಯರ ವಿಶ್ರಾಂತಿ ಕೊಠಡಿಗಳು ಇವೆ.

4ನೇ ಮಹಡಿಯು 6,084 ಚದರ ಮೀಟರ್ ವಿಸ್ತೀರ್ಣವಿದ್ದು, ಈ ಮಹಡಿಯಲ್ಲಿ ಐಸಿಯು, ವಿಐಪಿ ವಾರ್ಡ್, ಸಿದ್ಧತಾ ಕೊಠಡಿ, ಪೂರ್ವ- ಆಪರೇಟಿವ್ ರೂಂ, ಉಪನ್ಯಾಸ ಕೊಠಡಿ, ಡೆಮೊಕೊಠಡಿ, ಕೇಂದ್ರಿತ ಸಂಗ್ರಹ ಕೊಠಡಿ, ಸರ್ವರ್ ರೂಂ, ವೈದ್ಯರು ಮತ್ತು ನರ್ಸ್ ವಿಶ್ರಾಂತಿ ಕೊಠಡಿಗಳು ಇದೆ.

ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಅರ್ಜಿ ಸಲ್ಲಿಸಿದ ಸಂಸ್ಥೆ:

ಸಿಐಎಮ್‍ಎಸ್‍ನಲ್ಲಿ 750 ಎಂಬಿಬಿಎಸ್ ವಿದ್ಯಾರ್ಥಿಗಳು, 100 ಬಿಎಸ್​ಸಿ (ನರ್ಸಿಂಗ್), 60 ಬಿಎಸ್​ಸಿ (ವೃತ್ತಿಪರ ವಿಜ್ಞಾನಗಳ ಆರೋಗ್ಯ) ವಿದ್ಯಾರ್ಥಿಗಳು ಜೊತೆಗೆ 200 ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಇದ್ದಾರೆ. 2021-22 ರಿಂದ 12 ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳನ್ನು ಆರಂಭಿಸಲು ಸಂಸ್ಥೆ ಅರ್ಜಿ ಸಲ್ಲಿಸಿದೆ.

200ಕ್ಕೂ ಹೆಚ್ಚು ವೈದ್ಯರು, 250 ಸುಶಿಕ್ಷಿತ ದಾದಿಯರು ಮತ್ತು 300 ಬೋಧಕೇತರ ಸಿಬ್ಬಂದಿಯ ಸಮರ್ಪಿತ ಬೋಧನಾ ವಿಭಾಗದೊಂದಿಗೆ, 2020-21ನೇ ಸಾಲಿನ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಸಿಐಎಮ್‍ಎಸ್ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಏಕೈಕ ತೃತೀಯ ಹಂತದ ಆರೋಗ್ಯ ವ್ಯವಸ್ಥೆ:

ಚಾಮರಾಜನಗರ ಗಡಿ ಜಿಲ್ಲೆಯಾದ್ದರಿಂದ ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಜನ ಸಹ ಈ ವೈದ್ಯಕೀಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ಜಿಲ್ಲೆಯ ಏಕೈಕ ತೃತೀಯ ಹಂತದ ಆರೋಗ್ಯ ವ್ಯವಸ್ಥೆ ಹೊಂದಿದ ಆಸ್ಪತ್ರೆಯಾಗಿ ಗುರುವಾರ ಲೋಕಾರ್ಪಣೆಗೊಳ್ಳಲಿದೆ.

ಝಗಮಗಿಸುತ್ತಿರುವ ನೂತನ ಆಸ್ಪತ್ರೆ:ರಾಷ್ಟ್ರಪತಿಗಳಿಂದ ಆಸ್ಪತ್ರೆಯು ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ 4 ಅಂತಸ್ತಿನ ಆಸ್ಪತ್ರೆ ಕಟ್ಟಡ ಝಗಮಗಿಸುತ್ತಿದೆ.

ABOUT THE AUTHOR

...view details