ಬೆಂಗಳೂರು: ನಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದಿದ್ದೇನೆಯೇ ಹೊರತು ಕರ್ನಾಟಕದಿಂದ ಪ್ರಧಾನಿ ಹುದ್ದೆಗೆ ಯಾರೂ ಅಭ್ಯರ್ಥಿ ಇಲ್ಲ ಎಂದಿಲ್ಲ. ರಾಜ್ಯದಲ್ಲಿ ಪಿಎಂ ಹುದ್ದೆಗೆ ಅರ್ಹರು, ಸಮರ್ಥರಾಗಿರುವ ಸಾಕಷ್ಟು ಜನ ನಾಯಕರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಹುದ್ದೆಗೆ ಕರ್ನಾಟಕದಿಂದ ಯಾರೂ ಅಭ್ಯರ್ಥಿ ಇಲ್ಲ ಎಂಬುದಾಗಿ ನಾನು ಹೇಳಿಲ್ಲ. ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಪತ್ರಕರ್ತರೊಬ್ಬರು ಪ್ರಧಾನಿ ಹುದ್ದೆಗೆ ನೀವು ಕರ್ನಾಟಕದಿಂದ ಅಭ್ಯರ್ಥಿ ಆಗುವಿರೇ ಎಂದು ಪ್ರಶ್ನಿಸಿದರು. ಕರ್ನಾಟಕದಿಂದ ನಾನು ಪ್ರಧಾನಿ ಅಭ್ಯರ್ಥಿ ಅಲ್ಲ. ಆಗುವುದೂ ಇಲ್ಲ ಎಂದು ಹೇಳಿದ್ದೆ. ಆದರೆ ಕೆಲ ಮಾಧ್ಯಮಗಳಲ್ಲಿ ಇದು ತಪ್ಪಾಗಿ ವರದಿಯಾಗಿದೆ. ಕರ್ನಾಟಕದಿಂದ ಯಾರೂ ಅಭ್ಯರ್ಥಿ ಇಲ್ಲ ಎಂದು ವರದಿಯಾಗಿದೆ. ಆದರೆ ನಾನು ಹಾಗೆ ಹೇಳಿದ್ದಲ್ಲ. ಪ್ರಧಾನಿ ಹುದ್ದೆಗೆ ಅರ್ಹರಾದವರು, ಸಮರ್ಥರು ನಮ್ಮ ರಾಜ್ಯದಲ್ಲಿ ಬಹಳಷ್ಟು ನಾಯಕರಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.