ETV Bharat / state

ಬಿಜೆಪಿ-ಜೆಡಿಎಸ್​ ಮೈತ್ರಿ ರಾಜ್ಯದಲ್ಲಿ 10 ಸ್ಥಾನ ಸಹ ಪಡೆಯಲ್ಲ: ಸಚಿವ ರಾಮಲಿಂಗಾರೆಡ್ಡಿ - Lok Sabha Election 2024

author img

By ETV Bharat Karnataka Team

Published : May 23, 2024, 5:28 PM IST

Updated : May 23, 2024, 10:51 PM IST

ದೇಶದಲ್ಲೂ ಬಿಜೆಪಿ ಸರ್ಕಾರ ಬರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿಯವರೇ ಪಕ್ಷಾಂತರ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ 10 ಸ್ಥಾನಗಳನ್ನು ಗೆಲ್ಲೋದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Transport Minister Ramalinga reddy spoke to the media
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮದವರೊಂದಿಗೆ ಮಾತನಾಡಿದರು. (ETV Bharat)

ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮದವರೊಂದಿಗೆ ಮಾತನಾಡಿದರು. (ETV Bharat)

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ‌ಗೆ‌ ಸಿಂಗಲ್ ಡಿಜಿಟ್ ಸ್ಥಾನ‌‌ ಬರುತ್ತವೆ. ದೇಶದಲ್ಲೂ ಬಿಜೆಪಿ ಸರ್ಕಾರ ಬರುವುದಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿಯವರೇ ಪಕ್ಷಾಂತರ ಮಾಡುತ್ತಾರೆ. ವಿಪಕ್ಷದ 350 ಶಾಸಕರು ಮತ್ತು ಸಂಸದರನ್ನು ಕೇಂದ್ರ ಬಿಜೆಪಿ ಪಕ್ಷಾಂತರ ಮಾಡಿಸಿತ್ತು. ಈಗ ಅದೇ ಅವರಿಗೆ ತಿರುಗು ಬಾಣವಾಗಲಿದೆ. ರಾಜ್ಯದಲ್ಲಿ ಬಿಜೆಪಿ 10 ಸ್ಥಾನಗಳನ್ನು ಮುಟ್ಟಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ, ಜೆಡಿಎಸ್​​​ಗೆ ಸಿಂಗಲ್ ಡಿಜಿಟ್ ಸ್ಥಾನ: ನಿಮ್ಮ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಹಗಲುಗನಸು ಕಾಣುವವರಿಗೆ ನಾವು ಬೇಡ ಎನ್ನುವುದಕ್ಕೆ ಆಗುತ್ತಾ..? ಕನಸು ಕಾಣಲಿ ಬಿಡಿ. ಆದರೆ ಜೂನ್ 4ಕ್ಕೆ ಬರುವ ಫಲಿತಾಂಶದಲ್ಲಿ ನಮಗೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಎಷ್ಟು ಸ್ಥಾನ ಬರುತ್ತವೆ ಎಂಬುದು ಗೊತ್ತಾಗುತ್ತದೆ.‌ ಬಿಜೆಪಿ, ಜೆಡಿಎಸ್​​​ಗೆ ಸಿಂಗಲ್ ಡಿಜಿಟ್ ಸ್ಥಾನಗಳು ಬರುತ್ತವೆ. ದೇಶದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕಾಣಿಸುತ್ತಿಲ್ಲ. ಅಲ್ಲಿಯೂ ಕೂಡ ಬದಲಾವಣೆ ಆಗುತ್ತದೆ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

136 ಜನ ಕಾಂಗ್ರೆಸ್ ಶಾಸಕರು ಇದ್ದರೂ ಕೂಡ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ‌ಯವರು ಪದೇ ಪದೆ ಹೇಳುವ ವಿಚಾರಕ್ಕೆ ನೀವು ಟಿವಿಯಲ್ಲಿ ಪದೇ ಪದೆ ತೋರಿಸುತ್ತಿರಿ, ಪತ್ರಿಕೆಯಲ್ಲಿ ಬರೆಯುತ್ತಿರಿ. ಹಾಗಾಗಿ ಬಿಜೆಪಿಯವರು ಹೇಳುತ್ತಾರೆ. ನಮ್ಮ ರಾಜ್ಯದಲ್ಲಿ ಒಂದೇ ಪಕ್ಷ ಸರ್ಕಾರ ನಡೆಸುತ್ತಿದೆ. ನಮ್ಮಲ್ಲಿ ಒಗ್ಗಟ್ಟಿದೆ, ಲೋಕಸಭೆ ಚುನಾವಣೆ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಇರುತ್ತಾರೆ..? ಎಂಬುದನ್ನು ಅವರು ನೋಡಿಕೊಳ್ಳಬೇಕು. ಅವರಲ್ಲಿ ಪಕ್ಷಾಂತರ ಆಗುವುದನ್ನು ಮೊದಲು ಬಂದೋಬಸ್ತ್ ಮಾಡಿಕೊಳ್ಳಲಿ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ರಾಮಲಿಂಗಾರೆಡ್ಡಿ ತಿರುಗೇಟು ಕೊಟ್ಟರು‌.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಅದೆಲ್ಲ ಹೈಕಮಾಂಡ್​​ಗೆ ಬಿಟ್ಟಿದ್ದು. ಆ ತರಹದ್ದು ಅವಕಾಶ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಎಲ್ಲಿಯವರೆಗೆ ಮುಂದುವರಿಯುತ್ತಾರೆ ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

ಮೋದಿಯವರಿಂದ ಏನೂ ಕಲಿಯಬೇಕಿಲ್ಲ: ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್​​ಗಿಂತೂ ಕೆಟ್ಟದಾಗಿದೆ ಎಂದು‌ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ, ದೇಶ ಕಟ್ಟಿದ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಮೋದಿ ಪ್ರಧಾನಿ ಆಗಿರುವ ಪಕ್ಷವೇ ಇರಲಿಲ್ಲ. ಆರ್. ಎಸ್.ಎಸ್., ವಿಶ್ವ ಹಿಂದೂ ಪರಿಷತ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಮೋದಿಯವರಿಂದ ನಾವು ಏನೂ ಕಲಿಯಬೇಕಿಲ್ಲ. ಮೋದಿಯವರು ದೇಶವನ್ನು ಸಾಲದ ಸುಳಿಗೆ ತಳ್ಳಿದ್ದಾರೆ ಎಂದು ತಿರುಗೇಟು ಕೊಟ್ಟರು.

130 ಲಕ್ಷ ಕೋಟಿ ಸಾಲ: 1947 ರಿಂದ 2014ರ ವರೆಗೆ 54 ಲಕ್ಷ ಕೋಟಿ ದೇಶದ ಸಾಲವಿತ್ತು. 10 ವರ್ಷದಲ್ಲಿ ಮೋದಿ ಒಬ್ಬರೇ 130 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಹರಿಶ್ಚಂದ್ರ ತರಹ ಮೋದಿ ಮಾತನಾಡುತ್ತಾರೆ. ದೇಶದಲ್ಲಿ ಇರುವ ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು. ದೇಶದ ಭ್ರಷ್ಟಾಚಾರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಎಲ್ಲ ಕೆಟ್ಟ ಜನರೆಲ್ಲರೂ ಬಿಜೆಪಿ ಪಕ್ಷದಲ್ಲಿ ಇದ್ದಾರೆ. ನಮ್ಮ ಪಕ್ಷ ಶುದ್ಧೀಕರಣವಾಗಿದೆ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ಮಾಡಿದರು.

ರಾಜ್ಯದಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ ನಾವು ಮಾಡಲ್ಲ, ನಮಗೆ ಅವಶ್ಯಕತೆ ಇಲ್ಲ. ಅವರು ಸೋತರೆ ಓಡಿಹೋಗುತ್ತಾರೆ. ನಮ್ಮವರು ಯಾರೂ ಬಿಜೆಪಿಗೆ ಹೋಗಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ, ಸಂಪುಟ ಪುನರ್ ರಚನೆ ಹೈಕಮಾಂಡ್ ಗೆ ಬಿಟ್ಟಿದ್ದು. ಹಿರಿಯ ಸಚಿವರಿಗೆ ಕೋಕ್ ವಿಚಾರವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದರು.

ಪೆನ್ ಡ್ರೈವ್ ಪ್ರಕರಣ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ವಿಚಾರಕ್ಕೆ ನಮ್ಮ ಸರ್ಕಾರಕ್ಕೂ, ನಮ್ಮ ಪಕ್ಷಕ್ಕೂ ಹಾಗೂ ಪೆನ್ ಡ್ರೈವ್ ಗೂ ಯಾವ ಸಂಬಂಧವೂ ಇಲ್ಲ. ಪ್ರಜ್ವಲ್ ರೇವಣ್ಣ ಕರೆತರುವ ಬಗ್ಗೆ ಗೃಹ ಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಇದನ್ನೂ ಓದಿ:ತಾಳ್ಮೆ ಪರೀಕ್ಷಿಸಬೇಡ, ದೇಶಕ್ಕೆ ಬಂದು ವಿಚಾರಣೆ ಎದುರಿಸು: ಪ್ರಜ್ವಲ್​ಗೆ ದೇವೇಗೌಡ ಎಚ್ಚರಿಕೆ ಪತ್ರ - HD devegowda

Last Updated : May 23, 2024, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.