ETV Bharat / state

ಪೊಲೀಸರಿಗೆ ಶರಣಾಗದಿದ್ದಲ್ಲಿ ಏಕಾಂಗಿಯಾಗುವೆ: ಕುಟುಂಬದಿಂದಲೇ ಹೊರಹಾಕುವುದಾಗಿ ಪ್ರಜ್ವಲ್​​ಗೆ ಎಚ್ಚರಿಕೆ ನೀಡಿದ ದೇವೇಗೌಡ - DEVEGOWDA wrote letter to Prajwal

author img

By ETV Bharat Karnataka Team

Published : May 23, 2024, 4:34 PM IST

Updated : May 23, 2024, 6:48 PM IST

ಪ್ರಜ್ವಲ್‌ ಎಲ್ಲಿದ್ದರೂ ಬಂದು ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು, ಈ ಎಚ್ಚರಿಕೆಗೆ ತಲೆಬಾಗದಿದ್ದಲ್ಲಿ, ಆತ ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಕುಟುಂಬದಿಂದ ಹೊರಹಾಕುವ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬಹಿರಂಗ ಪತ್ರದ ಮೂಲಕ ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಜ್ವಲ್​ಗೆ ದೇವೇಗೌಡ ಎಚ್ಚರಿಕೆ ಪತ್ರ
ಪ್ರಜ್ವಲ್​ಗೆ ದೇವೇಗೌಡ ಎಚ್ಚರಿಕೆ ಪತ್ರ (ETV Bharat)

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್​ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲಿಯೇ ಇದ್ದರೂ ದೇಶಕ್ಕೆ ಮರಳಿ ಕಾನೂನು ಪ್ರಕಾರ ವಿಚಾರಣೆ ಎದುರಿಸಲು ಅಮಾನತಾದ ಸಂಸದನಿಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಅವರು, "ಕುಟುಂಬದ ಮರ್ಯಾದೆ ಹಾಳಾಗುತ್ತಿದೆ. ನೀನು ಎಲ್ಲಿಯೇ ಇದ್ದರೂ, ದೇಶಕ್ಕೆ ಮರಳು. ನನ್ನ ತಾಳ್ಮೆ, ಸಂಯಮ ಪರೀಕ್ಷೆ ಮಾಡಬೇಡ. ನನ್ನ ಬಗ್ಗೆ ಗೌರವ ಇದ್ದರೆ, ಈ ಕೂಡಲೇ ವಾಪಸ್​ ಬಂದುಬಿಡು. ಪ್ರಕರಣವನ್ನು ಕಾನೂನು ರೀತ್ಯಾ ಎದುರಿಸು. ಇಲ್ಲವಾದಲ್ಲಿ ಕುಟುಂಬದ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಿಗೆ ಪ್ರಕ್ರಿಯೆ: ವಿದೇಶಾಂಗ ಇಲಾಖೆ ಸ್ಪಂದನೆ - PRAJWAL PASSPORT MEA REACT

ಬರದಿದ್ದಲ್ಲಿ ಕುಟುಂಬದಿಂದ ಹೊರಬೀಳುವೆ; ಪ್ರಜ್ವಲ್‌ ಎಲ್ಲಿದ್ದರೂ ಬಂದು ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು, ಈ ಎಚ್ಚರಿಕೆಗೆ ತಲೆಬಾಗದಿದ್ದಲ್ಲಿ, ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಕುಟುಂಬದಿಂದ ಹೊರಹಾಕುವ ಕುರಿತು ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಜ್ವಲ್​ ನನಗೆ, ಕುಟುಂಬಕ್ಕೆ, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಪಕ್ಷದ ಕಾರ್ಯಕರ್ತರಿಗೆ ಆಘಾತ ತಂದೊಡ್ಡಿದ್ದಾನೆ. ಈ ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು. ನಾನು ಈಗಾಗಲೇ ಹೇಳಿದಂತೆ ಕಾನೂನಿನ ಪ್ರಕಾರ ಆತ ತಪ್ಪಿತಸ್ಥನಾಗಿದ್ದರೆ, ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಈ ಬಗ್ಗೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರೂ ಆರೋಪ ಕೇಳಿಬಂದ ಆರಂಭದಿಂದಲೂ ಇದನ್ನೇ ಪ್ರತಿಪಾದಿಸಿದ್ದಾರೆ. ನನ್ನ ನಿಲುವೂ ಇದೆ ಆಗಿದೆ ಎಂದಿದ್ದಾರೆ.

ಕೆಲವು ವಾರಗಳಿಂದ ಜನರು ನನ್ನ ಮತ್ತು ಕುಟುಂಬದ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕೆ ಮಾಡಲೂ ಹೋಗುವುದಿಲ್ಲ. ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂದೂ ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ ಎಂದಿದ್ದಾರೆ.

ಪ್ರಜ್ವಲ್​ ಚಟುವಟಿಕೆಯ ಬಗ್ಗೆ ತಿಳಿದಿರಲಿಲ್ಲ: ಪ್ರಜ್ವಲ್‌ನ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ನಾನು ಮನವರಿಕೆ ಮಾಡಿಕೊಡಲೂ ಸಾಧ್ಯವಿಲ್ಲ. ಆತನನ್ನು ರಕ್ಷಿಸುವ ಇರಾದೆಯೂ ನನಗಿಲ್ಲ. ಆತನ ಈಗಿನ ಚಲನವಲನ ಮತ್ತು ವಿದೇಶ ಪ್ರವಾಸದ ಬಗ್ಗೆಯೂ ಗೊತ್ತಿರಲಿಲ್ಲ. ಇದನ್ನು ಜನರಿಗೆ ಅರ್ಥ ಮಾಡಿಸಲೂ ಸಾಧ್ಯವಿಲ್ಲ. ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರ ನೀಡುವೆ. ನನಗೆ ದೇವರಲ್ಲಿ ನಂಬಿಕೆ ಇದೆ. ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದಲ್ಲಿ ನಡೆದ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉತ್ತೇಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡಲ್ಲ. ಇದೆಲ್ಲವನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ. ಇದಕ್ಕೆ ಸೂಕ್ತ ಬೆಲೆಯೂ ತೆರಬೇಕಾಗುತ್ತದೆ. ನನ್ನ ಸತ್ಯ ಮತ್ತು ನೋವಿನ ಹೊರೆಯನ್ನು ಭಗವಂತನ ಪದತಳದಲ್ಲಿ ಇರಿಸಿದ್ದೇನೆ ಎಂದಿದ್ದಾರೆ.

ದೇಶಕ್ಕೆ ಬಾ, ವಿಚಾರಣೆಗೆ ಒಳಗಾಗು: ಆರೋಪಿತನಾಗಿರುವ ಪ್ರಜ್ವಲ್‌ ಎಲ್ಲಿದ್ದರೂ ದೇಶಕ್ಕೆ ಬಂದು ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು. ಇದರಲ್ಲಿ ಯಾವುದೇ ಮುಲಾಜು, ಮರ್ಜಿಯಿಲ್ಲ. ಇದು ನಾನು ಆತನಿಗೆ ಕೊಡುತ್ತಿರುವ ಎಚ್ಚರಿಕೆ. ಆತ ಇದನ್ನು ಪರಿಗಣಿಸದಿದ್ದರೆ, ನನ್ನ ಮತ್ತು ಕುಟುಂಬದವರೆಲ್ಲರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನಿದೆ. ಈ ಎಚ್ಚರಿಕೆಯನ್ನು ಪಾಲಿಸದಿದ್ದರೆ, ಆತ ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಗೌರವವಿದ್ದಲ್ಲಿ ಕೂಡಲೆ ದೇಶಕ್ಕೆ ಹಿಂದಿರುಗಿ ಬರಬೇಕು. ನಾನಾಗಲಿ, ನನ್ನ ಕುಟುಂಬದವರಾಗಲಿ ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ. ಯಾವುದೇ ಭಾವನೆಗೆ ಸಿಲುಕುವುದಿಲ್ಲ. ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಇದನ್ನು ಓದಿ: ಪ್ರಜ್ವಲ್ ಪಾಸ್​ಪೋರ್ಟ್​ ಅಮಾನತಿಗೆ ಬರೀ ಪತ್ರ ಬರೆದರೆ ಸಾಲದು : ಸಿಎಂ ಪತ್ರಕ್ಕೆ ಪಿ ರಾಜೀವ್ ಟಾಂಗ್ - P RAJEEV CRITICIZED CM LETTER

ಆರೋಪ ಬಂದಾಗ ಎದುರಿಸಿ ನಿಲ್ಲಬೇಕು, ಹಾಸನ ಸಂಸದರು ಎಲ್ಲಿದ್ದರೂ ಬಂದು ತನಿಖೆ ಎದುರಿಸಲಿ: ನಿಖಿಲ್ ಕುಮಾರಸ್ವಾಮಿ - Nikhil Kumaraswamy

Last Updated : May 23, 2024, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.