ETV Bharat / bharat

ಸಂಸದ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಿಗೆ ಪ್ರಕ್ರಿಯೆ: ವಿದೇಶಾಂಗ ಇಲಾಖೆ ಸ್ಪಂದನೆ - PRAJWAL PASSPORT MEA REACT

author img

By PTI

Published : May 23, 2024, 4:04 PM IST

Updated : May 23, 2024, 4:28 PM IST

ಪ್ರಜ್ವಲ್​ ರೇವಣ್ಣಗೆ ಮಾನ್ಯವಾಗಿರುವ ರಾಜತಾಂತ್ರಿಕ ಪಾಸ್​ಪೋರ್ಟ್​ ಅನ್ನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ಮಾಡಿದ ಮನವಿಗೆ ವಿದೇಶಾಂಗ ಇಲಾಖೆ ಸ್ಪಂದಿಸಿದೆ.

ವಿದೇಶಾಂಗ ಇಲಾಖೆ
ವಿದೇಶಾಂಗ ಇಲಾಖೆ (ETV Bharat)

ನವದೆಹಲಿ: ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತು ದೇಶದಿಂದ ಪರಾರಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್​ ರೇವಣ್ಣ ಅವರ ಪಾಸ್​ಪೋರ್ಟ್​ ರದ್ದು ಮಾಡಲು ಕರ್ನಾಟಕ ಸರ್ಕಾರ ಮಾಡಿರುವ ಮನವಿಯನ್ನು ವಿದೇಶಾಂಗ ಇಲಾಖೆ (ಎಂಇಎ) ಪರಿಗಣಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಗುರುವಾರ ತಿಳಿಸಿದೆ.

ಸಂಸದರ ರಾಜತಾಂತ್ರಿಕ ಪಾಸ್​​ಪೋರ್ಟ್​ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರದಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬಂದಿದೆ. ಇದನ್ನು ಶೀಘ್ರವೇ ಪರಿಗಣನೆಗೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾಗಿ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಜೆಡಿಎಸ್​ನಿಂದ ಅಮಾನತಾದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದ್ದರೂ, ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್​ ಹೇಳಿದ ಬೆನ್ನಲ್ಲೇ ವಿದೇಶಾಂಗ ಇಲಾಖೆಯಿಂದ ಈ ಮಾಹಿತಿ ಹೊರಬಿದ್ದಿದೆ.

ಕೋರ್ಟ್​ನಿಂದ ಬಂಧನ ವಾರಂಟ್​: ಲೈಂಗಿಕ ಕಿರುಕುಳ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್​ಐಟಿ)ಯು ಸಲ್ಲಿಸಿದ ಅರ್ಜಿಯ ಮೇರೆಗೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ವಿರುದ್ಧ ಶನಿವಾರ ಬಂಧನ ವಾರಂಟ್ ಹೊರಡಿಸಿದೆ. ಬಳಿಕ ರಾಜ್ಯ ಸರ್ಕಾರ ಪಾಸ್​ಪೋರ್ಟ್​ ರದ್ದು ಮಾಡಲು ಕೋರಿ ವಿದೇಶಾಂಗ ಇಲಾಖೆ ಪತ್ರ ಬರೆದಿತ್ತು.

ಇದಕ್ಕೂ ಮೊದಲು ಸಂಸದರು ರಾಜತಾಂತ್ರಿಕ ಪಾಸ್​ಪೋರ್ಟ್​ನ ಮೇಲೆ ವಿದೇಶ ಪ್ರಯಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ಸರ್ಕಾರವೂ ಇದಕ್ಕೆ ಅನುಮತಿ ನೀಡಿಲ್ಲ ಎಂದು ವಿದೇಶಾಂಗ ಇಲಾಖೆ ಈ ತಿಂಗಳ ಆರಂಭದಲ್ಲಿ ಸ್ಪಷ್ಟನೆ ನೀಡಿತ್ತು. ಸಂಸದರಿಗೆ ಮಾನ್ಯವಾಗಿರುವ ರಾಜತಾಂತ್ರಿಕ ಪಾಸ್​ಪೋರ್ಟ್​ ಅನ್ನು ಬಳಸಿಕೊಂಡು ಜರ್ಮನಿಗೆ ತೆರಳಲು ಅವರು ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿಲ್ಲ ಎಂದು ವಕ್ತಾರ ರಣಧೀರ್​ ಜೈಸ್ವಾಲ್​ ಅವರು ಸ್ಪಷ್ಟನೆ ನೀಡಿದ್ದರು.

ಪ್ರಧಾನಿಗೆ 2ನೇ ಸಲ ಸಿಎಂ ಪತ್ರ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೀಡಲಾಗಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಪತ್ರ ಬರೆದಿದ್ದಾರೆ.

ಈಗಾಗಲೇ ಒಮ್ಮೆ ಪತ್ರದ ಬರೆದು ಡಿಪ್ಲೊಮ್ಯಾಟಿಕ್ ಪಾಸ್​​ಪೋರ್ಟ್ ರದ್ದುಪಡಿಸಲು ಮನವಿ ಮಾಡಿದ್ದ ಸಿಎಂ, ಇದೀಗ ಎರಡನೇ ಪತ್ರ ಬರೆದಿದ್ದಾರೆ. ಪ್ರಜ್ವಲ್ ರೇವಣ್ಣ ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿ, ತಲೆಮರೆಸಿಕೊಂಡಿರುವ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ತ್ವರಿತ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ಪಾಸ್​ಪೋರ್ಟ್​ ಅಮಾನತಿಗೆ ಬರೀ ಪತ್ರ ಬರೆದರೆ ಸಾಲದು : ಸಿಎಂ ಪತ್ರಕ್ಕೆ ಪಿ ರಾಜೀವ್ ಟಾಂಗ್ - P RAJEEV CRITICIZED CM LETTER

Last Updated : May 23, 2024, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.