ಕರ್ನಾಟಕ

karnataka

ರಾಹುಲ್​ಗೆ ಹೊಸ ಇಮೇಜ್ ನೀಡಿದ ಪಾದಯಾತ್ರೆ: ಸಿದ್ದರಾಮಯ್ಯ - ಡಿಕೆಶಿ ಬಾಂಧವ್ಯಕ್ಕೂ ಮುನ್ನುಡಿ

By

Published : Oct 22, 2022, 11:53 AM IST

Updated : Oct 22, 2022, 12:49 PM IST

ಪಾದಯಾತ್ರೆ ರಾಹುಲ್ ಗಾಂಧಿಗೆ ಹೊಸ ಇಮೇಜ್ ನೀಡುತ್ತಿದೆ. ಒಬ್ಬ ಸಮರ್ಥ ನಾಯಕ ಎಂದು ಗುರುತಿಸಿಕೊಳ್ಳುವ ಛಾಪು ಮೂಡಿಸಿಕೊಳ್ಳುವ ವೇದಿಕೆಯಾಗಿ ಲಭಿಸಿದೆ. ಇದನ್ನು ಅವರು ಸಮರ್ಥವಾಗಿ ಬಳಸಿಕೊಳ್ಳುವ ಜತೆಗೆ ಇತರ ನಾಯಕರನ್ನೂ ಒಟ್ಟಾಗಿಸಿಕೊಂಡು ಸಾಗುವ ಯತ್ನ ಮಾಡಿದ್ದಾರೆ.

ರಾಹುಲ್​ಗೆ ಹೊಸ ಇಮೇಜ್ ನೀಡಿದ ಪಾದಯಾತ್ರೆ: ಸಿದ್ದರಾಮಯ್ಯ - ಡಿಕೆಶಿ ಬಾಂಧವ್ಯಕ್ಕೂ ಮುನ್ನುಡಿ
Padayatra gave a new image to Rahul: Siddaramaiah DK prelude to the bond

ಬೆಂಗಳೂರು: ಇಬ್ಬರು ಸಿಎಂ ಆಕಾಂಕ್ಷಿಗಳನ್ನು ಒಗ್ಗೂಡಿಸುವುದು ಎಷ್ಟು ಕಷ್ಟಸಾಧ್ಯ ಎನ್ನುವುದು ಈ ಬಾರಿ ಪಾದಯಾತ್ರೆ ಉದ್ದಕ್ಕೂ ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ ಅರಿವಾಗಿದೆ. 2023ರಲ್ಲಿ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಭಾರತ್ ಜೋಡೊ ಯಾತ್ರೆಯ ಕ್ಷಣಚಿತ್ರಗಳು

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಎಂ ರೇಸ್​​ನಲ್ಲಿರುವ ಪ್ರಮುಖ ಓಟಗಾರರು. ಇವರಲ್ಲದೇ ಇನ್ನೂ ಐದಾರು ನಾಯಕರು ರೇಸ್​ನಲ್ಲಿ ಇದ್ದಾರೆ. ಆದರೆ, ಚುನಾವಣೆಗೆ ಮುನ್ನ ಈ ರೇಸ್ ಜೋರಾಗಿ ನಡೆದರೆ, ಇವರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದು ತಿಳಿದು ಜನ ಮತ ಹಾಕದಿದ್ದರೆ ಎನ್ನುವ ಆತಂಕ ಒಂದೆಡೆ.

ಭಾರತ್ ಜೋಡೊ ಯಾತ್ರೆಯ ಕ್ಷಣಚಿತ್ರಗಳು

ಇನ್ನೊಂದೆಡೆ 23 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಳ್ಳಬಹುದು ಎನ್ನುವ ಆಶಯ ರಾಷ್ಟ್ರೀಯ ನಾಯಕರದ್ದಾಗಿದೆ. ಇದಕ್ಕೆ ಪೂರಕ ವಾತಾವರಣ ನಿರ್ಮಿಸುವ ಕಾರ್ಯವನ್ನು ರಾಹುಲ್ ಗಾಂಧಿ ಕರ್ನಾಟಕದಲ್ಲಿ ಭಾರತ್ ಜೋಡೋ ಪಾದಯಾತ್ರೆ ನಡೆದು ಸಾಗಿದ ಮಾರ್ಗದ ಉದ್ದಕ್ಕೂ ಮಾಡಿದ್ದಾರೆ.

ಭಾರತ್ ಜೋಡೊ ಯಾತ್ರೆಯ ಕ್ಷಣಚಿತ್ರಗಳು

ಅವಕಾಶ ಸಿಕ್ಕಾಗೆಲ್ಲಾ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವ​ರನ್ನು ಒಗ್ಗೂಡಿಸಿಕೊಂಡು ಸಾಗುವ ಯತ್ನ ಮಾಡಿದ್ದಾರೆ. ಇಬ್ಬರಲ್ಲಿ ಒಬ್ಬರು ಇದ್ದ ಸಂದರ್ಭ ಅವರನ್ನು ವಿಶ್ವಾಸಕ್ಕೆ ಪಡೆದು ನಾಯಕತ್ವ ರೂಪಿಸಿಕೊಳ್ಳುವ ಸಮಾನ ಅವಕಾಶ ಒದಗಿಸಿದ್ದಾರೆ. ಪಾದಯಾತ್ರೆ ರಾಹುಲ್ ಗಾಂಧಿಗೆ ಹೊಸ ಇಮೇಜ್ ನೀಡುತ್ತಿದೆ. ಒಬ್ಬ ಸಮರ್ಥ ನಾಯಕ ಎಂದು ಗುರುತಿಸಿಕೊಳ್ಳುವ ಛಾಪು ಮೂಡಿಸಿಕೊಳ್ಳುವ ವೇದಿಕೆಯಾಗಿ ಲಭಿಸಿದೆ. ಇದನ್ನು ಅವರು ಸಮರ್ಥವಾಗಿ ಬಳಸಿಕೊಳ್ಳುವ ಜತೆಗೆ ಇತರ ನಾಯಕರನ್ನೂ ಒಟ್ಟಾಗಿಸಿಕೊಂಡು ಸಾಗುವ ಯತ್ನ ಮಾಡಿದ್ದಾರೆ.

ಭಾರತ್ ಜೋಡೊ ಯಾತ್ರೆಯ ಕ್ಷಣಚಿತ್ರಗಳು

ರಾಜ್ಯದಲ್ಲಿ ಪಾದಯಾತ್ರೆ ಸಾಗಿದ ಸಂದರ್ಭದಲ್ಲಿ ಅವರು ಸಿದ್ದರಾಮಯ್ಯ - ಡಿಕೆಶಿ ನಡುವೆ ಸಾಮರಸ್ಯ ಮೂಡಿಸುವ ಹಲವು ಯತ್ನ ಮಾಡಿ ಯಶಸ್ಸು ಸಾಧಿಸಿದ್ದಾರೆ. ಇಬ್ಬರೊಂದಿಗೂ ಒಟ್ಟಾಗಿ ಹೆಜ್ಜೆ ಹಾಕುವುದು, ಇಬ್ಬರನ್ನೂ ಮೆಚ್ಚಿಸುವುದು, ಒಟ್ಟಾಗಿ ಓಡುವುದು, ನಡೆಯುವುದು, ಊಟ ಮಾಡುವುದು, ಜನರ ಜತೆ ಬೆರೆತ ಸಂದರ್ಭ ಇಬ್ಬರಿಗೂ ಸಮಾನ ಪ್ರಾಶಸ್ತ್ಯ ನೀಡುವ ಮೂಲಕ ಭಾರತ್ ಜೋಡೊ ಯಶಸ್ಸು ಸಾಧಿಸುವಂತೆ ಮಾಡುವ ಜತೆಗೆ ರಾಜ್ಯದ ಇಬ್ಬರು ನಾಯಕರ ನಡುವಿನ ಬಾಂಧವ್ಯ ಜೋಡೊ ಸಹ ಮಾಡುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮುಂದುವರೆಯುವಂತೆ ನೋಡಿಕೊಳ್ಳುವುದು ಸಹ ಮಹತ್ವದ್ದಾಗಿದೆ.

ಭಾರತ್ ಜೋಡೊ ಯಾತ್ರೆಯ ಕ್ಷಣಚಿತ್ರಗಳು

ರಥಯಾತ್ರೆ ಬಲ: ರಾಜ್ಯದಲ್ಲಿ ಈಗಾಗಲೇ ಮೇಕೆದಾಟು ಪಾದಯಾತ್ರೆ ನಡೆಸಿ ಕಾಂಗ್ರೆಸ್ ಯಶಸ್ಸು ಸಾಧಿಸಿದೆ. ಭಾರತ್ ಜೋಡೊ ಸಹ ಗೆದ್ದಿದೆ. ಇನ್ನು ಕೆಲ ದಿನಗಳಲ್ಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ರಥಯಾತ್ರೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಒಂದೊಮ್ಮೆ ಇದು ಮುಂದಿನ ವರ್ಷ ಆರಂಭದಲ್ಲಿ ನಡೆದರೆ, ಆಗ ಮತ್ತೊಮ್ಮೆ ರಾಜ್ಯ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಹೆಜ್ಜೆ ಹಾಕಬೇಕಿದೆ. ಆ ಸಂದರ್ಭದಲ್ಲಿ ಮತ್ತೊಮ್ಮೆ ರಾಜ್ಯ ನಾಯಕರಲ್ಲಿ ಒಗ್ಗಟ್ಟಿನ ಪ್ರದರ್ಶನವಾದರೆ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೂ ಕೊಂಚ ವಿಶ್ವಾಸ ಮೂಡಲಿದೆ.

ಭಾರತ್ ಜೋಡೊ ಯಾತ್ರೆಯ ಕ್ಷಣಚಿತ್ರಗಳು

ಬಿಜೆಪಿ ಸರ್ಕಾರದ ವಿರೋಧಿ ಅಲೆ, ಶೇ 40ರಷ್ಟು ಭ್ರಷ್ಟಾಚಾರ ಆರೋಪ, ಹಿಂದಿನ ಸರ್ಕಾರದ ಭಾಗ್ಯಗಳು ಕಾಂಗ್ರೆಸ್ ಪಾಲಿಗೆ ವರವಾಗಿ ಲಭಿಸಿದರೆ ಗೆಲುವು ಕೈಗೆಟುಕುವ ಸಾಧ್ಯತೆ ಇದೆ. ಆದರೆ, ಒಗ್ಗಟ್ಟು ರಾಜ್ಯ ನಾಯಕರಲ್ಲಿ ಮುಖ್ಯ. ಒಡೆದ ಮನಸುಗಳನ್ನು ಒಂದುಗೂಡಿಸುವ ಯತ್ನದಲ್ಲಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಯಶಸ್ಸು ಕಂಡಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಈ ಇಬ್ಬರು ನಾಯಕರ ಮೇಲಿದೆ. ಇದೇ ಜನರ ಒಲವು ಹೆಚ್ಚಿಸಿಕೊಳ್ಳಲು ಸಹ ರಾಜ್ಯ ಕಾಂಗ್ರೆಸ್​ಗೆ ಬಲ ತುಂಬಲಿದೆ.

ಕಾಂಗ್ರೆಸ್ ಬಲ ಹೆಚ್ಚಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಜ್ಯ ಕಾಂಗ್ರೆಸ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ರಾಹುಲ್ ಗಾಂಧಿ ಕೈಗೊಂಡ ಭಾರತ್ ಜೋಡೊ ಯಾತ್ರೆ ಕಾಂಗ್ರೆಸ್ ನಾಯಕರಿಗೆ ಬಲ ಹೆಚ್ಚಿಸಿದೆ. ನವ ಚೈತನ್ಯದೊಂದಿಗೆ ಕಾರ್ಯನಿರ್ವಹಿಸಲು ಉತ್ಸುಕತೆ ನೀಡಿದೆ. ರಾಜ್ಯ ನಾಯಕರಲ್ಲಿ ಯಾವತ್ತೂ ಒಡಕು ಮೂಡಿಲ್ಲ. ಆಗಾಗ ನೀಡುವ ಹೇಳಿಕೆ ಕೊಂಚ ಭಿನ್ನಾಭಿಪ್ರಾಯ ಇದೆ ಎಂಬ ರೀತಿ ಭಾವನೆ ಮೂಡಿಸಿರಬಹುದು.

ರಾಜ್ಯದಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ನಿಜ. ಪಕ್ಷಕ್ಕಾಗಿ ಕೊಡುಗೆ ನೀಡಿದವರು ಸಾಕಷ್ಟು ಮಂದಿ ಇದ್ದಾರೆ. ಪ್ರತಿಯೊಬ್ಬರಿಗೂ ಆಸೆ ಇರುವುದು ಸಹಜ. ಆದರೆ ಸೂಕ್ತ ಸಮಯಕ್ಕೆ ಸೂಕ್ತ ವ್ಯಕ್ತಿಯನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡಲಿದೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆನ್ನುವುದು ಪಕ್ಷದ ವರಿಷ್ಠರಿಗೆ ಗೊತ್ತು. ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುವುದು ನಿಶ್ಚಿತ. ಲೋಕಸಭೆ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್ ಪಾದಯಾತ್ರೆ ಎಫೆಕ್ಟ್: ಬಿಜೆಪಿಯಲ್ಲಿ ಬಿರುಸುಗೊಂಡ ತಂತ್ರಗಾರಿಕೆ ಪ್ರಯೋಗ, ಕಾಂಗ್ರೆಸ್​​ಗೆ ಶಾಕ್​ ಮೇಲೆ ಶಾಕ್

Last Updated :Oct 22, 2022, 12:49 PM IST

ABOUT THE AUTHOR

...view details