ಕರ್ನಾಟಕ

karnataka

ಭಾರತ vs ನೆದರ್ಲೆಂಡ್ಸ್‌ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸರಕು ಸಾಗಣೆ ವಾಹನಗಳಿಗೆ ನಿಷೇಧ

By ETV Bharat Karnataka Team

Published : Nov 11, 2023, 5:05 PM IST

Updated : Nov 11, 2023, 9:47 PM IST

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಮ್​ ಇಂಡಿಯಾ ವಿಶ್ವಕಪ್​ ಲೀಗ್​ ಹಂತದ ಕೊನೆಯ ಪಂದ್ಯವನ್ನು ನೆದರ್ಲೆಂಡ್ಸ್​ ವಿರುದ್ಧ ಆಡುತ್ತಿದೆ.

india-vs-netherlands-match
india-vs-netherlands-match

ಭಾರತ vs ನೆದರ್ಲೆಂಡ್ಸ್‌ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಿಗಿ ಭದ್ರತೆ - ಕೇಂದ್ರ ವಿಭಾಗದ ಡಿಸಿಪಿ‌ ಶೇಖರ್.ಎಚ್.ಟಿ

ಬೆಂಗಳೂರು:ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಹಾಗೂ ನೆದರ್ಲೆಂಡ್ಸ್​ ನಡುವಿನ ಪಂದ್ಯಕ್ಕೆ ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಮೈದಾನದ ಸುತ್ತಮುತ್ತ ಸರಕು ಹಾಗೂ ಸಾಗಣಿಕೆ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ.

ವಿಶ್ವಕಪ್‌ನಲ್ಲಿ ಲೀಗ್ ಹಂತದ ಮತ್ತು ಭಾರತ ತಂಡದ ಕೊನೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಯಾವುದೇ ರೀತಿಯ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗಿದೆ. ಕ್ಯಾಬ್​ಗಳಿಗೆ ಪಿಕ್ ಅಪ್ ಅಂಡ್ ಡ್ರಾಪ್ ಸ್ಥಳಗಳನ್ನ ಗುರುತಿಸಲಾಗಿದೆ. ವಾರಾಂತ್ಯ ಆಗಿರುವುದರಿಂದ ನಾಳೆ ಸಾರ್ವಜನಿಕರು ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಸಾಧ್ಯವಾದಷ್ಡು ಕಡಿಮೆ ಮಾಡಿದರೆ ಉತ್ತಮ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ಭದ್ರತೆಯ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ‌ ಶೇಖರ್.ಎಚ್.ಟಿ ''ಬೆಂಗಳೂರಲ್ಲಿ ವಿಶ್ವಕಪ್‌ನ ಒಟ್ಟು ಐದು ಪಂದ್ಯಗಳು ನಿಗದಿಯಾಗಿದ್ದವು. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದೆ, ಐದನೇ ಪಂದ್ಯ ನಾಳೆ ಭಾರತ - ನೆದರ್ಲ್ಯಾಂಡ್ಸ್ ನಡುವೆ ಲೀಗ್‌ನ ಕೊನೆಯ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ‌ ಸ್ಟೇಡಿಯಂ ಸುತ್ತ ಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, 9 ಜನ ಎಸಿಪಿ, 28 ಎಸ್​ಐ, 86 ಜನ ಪಿಎಸ್ಐ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೊತೆಗೆ 4 ಕೆಎಸ್ಆರ್​ಪಿ ತುಕಡಿ,‌ 2 ಡಿ.ಸ್ವಾಟ್ಸ್ ಹಾಗೂ ಆಂಬ್ಯುಲೆನ್ಸ್​ ವ್ಯವಸ್ಥೆ, ಅಹಿತಕರ ಘಟನೆಗಳಾಗದಂತೆ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂನ ಎಲ್ಲಾ ಗೇಟ್ ಬಳಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಎಲ್ಲರೂ ಟಿಕೆಟ್ ಹಿಂದೆ ನಮೂದಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು'' ಎಂದಿದ್ದಾರೆ.

ಟೂರ್ನಿಯಲ್ಲಿ ಒಂದೂ ಸೋಲು ಕಾಣದೇ ಟೇಬಲ್​ ಟಾಪ್​ನಲ್ಲಿರುವ ಟೀಮ್​ ಇಂಡಿಯಾಕ್ಕೆ ತಳ ಮಟ್ಟದಲ್ಲಿರುವ ಕ್ರಿಕೆಟ್​ ಶಿಶು ನೆದರ್ಲೆಂಡ್ಸ್​ ಸಾವಾಲು ಒಡ್ಡುತ್ತಿದೆ. ಡಚ್​ ತಂಡ ಅಂಕಪಟ್ಟಿಯಲ್ಲಿ ಕೆಳಗೆ ಇರಬಹುದು. ಹಾಗೆಂದ ಮಾತ್ರಕ್ಕೆ ಕೇವಲವಾಗಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಟೂರ್ನಿಯಲ್ಲಿ ಬಲಿಷ್ಟ ಬ್ಯಾಟಿಂಗ್​​ ಬಲವನ್ನು ಹೊಂದಿರುವ ದಕ್ಷಿಣ ಆಫ್ರಿಕಾವನ್ನೇ ನೆದರ್ಲೆಂಡ್ಸ್​ ಮಣಿಸಿತ್ತು.

ವಿರಾಟ್​, ಸಿರಾಜ್​ ಕ್ರೇಜ್​: ವಿರಾಟ್​ ಕೊಹ್ಲಿ ಮತ್ತು ಮೊಹಮ್ಮದ್​ ಸಿರಾಜ್​ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು (ಆರ್​ಸಿಬಿ) ತಂಡಕ್ಕಾಗಿ ಆಡುತ್ತಿದ್ದಾರೆ. ಹೀಗಾಗಿ ಹೋಮ್​ ಗ್ರೌಂಡ್​ ಅನುಭವ ಈ ಇಬ್ಬರು ಆಟಗಾರರಿಗೆ ಇರಲಿದೆ. ಆರ್​ಸಿಬಿ ತಂಡದ ಅಭಿಮಾನಿಗಳು ನಾಳಿನ ಪಂದ್ಯಕ್ಕೆ ಕಿಕ್ಕಿರಿದು ಸೇರಲಿದ್ದಾರೆ. ಕನ್ನಡಿಗರಾದ ಕೆ ಎಲ್​ ರಾಹುಲ್​ ಮತ್ತು ಪ್ರಸಿದ್ಧ್​ ಕೃಷ್ಣ ತಂಡದ ಭಾಗವಾಗಿದ್ದಾರೆ.

ತಂಡಗಳು ಇಂತಿವೆ: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್.

ನೆದರ್ಲೆಂಡ್ಸ್​:ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡ್, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ನೋಹ್ ಕ್ರೋಸ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕ್ , ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್

ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​: ಹೃದಯೊಯ್, ಶಾಂಟೊ ಆಸರೆಯ ಇನ್ನಿಂಗ್ಸ್​.. ಕಾಂಗರೂ ಪಡೆಗೆ 307 ರನ್​​ಗಳ​ ಗುರಿ

Last Updated :Nov 11, 2023, 9:47 PM IST

ABOUT THE AUTHOR

...view details