ಕರ್ನಾಟಕ

karnataka

ಬೆಂಗಳೂರು ದೇಶದ ಬಾಹ್ಯಾಕಾಶ ನಗರವೆಂದು ಪರಿಗಣಿಸ್ಪಟ್ಟಿದೆ: ಸಿಎಂ ಬೊಮ್ಮಾಯಿ‌

By

Published : Sep 27, 2022, 4:21 PM IST

ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ ವಿಭಾಗದ ಉದ್ಘಾಟನಾ ಕಾರ್ಯಕ್ರಮ
ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ ವಿಭಾಗದ ಉದ್ಘಾಟನಾ ಕಾರ್ಯಕ್ರಮ

ನಾವು ಇಂದು ನೂರಾರು ಉಪಗ್ರಹಗಳನ್ನು ಬ್ಯಾಹ್ಯಾಕಾಶಕ್ಕೆ ಹಾರಿಸಿದ್ದೇವೆ. ಈಗ ನಾವು ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ಘಟ್ಟಕ್ಕೆ ಬಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಬೆಂಗಳೂರು:ಇಸ್ರೋ ಮತ್ತು ಹೆಚ್​ಎಎಲ್ ಎರಡರ ಸಂಯೋಜನೆಯಿಂದಾಗಿ ದೇಶದ ಬಾಹ್ಯಾಕಾಶದ ನಗರ ಎಂದು ಬೆಂಗಳೂರನ್ನು ಪರಿಗಣಿಸಲಾಗಿದೆ. ಭಾರತಕ್ಕೆ ಬಾಹ್ಯಾಕಾಶವನ್ನು ಜಯಿಸಲು ವಿಪುಲ ಅವಕಾಶಗಳಿವೆ. ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸಲು ಅನುವಾಗುವಂತೆ ಸಂಶೋಧನೆಗಳಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಹೆಚ್‍ಎಎಲ್‍ನ ಏರೋಸ್ಪೇಸ್ ವಿಭಾಗದಲ್ಲಿ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ಐಎಮ್‍ಎಫ್) ಹಾಗೂ ಏರೋಸ್ಪೇಸ್ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರೊಂದಿಗೆ ಪಾಲ್ಗೊಂಡು ಮಾತನಾಡಿದ ಸಿಎಂ, ರಾಜ್ಯದಲ್ಲಿ ಏರೋಸ್ಪೇಸ್, ಆರ್ ಅಂಡ್ ಡಿ, ರಕ್ಷಣಾ ನೀತಿಗಳು ಜಾರಿಯಲ್ಲಿದ್ದು, ಸರ್ಕಾರದ ವತಿಯಿಂದ ಈ ಎಲ್ಲ ಸಂಶೋಧನೆಗಳಿಗೆ ಅಗತ್ಯ ಸಹಕಾರವನ್ನು ನೀಡಲಿದೆ. ಕರ್ನಾಟಕ ಹೊಸ ವಿಜ್ಞಾನ, ಆವಿಷ್ಕಾರ ಹಾಗೂ ಹೊಸ ಪಥದತ್ತ ನಡೆಯುತ್ತಿದೆ. ನಮ್ಮ ಸರ್ಕಾರದ ಘೋಷವಾಕ್ಯವೂ 'ನವ ಭಾರತಕ್ಕಾಗಿ ನವ ಕರ್ನಾಟಕ' ಎಂದಿದೆ ಎಂದರು.

ಬಾಹ್ಯಾಕಾಶ ನಮ್ಮ ಕಲ್ಪನೆಗಳಿಗೆ ಸ್ಫೂರ್ತಿ: ವಿಜ್ಞಾನ ನಿರಂತರವಾಗಿ ವಿಸ್ತರಿಸುವ ಗುಣ ಹೊಂದಿದೆ. ಅದಕ್ಕೆ ವಿರಾಮ ಎಂಬುದಿಲ್ಲ. ಒಂದು ಆವಿಷ್ಕಾರ ಹಲವಾರು ಸಂಶೋಧನೆಗಳಿಗೆ ಎಡೆ ಮಾಡಿಕೊಡುತ್ತದೆ. ಮನುಕುಲದ ಒಳಿತಿಗಾಗಿ ಸಂಶೋಧನೆಗಳಾಗಬೇಕು. ಬಾಹ್ಯಾಕಾಶ ನಮ್ಮ ಕಲ್ಪನೆಗಳಿಗೆ ಸ್ಫೂರ್ತಿ. ಹಾಗಾಗಿ ಮನುಷ್ಯನಿಗೆ ಅಂತರಿಕ್ಷದ ಬಗ್ಗೆ ಮೊದಲಿನಿಂದಲೂ ಆಕರ್ಷಣೆ ಇದೆ ಎಂದು ಹೇಳಿದರು.

ವಿಜ್ಞಾನ ಕ್ಷೇತ್ರದಲ್ಲಿ ಭಾರತ ಯಾರಿಗೂ ಕಡಿಮೆ ಇಲ್ಲ: ಭಾರತ ಅನಾದಿ ಕಾಲದಿಂದಲೂ ಬಾಹ್ಯಾಕಾಶದ ಅನ್ವೇಷಣೆಯಲ್ಲಿ ತೊಡಗಿದೆ. ಆರ್ಯಭಟ ಈ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದರು. ಇಂದಿನ ಅನ್ವೇಷಣೆಗಳಿಗೆ ಅವರ ಸಂಶೋಧನೆಗಳು ಸ್ಫೂರ್ತಿಯಾಗಿದೆ. ಇಂದು ವಿಜ್ಞಾನ ಕ್ಷೇತ್ರದಲ್ಲಿ ಭಾರತ ಬೇರೆ ಯಾವ ದೇಶಕ್ಕೂ ಕಡಿಮೆ ಇಲ್ಲ. ಅಂತರಿಕ್ಷ ಸಂಶೋಧನೆಗಳಲ್ಲಿ ತೊಡಗಿರುವ ಎಲ್ಲಾ ವಿಜ್ಞಾನಿಗಳು ಹಾಗೂ ಇಂಜಿನಿಯರ್​ಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಬೆಂಗಳೂರು ಬಾಹ್ಯಾಕಾಶ ತಂತ್ರಜ್ಞಾನದ ಹಬ್:ನಾವು ಇಂದು ನೂರಾರು ಉಪಗ್ರಹಗಳನ್ನು ಬ್ಯಾಹ್ಯಾಕಾಶಕ್ಕೆ ಹಾರಿಸಿದ್ದೇವೆ. ಈಗ ನಾವು ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ಘಟ್ಟಕ್ಕೆ ಬಂದಿದ್ದೇವೆ. ಕಳೆದ 4-5 ದಶಕಗಳಿಂದ ಕ್ರಯೋಜೆನಿಕ್ ಇಂಜಿನ್ ಪ್ರಪಂಚದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಆದರೆ ಕೆಲವೇ ದೇಶಗಳಲ್ಲಿ ಇದರ ಅಭಿವೃದ್ದಿ ಸಾಧ್ಯವಾಗಿದೆ.

ಇಂಧನದ ಸ್ಥಿರತೆಯನ್ನು ನಿರ್ವಹಿಸಬೇಕು: ಬಾಹ್ಯಾಕಾಶ ತಂತ್ರಜ್ಞಾನ ಕೆಲವೇ ದೇಶಗಳಲ್ಲಿದ್ದುದರಿಂದ ಅದರ ಅಭಿವೃದ್ಧಿಯೂ 4-5 ದೇಶಗಳಿಗೆ ಸೀಮಿತವಾಗಿಯೇ ಇತ್ತು. ಕ್ರಯೋಜೆನಿಕ್​ ಇಂಜಿನ್ ಗೆ ಬಳಸುವ ಸಾಮಗ್ರಿಗಳ ಬಗ್ಗೆ ಮುಖ್ಯವಾಗಿ ಚರ್ಚೆಯಾಗುತ್ತಿತ್ತು. ಅದರ ಸಂಶೋಧನೆಯೇ ಒಂದು ಸಾಧನೆ. ನಂತರದಲ್ಲಿ ಇಂಧನವನ್ನು ಹಾಕುವ ಸಾಧನವನ್ನು ಕಂಡು ಹಿಡಿಯಲಾಗಿದೆ. ಇಂಧನದ ಸ್ಥಿರತೆಯನ್ನು ನಿರ್ವಹಿಸಬೇಕು ಎಂದರು.

ಉಪಗ್ರಹಗಳಿಗೆ ಇದು ಬಹಳ ಅಗತ್ಯ: ಇಸ್ರೋ ಈ ವಿಷಯದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಮೂರು ದಶಕಗಳ ಹಿಂದೆ ಕ್ರಯೋಜೆನಿಕ್ ಇಂಜಿನ್ ಆಮದು ಮಾಡಿಕೊಳ್ಳುವುದು ದೊಡ್ಡ ಸಂಗತಿಯಾಗಿತ್ತು. ನಮ್ಮ ಉಪಗ್ರಹಗಳಿಗೆ ಇದು ಬಹಳ ಅಗತ್ಯವಿದೆ. ನಮ್ಮ ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ಭಾರತ್ ಘೋಷಣೆಯಂತೆ ನಾವು ಈಗ ದೊಡ್ಡ ಮಟ್ಟದಲ್ಲಿ ನಿಂತಿದ್ದೇವೆ. ಕ್ರಯೋಜೆನಿಕ್ ಇಂಜಿನ್ ತಯಾರು ಮಾಡುವ ದೇಶಗಳಲ್ಲಿ ಭಾರತವೂ ಸೇರಿದೆ ಎನ್ನುವುದು ಅತ್ಯಂತ ಹೆಮ್ಮೆಯ ವಿಚಾರ.

ಇಸ್ರೋ ಮತ್ತು ಹೆಚ್.ಎ.ಎಲ್ ಎರಡರ ಸಂಯೋಜನೆಯಿಂದಾಗಿ ದೇಶದ ಬಾಹ್ಯಾಕಾಶದ ನಗರವೆಂದು ಬೆಂಗಳೂರನ್ನು ಪರಿಗಣಿಸಲಾಗಿದೆ. ಶೇ.65 ರಷ್ಟು ಏರೋಸ್ಪೇಸ್ ಭಾಗಳನ್ನು ಬೆಂಗಳೂರಿನಿಂದ ರಪ್ತು ಮಾಡಲಾಗುತ್ತಿದೆ. ಶೇ 60 ರಷ್ಟು ರಕ್ಷಣಾ ಸಾಮಗ್ರಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಶೇ 25 ರಷ್ಟು ಏರೋಸ್ಪೇಸ್ ಭಾಗಗಳು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿದೆ.

ಆದ್ದರಿಂದ ಬೆಂಗಳೂರು ಬಾಹ್ಯಾಕಾಶ ತಂತ್ರಜ್ಞಾನದ ತಾಯಿ ಹಾಗೂ ಹಬ್ ಎಂದು ಖ್ಯಾತಿ ಪಡೆದಿದೆ. ಇಸ್ರೋ ಹಾಗೂ ಹೆಚ್ಎಎಲ್ ಎರಡೂ ಒಟ್ಟಾಗಿ ಕೆಲಸ ಮಾಡುವುದು ಲಾಭದಾಯಕವಾಗಿದೆ. ಹೈಬ್ರಿಡ್ ಕ್ರಯೋಜೆನಿಕ್ ಇಂಜಿನ್ ಅನ್ನು ಇಸ್ರೋ ಅಭಿವೃದ್ಧಿ ಪಡಿಸುತ್ತಿದ್ದು, ಹೆಚ್.ಎ.ಎಲ್ ಶೀಘ್ರದಲ್ಲಿಯೇ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ ಎಂದರು.

ಆರೋಗ್ಯ ವಿಜ್ಞಾನದಲ್ಲಿ ಕರ್ನಾಟಕ ಮುಂದೆ: ಆರೋಗ್ಯ ವಿಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅತಿ ಹೆಚ್ಚಿನ ಸಂಶೋಧನಾ ಕೇಂದ್ರಗಳು, ವೈದ್ಯಕೀಯ ಸಂಸ್ಥೆಗಳು, ನಿಮ್ಹಾನ್ಸ್, ಕಿದ್ವಾಯಿ, ರಾಷ್ಟ್ರಮಟ್ಟದ ಮಕ್ಕಳ ಆಸ್ಪತ್ರೆಗಳು, ಆರ್ ಅಂಡ್ ಡಿ ಕೇಂದ್ರಗಳು, ಅಂಗಾಂಗ ಕಸಿ ಕೇಂದ್ರಗಳು ಇಲ್ಲಿವೆ. ಒಂದು ವರ್ಷದೊಳಗೆ 200 ಪ್ರಯೋಗಾಲಯಗಳನ್ನು ಆರ್.ಟಿ.ಪಿ.ಸಿ.ಆರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎನ್.ಐ.ವಿ, ದಕ್ಷಿಣ ವಲಯವು ತನ್ನ ಹೊಸ ಆವಿಷ್ಕಾರಗಳಿಂದ ದೇಶಕ್ಕೇ ಸಹಾಯ ಮಾಡಲಿದ್ದಾರೆ ಎಂದು ಹೇಳಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್, ಹೆಚ್.ಎ.ಎಲ್ ಅಧ್ಯಕ್ಷ ಅನಂತಕೃಷ್ಣ, ಇಸ್ರೋ ಅಧ್ಯಕ್ಷ ಸೋಮನಾಥ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.

ಓದಿ:2023ರ ವಿಧಾನಸಭಾ ಚುನಾವಣೆ ಅಖಾಡಕ್ಕೆ ರೆಡಿಯಾಗುತ್ತಿರುವ ಜೆಡಿಎಸ್‍!

ABOUT THE AUTHOR

...view details