ಕರ್ನಾಟಕ

karnataka

ಅರುಣ್ ಸಿಂಗ್ ನೇತೃತ್ವದಲ್ಲಿ ಲಿಂಗಾಯತ ನಾಯಕರ ಸಭೆ: 41 ಮಂದಿಗೆ ಆಹ್ವಾನ

By

Published : Apr 19, 2023, 8:02 PM IST

ಬಿ ಎಸ್​ ಯಡಿಯೂರಪ್ಪ ಅವರ ನಿವಾಸದಲ್ಲಿ ವೀರಶೈವ ಲಿಂಗಾಯತ ಸಮುದಾಯದ ನಾಯಕರ ತುರ್ತು ಸಭೆ ಕರೆಯಲಾಗಿದೆ.

ಅರುಣ್ ಸಿಂಗ್ ಹಾಗೂ ಬಿ ಎಸ್​ ಯಡಿಯೂರಪ್ಪ
ಅರುಣ್ ಸಿಂಗ್ ಹಾಗೂ ಬಿ ಎಸ್​ ಯಡಿಯೂರಪ್ಪ

ಬೆಂಗಳೂರು:ವೀರಶೈವ ಲಿಂಗಾಯತ ಸಮುದಾಯದ ಮತಬುಟ್ಟಿ ಭದ್ರಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು ಸಮುದಾಯದ ಜನಪ್ರತಿನಿಧಿಗಳ ತುರ್ತುಸಭೆ ಕರೆದಿದ್ದಾರೆ. ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಸಿಎಂ ಸೇರಿದಂತೆ 41 ಜನರನ್ನು ಆಹ್ವಾನಿಸಲಾಗಿದೆ.

ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿ ವೀರಶೈವ ಲಿಂಗಾಯತ ನಾಯಕರ ಹೈ ವೋಲ್ಟೇಜ್ ಸಭೆ ನಡೆಯಲಿದೆ. ಸಭೆಗೆ ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ರಾಜ್ಯದ ಮುಖ್ಯಮಂತ್ರಿ, 7 ಸಚಿವರು, ಓರ್ವ ಕೇಂದ್ರ ಸಚಿವರು, 8 ಸಂಸದರು, ಒಬ್ಬ ಮಾಜಿ ಸಂಸದ, 4 ಶಾಸಕರು, 2 ಮಾಜಿ ಶಾಸಕರು, 9 ಎಂಎಲ್ಸಿಗಳು, ಒಬ್ಬ ಮಾಜಿ ಎಂಎಲ್ಸಿ, ಹಾಗೂ ಒಬ್ಬರು ಸಿಎಂ ರಾಜಕೀಯ ಕಾರ್ಯದರ್ಶಿ ಭಾಗವಹಿಸಿದ್ದು, ಇವರ ಜೊತೆ ಸಂಘಟನಾತ್ಮಕ ಹುದ್ದೆಯಲ್ಲಿರುವ ಲಿಂಗಾಯತ ನಾಯಕರು ಸೇರಿ ಒಟ್ಟು 41 ಜನರನ್ನು ಆಹ್ವಾನಿಸಲಾಗಿದೆ.

ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಸಚಿವರಾದ ವಿ. ಸೋಮಣ್ಣ, ಸಿಸಿ‌ ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದರಾದ ಜಿಎಂ, ಸಿದ್ದೇಶ್ವರ್, ಪಿ.ಸಿ ಗದ್ದಿಗೌಡರ್, ಮಂಗಳಾ ಸುರೇಶ್ ಅಂಗಡಿ, ಅಣ್ಣಾ ಸಾಹೇಬ್ ಜೊಲ್ಲೆ, ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ಬಿ.ವೈ ರಾಘವೇಂದ್ರ, ಜಿ. ಎಸ್ ಬಸವರಾಜ್, ಪ್ರಭಾಕರ್ ಕೊರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಹಾಂತೇಶ್ ಕವಟಗಿಮಠ, ಅರವಿಂದ್ ಬೆಲ್ಲದ್, ಎಂಪಿ ರೇಣುಕಾಚಾರ್ಯ, ಎ.ಎಸ್ ಪಾಟೀಲ್ ನಡಹಳ್ಳಿ, ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ನವೀನ್, ಸತೀಶ್, ಪಿ. ಹೆಚ್ ಪೂಜಾರ್​​​ ಸೇರಿದಂತೆ ಒಟ್ಟು 41 ಜನ ಲಿಂಗಾಯತ ಸಮುದಾಯ ನಾಯಕರು ಉಪಸ್ಥಿತಿಯಲ್ಲಿ ಸಭೆ ನಡೆಯುತ್ತಿದೆ.

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ತೊರೆದ ನಂತರ ಬಿಜೆಪಿ ವಿರುದ್ಧ ಲಿಂಗಾಯತ ವಿರೋಧಿ ಅಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್​​​ಗೆ ಟಾಂಗ್ ನೀಡಲು ಈ ಮಹತ್ವದ ಸಭೆ ಕರೆಯಲಾಗಿದ್ದು, ಬಿಜೆಪಿ ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಿದ ಆಧ್ಯತೆ, ಕೊಟ್ಟ ಸ್ಥಾನಮಾನ, ಅವಕಾಶಗಳ ಕುರಿತು ಜನರಿಗೆ ತಿಳಿಸಿ ಈ ಸಭೆ ಮೂಲಕ ಕಾಂಗ್ರೆಸ್​​​ಗೆ ತಿರುಗೇಟು ನೀಡಲಾಗುತ್ತದೆ ಎನ್ನಲಾಗಿದೆ.

ಈಗಾಗಲೇ ಶಿವಮೊಗ್ಗ ಪ್ರವಾಸದಿಂದ ಯಡಿಯೂರಪ್ಪ ವಾಪಸ್​ ಆಗಿದ್ದು, ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ಇಷ್ಟೊತ್ತಿಗಾಗಲೇ ಸಭೆ ಆರಂಭವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯಡಿಯೂರಪ್ಪ ನಿವಾಸಕ್ಕೆ ಈಗಾಗಲೇ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತವರು ಕ್ಷೇತ್ರದಿಂದ ಬೆಂಗಳೂರಿಗೆ ಮರಳಿದ್ದು, ಕೆಲವೇ ನಿಮಿಷಗಳಲ್ಲಿ ಬಿ ಎಸ್​ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಲಿದ್ದಾರೆ. ಆಹ್ವಾನದ ಮೇರೆಗೆ ಲಿಂಗಾಯತ ನಾಯಕರು ಒಬ್ಬೊಬ್ಬರಾಗಿ ಬಿಎಸ್​ವೈ ನಿವಾಸಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ:ವಿಜಯೇಂದ್ರರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಕೊಡಿ: ಯಡಿಯೂರಪ್ಪ

ABOUT THE AUTHOR

...view details