ಕರ್ನಾಟಕ

karnataka

'ಸಂಜು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ದುರಾದೃಷ್ಟವಶಾತ್..': ಕೆ.ಎಲ್‌.ರಾಹುಲ್

By ANI

Published : Dec 22, 2023, 5:27 PM IST

K.L.Rahul praises Sanju Samson: ಸಂಜು ಸ್ಯಾಮ್ಸನ್​ ಅವರ ಏಕದಿನ ಚೊಚ್ಚಲ ಶತಕದ ಇನ್ನಿಂಗ್ಸ್​​ ಅನ್ನು ನಾಯಕ ಕೆ.ಎಲ್.ರಾಹುಲ್​ ಶ್ಲಾಘಿಸಿದ್ದಾರೆ.

KL Rahul
KL Rahul

ಪರ್ಲ್(ದಕ್ಷಿಣ ಆಫ್ರಿಕಾ): ವಿಶ್ವಕಪ್​ ಸೋಲಿನ ನಂತರ ಮೊದಲ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿದೆ. ಮೂರನೇ ಮತ್ತು ನಿರ್ಣಾಯಕ ಪಂದ್ಯದ ಗೆಲುವಿಗೆ ಕಾರಣವಾದ ಸಂಜು ಸ್ಯಾಮ್ಸನ್ ಅವರ ಶತಕದಾಟವನ್ನು ನಾಯಕ ಕೆ.ಎಲ್.ರಾಹುಲ್ ಮೆಚ್ಚಿಕೊಂಡಿದ್ದಾರೆ. "ಸಂಜು ಸ್ಯಾಮ್ಸನ್ ಬ್ಯಾಟಿಂಗ್​ ನೋಡಿ ಸಂತೋಷವಾಗಿದೆ. ಬ್ಯಾಟಿಂಗ್ ಕ್ರಮಾಂಕದ ಅಗ್ರಸ್ಥಾನದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯದೇ ಇದ್ದರೂ ಸಹ ಪ್ರೊಟೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ.

ಸಂಜು ಸ್ಯಾಮ್ಸನ್ ಅದ್ಭುತ ಶತಕ, ತಿಲಕ್​ ವರ್ಮಾ ಅರ್ಧಶತಕ ಮತ್ತು ರಿಂಕು ಸಿಂಗ್ ಅವರ ಬಿರುಸಿನ ಇನ್ನಿಂಗ್ಸ್​ ಹಾಗೆಯೇ ಬೌಲಿಂಗ್​ ವಿಭಾಗದಲ್ಲಿ ಅರ್ಶದೀಪ್ ಸಿಂಗ್ ಕರಾರುವಾಕ್ ಸ್ಪೆಲ್‌ಗಳ ಸಹಾಯದಿಂದ ಸರಣಿಯ ಪ್ರಮುಖ ಪಂದ್ಯವನ್ನು ಭಾರತ ಗೆದ್ದುಕೊಂಡಿತು. 1-1ರಿಂದ ಸಮಬಲಗೊಂಡಿದ್ದ ಸರಣಿಯ ಫೈನಲ್​ ಫೈಟ್​ ಗುರುವಾರ ಇಲ್ಲಿನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆಯಿತು. ಈ ಪಂದ್ಯವನ್ನು ಭಾರತ 78 ರನ್‌ಗಳಿಂದ ಜಯಿಸಿತು.

"ಸಂಜು ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ದುರದೃಷ್ಟವಶಾತ್, ವಿವಿಧ ಕಾರಣಗಳಿಗಾಗಿ ಕ್ರಮಾಂಕದ ಮೇಲ್ಭಾಗದಲ್ಲಿ ಹೆಚ್ಚಿನ ಅವಕಾಶಗಳನ್ನು ಅವರು ಪಡೆದಿಲ್ಲ. ಆದರೆ ಇಂದು ಉತ್ತಮವಾಗಿ ಆಡಿದರು. ಅದನ್ನು ನೋಡಲು ಸಂತೋಷವಾಗಿದೆ" ಎಂದು ಪಂದ್ಯದ ನಂತರ ಕೆ.ಎಲ್.ರಾಹುಲ್ ಹೇಳಿದರು.

ವಿಶ್ವಕಪ್ ಸೋಲಿನ ನಂತರ ನಡೆದ ಮೊದಲ ಸರಣಿಯಲ್ಲಿ ಭಾರತದ ಯುವಪಡೆ ಉತ್ತಮ ಪ್ರದರ್ಶನ ನೀಡಿದೆ. ವಿಶ್ವಕಪ್​ನಲ್ಲಿ ಆಡಿದವರಲ್ಲಿ ರಾಹುಲ್​, ಅಯ್ಯರ್​ ಹೊರತುಪಡಿಸಿ ಉಳಿದವರೆಲ್ಲರೂ ಹೊಸಬರು. ನಾಲ್ಕು ಆಟಗಾರರು ಸರಣಿಯಲ್ಲಿ ಚೊಚ್ಚಲ ಏಕದಿನ ತಂಡ ಸೇರಿಕೊಂಡಿದ್ದರು. ಸಾಯಿ ಸುದರ್ಶನ್​, ರಿಂಕು ಸಿಂಗ್​ ಮತ್ತು ರಜತ್​ ಪಾಟಿದಾರ್​ ಸರಣಿಯಲ್ಲಿ ಪಾದಾರ್ಪಣೆ ಪಂದ್ಯ ಆಡಿದ್ದಾರೆ. ಬೌಲರ್​ ಆಕಾಶ್​ ದೀಪ್​ ಬೆಂಚ್​ ಕಾದರು.

"ನಿರಾಶಾದಾಯಕ ವಿಶ್ವಕಪ್‌ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಲು ಸಂತೋಷವಾಗಿದೆ. ಐಪಿಎಲ್‌ನಲ್ಲಿ ಇವರಲ್ಲಿ ಬಹಳಷ್ಟು ಮಂದಿಯೊಂದಿಗೆ ಆಡಿದ್ದೇನೆ. ಅಲ್ಲಿಂದ ಹೊರಬಂದು ಒಂದು ತಂಡವಾಗಿ ಆಡುತ್ತಿರುವುದು ಸಂತೋಷವಾಗಿದೆ. ಸಾಮಾನ್ಯವಾಗಿ ನಾನು ಆಟಗಾರರೊಂದಿಗೆ ಯಾವಾಗಲೂ ಆಟವನ್ನು ಆನಂದಿಸಲು ಹೇಳುತ್ತೇನೆ. ಹಾಗೆಯೇ ಪ್ರತಿಯೊಬ್ಬರೂ ಅವರ ಅತ್ಯುತ್ತಮ ಆಟವನ್ನು ಪ್ರದರ್ಶಿಸಬೇಕು. ಬಾಕಿ ವಿಚಾರಗಳ ಬಗ್ಗೆ ಚಿಂತಿಸಬಾರದು. ತಂಡದಲ್ಲಿ ಎಲ್ಲರೂ ಉತ್ತಮ ಕ್ರಿಕೆಟಿಗರು. ಅವರಲ್ಲಿ ಕೆಲವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿಲ್ಲ. ಆದ್ದರಿಂದ ಅವರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅವರಿಗೆ ಅವರ ಜವಾಬ್ದಾರಿಯ ಬಗ್ಗೆ ತಿಳಿಸುತ್ತೇವೆ. ಅವರು ಆ ಕಾರ್ಯವನ್ನು ಶೇ.100ರಷ್ಟು ಮಾಡಿದರೆ ಸಾಕು" ಎಂದು ನಾಯಕ ರಾಹುಲ್ ತಿಳಿಸಿದರು.

ಪಂದ್ಯದಲ್ಲಿ..:ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ನಿಗದಿತ ಓವರ್‌ಗಳ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 296 ರನ್​ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಹರಿಣಗಳ ತಂಡ 45.5 ಓವರ್​ಗೆ 218 ರನ್​ಗಳಿಸಿ ಆಲ್​ಔಟ್​ ಆಯಿತು. ಅರ್ಶದೀಪ್​ ಸಿಂಗ್​ (3), ವಾಷಿಂಗ್ಟನ್ ಸುಂದರ್ (2) ಮಾರಕ ಬೌಲಿಂಗ್​ ದಾಳಿಯಿಂದಾಗಿ ಭಾರತ 78 ರನ್​ಗಳಿಂದ ವಿಜಯ ಸಾಧಿಸಿತು.

ಇದನ್ನೂ ಓದಿ:ದ.ಆಫ್ರಿಕಾದಿಂದ ದಿಢೀರ್ ಭಾರತಕ್ಕೆ ಮರಳಿದ ಕೊಹ್ಲಿ; ಟೆಸ್ಟ್ ಸರಣಿಯಿಂದ ಗಾಯಕ್ವಾಡ್ ಔಟ್​

ABOUT THE AUTHOR

...view details