ನವದೆಹಲಿ:ಇಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ನಾಯಕರು ಗೌರವ ವಂದನೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಂವಿಧಾನ ಶಿಲ್ಪಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಂಬೇಡ್ಕರ್ ಅವರು ಬದುಕಿದ್ದಾಗ ಅವರಿಗೆ ಸಿಗಬೇಕಿದ್ದ ಗೌರವವನ್ನು ಕಾಂಗ್ರೆಸ್ ಕೊಟ್ಟಿಲ್ಲ. ಅವರು ಸಾವನ್ನಪ್ಪಿದ ನಾಲ್ಕು ದಶಕಗಳ ಬಳಿಕ ಅವರಿಗೆ ಭಾರತ ರತ್ನದ ಗೌರವ ಸಲ್ಲಿಸಲಾಯ್ತು. ಆದರೆ ನಮ್ಮ ಬಿಜೆಪಿ ಸರ್ಕಾರವು ಸಂವಿಧಾನ ಶಿಲ್ಪಿಯ ತತ್ವ ಸಿದ್ಧಾಂತಗಳನ್ನು ನೈಜವಾಗಿಸುವಲ್ಲಿ ಶಿಸ್ತುಬದ್ಧ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವರ ಕೋಟ್ಯಾಂತರ ಅನುಯಾಯಿಗಳು ಹಾಗೂ ಬಿಎಸ್ಪಿ ಪರವಾಗಿ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ದಲಿತರು, ಆದಿವಾಸಿಗಳು ಮತ್ತು ಇತರ ಮೂಲೆಗುಂಪಾಗಿದ್ದ ಸಮುದಾಯಗಳು ಸ್ವಾಭಿಮಾನದಿಂದ ಬದುಕಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಕನಸುಗಳನ್ನು ಈಡೇರಿಸಲು 1984 ರ ಇದೇ ದಿನ ಬಿಎಸ್ಪಿಯನ್ನು ಸ್ಥಾಪಿಸಲಾಯಿತು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಶ್ರೇಷ್ಠ ಸಮಾಜ ಸುಧಾರಕ, ದೇಶದ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದ್ದಾರೆ.