ಸಂಗಲ್ದನ್ ರೈಲು ವಿಭಾಗ, ಏಮ್ಸ್ ಜಮ್ಮು ಸೇರಿ 32,000 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಪ್ರಧಾನಿ ಚಾಲನೆ
Published : Feb 20, 2024, 1:20 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ಜಮ್ಮು ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಸಂಗಲ್ದನ್ ರೈಲು ವಿಭಾಗವನ್ನು ಉದ್ಘಾಟಿಸಿದರು. ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ 32,000 ಕೋಟಿ ರೂ.ಗೂ ಹೆಚ್ಚು ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಿದರು.
ಈ ಯೋಜನೆಗಳು ಆರೋಗ್ಯ, ಶಿಕ್ಷಣ, ರೈಲು, ರಸ್ತೆಗಳು, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿವೆ. ತಮ್ಮ ಕಾರ್ಯಕ್ರಮದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ನೇಮಕಗೊಂಡ ಸುಮಾರು 1,500 ಸರ್ಕಾರಿ ನೌಕರರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ಪ್ರಧಾನಿ ವಿತರಿಸಿದರು. ಬಳಿಕ ''ಅಭಿವೃದ್ಧಿ ಹೊಂದಿದ ಭಾರತ - ಅಭಿವೃದ್ಧಿಗೊಂಡ ಜಮ್ಮು'' ಕಾರ್ಯಕ್ರಮದ ಅಡಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಿದರು.
ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ: ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲ ಸೌಕರ್ಯಗಳನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಪ್ರಮುಖ ಹೆಜ್ಜೆಯಾಗಿ, ಸುಮಾರು 13,375 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಟಿ ಜಮ್ಮು, ಐಐಟಿಡಿಎಂ ಕಾಂಚೀಪುರಂ, ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ, ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಖಾಯಂ ಕ್ಯಾಂಪಸ್ ಮತ್ತು ದೇವಪ್ರಯಾಗ (ಉತ್ತರಾಖಂಡ) ನಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವನ್ನು ರಾಷ್ಟ್ರಕ್ಕೆ ನೀಡುವ ಯೋಜನೆಗಳು ಸೇರಿವೆ.
ಪ್ರಧಾನಿ ಅವರು ದೇಶದಲ್ಲಿ ಮೂರು ಹೊಸ ಐಐಎಂಗಳನ್ನು ಅಂದರೆ ಐಐಎಂ ಜಮ್ಮು, ಐಐಎಂ ಬೋಧಗಯಾ ಮತ್ತು ಐಐಎಂ ವಿಶಾಖಪಟ್ಟಣಂಗಳನ್ನು ಉದ್ಘಾಟಿಸಿದರು. ಅವರು ಕೇಂದ್ರೀಯ ವಿದ್ಯಾಲಯಗಳ 20 ಹೊಸ ಕಟ್ಟಡಗಳು ಮತ್ತು ದೇಶದಲ್ಲಿ 13 ಹೊಸ ನವೋದಯ ವಿದ್ಯಾಲಯ ಕಟ್ಟಡಗಳನ್ನು ಉದ್ಘಾಟನೆ ಮಾಡಿದರು. ಪ್ರಧಾನಿ ಅವರು ದೇಶದ ಐದು ಕೇಂದ್ರೀಯ ವಿದ್ಯಾಲಯ ಕ್ಯಾಂಪಸ್ಗಳು, ಒಂದು ನವೋದಯ ವಿದ್ಯಾಲಯ ಕ್ಯಾಂಪಸ್ ಮತ್ತು ನವೋದಯ ವಿದ್ಯಾಲಯಗಳ ಐದು ವಿವಿಧೋದ್ದೇಶ ಸಭಾಂಗಣಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹೊಸದಾಗಿ ನಿರ್ಮಿಸಲಾದ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯ ಕಟ್ಟಡಗಳು ದೇಶಾದ್ಯಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಇದನ್ನೂ ಓದಿ: ಉದ್ಯೋಗ, ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಶೇ.10 ಮೀಸಲು ಮಸೂದೆ ಮಂಡನೆ