ETV Bharat / bharat

ಉದ್ಯೋಗ, ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಶೇ.10 ಮೀಸಲು ಮಸೂದೆಗೆ ಸದನ ಅಂಗೀಕಾರ

author img

By ETV Bharat Karnataka Team

Published : Feb 20, 2024, 12:33 PM IST

Updated : Feb 20, 2024, 2:00 PM IST

ಮರಾಠ ಸಮುದಾಯಕ್ಕೆ ಮೀಸಲು
ಮರಾಠ ಸಮುದಾಯಕ್ಕೆ ಮೀಸಲು

ಉದ್ಯೋಗ, ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಶೇ.10 ಮೀಸಲಾತಿ ನೀಡುವ ಮಸೂದೆಯನ್ನು ಸಿಎಂ ಏಕನಾಥ್​ ಶಿಂಧೆ ಸರ್ಕಾರ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.

ಮುಂಬೈ (ಮಹಾರಾಷ್ಟ್ರ): ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರ ನಿರಶನಕ್ಕೆ ದೊಡ್ಡ ಜಯ ಸಿಕ್ಕಿದೆ. ಮರಾಠರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಹಾರಾಷ್ಟ್ರ ಸರ್ಕಾರ ಅಧಿವೇಶನದಲ್ಲಿ ಮಂಗಳವಾರ ಮಂಡನೆ ಮಾಡಿ ಅಂಗೀಕರಿಸಿತು.

ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮೈತ್ರಿ ಸರ್ಕಾರ ಮಂಗಳವಾರ ಅಂಗೀಕರಿಸಿದ ಶೇಕಡಾ 10ರಷ್ಟು ಮರಾಠ ಮೀಸಲು ನೀಡುವ ಮಸೂದೆಯು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ಸರ್ಕಾರ ಪರಿಚಯಿಸಿದ್ದ ವಿಧೇಯಕವನ್ನೇ ಮುಂದುವರಿಸಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕಾಯ್ದೆ 2018 ರಂತೆಯೇ ಇದೆ. ಈ ಮೂಲಕ ದಶಕದಲ್ಲಿ ಮೂರನೇ ಬಾರಿಗೆ ಮರಾಠ ಮೀಸಲು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು

ಮರಾಠ ಸಮುದಾಯಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲು ನೀಡಬೇಕು ಎಂದು ಕಾರ್ಯಕರ್ತ ಮನೋಜ್​ ಜಾರಂಗೆ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದು ಸರ್ಕಾರದ ಮೇಲೆ ಒತ್ತಡ ಉಂಟು ಮಾಡಿ ಮಸೂದೆ ಮಂಡಿಸಿ ಅಂಗೀಕರಿಸುವಂತೆ ಮಾಡಿದೆ.

ಉದ್ಯೋಗ, ಶಿಕ್ಷಣದಲ್ಲಿ ಮೀಸಲು: ನಿವೃತ್ತ ನ್ಯಾಯಮೂರ್ತಿ ಸುನಿಲ್ ಶುಕ್ರೆ ಅವರ ನೇತೃತ್ವದ ಮಹಾರಾಷ್ಟ್ರ ಹಿಂದುಳಿದ ವರ್ಗ ಆಯೋಗವು (ಎಂಬಿಸಿಸಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಅನುಸಾರ ಮೀಸಲಾತಿ ವಿಸ್ತರಿಸಲಾಗಿದೆ. ರಾಜ್ಯವು ಈಗಾಗಲೇ ಆರ್ಥಿಕವಾಗಿ ದುರ್ಬಲ ವರ್ಗವಿರುವ (ಇಡಬ್ಲ್ಯೂಎಸ್) ಸಮುದಾಯಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗಿದೆ. ಇದರಲ್ಲಿ ಮರಾಠರು ಹೆಚ್ಚಿನ ಶೇಕಡಾ 85 ರಷ್ಟು ಮೀಸಲಾತಿಯ ಫಲಾನುಭವಿಗಳಾಗಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮರಾಠ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ವರದಿಯನ್ನು ಶುಕ್ರವಾರವಷ್ಟೇ ಸಲ್ಲಿಸಿತ್ತು. ಇದು ಕೇವಲ ಒಂಬತ್ತು ದಿನಗಳಲ್ಲಿ ಸುಮಾರು 2.5 ಕೋಟಿ ಮನೆಗಳ ಸಮೀಕ್ಷೆಯನ್ನು ನಡೆಸಿ, ವರದಿ ಸಿದ್ಧ ಮಾಡಿತ್ತು. ಸಮಿತಿಯು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠರಿಗೆ 10 ಪ್ರತಿಶತ ಮೀಸಲಾತಿಯನ್ನು ಶಿಫಾರಸು ಮಾಡಿದೆ.

ಹಿಂದಿನ ಸರ್ಕಾರದ ನಕಲು: 2018 ರಲ್ಲಿ ಸಿಎಂ ಆಗಿದ್ದ, ಈಗಿನ ಡಿಸಿಎಂ ದೇವೇಂದ್ರ ಫಡ್ನವೀಸ್​ ಅವರ ಸರ್ಕಾರವು ಇದೇ ಮಸೂದೆಯನ್ನು ಪರಿಚಯಿಸಿತ್ತು. 2017 ರ ಜೂನ್​ನಲ್ಲಿ ಮರಾಠ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ನಿವೃತ್ತ ನ್ಯಾಯಮೂರ್ತಿ ಎಂಜಿ ಗಾಯಕ್ವಾಡ್ ಅವರ ನೇತೃತ್ವದಲ್ಲಿ ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗದ ಆಯೋಗವನ್ನು ರಚಿಸಿತ್ತು. ಆಯೋಗವು 2018 ರ ನವೆಂಬರ್​ನಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಮರಾಠರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ (ಎಸ್​ಇಬಿಸಿ) ಎಂದು ಗುರುತಿಸಿತ್ತು.

ಮಂಗಳವಾರದಿಂದ (ಫೆಬ್ರವರಿ 20) ಆರಂಭವಾಗಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲಾಗಿದೆ. ನಂತರ ಕಾನೂನಿನ ನಿಯಮಗಳ ಪ್ರಕಾರ ಮರಾಠರಿಗೆ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: ಮರಾಠ ಮೀಸಲಾತಿ ವಿಚಾರ: ಮನೋಜ್ ಜಾರಂಜ್ ಬೇಡಿಕೆಗಳಿಗೆ ಸಮ್ಮತಿಸಿದ ಸಿಎಂ ಶಿಂಧೆ, ಪ್ರತಿಭಟನೆ ಅಂತ್ಯ

Last Updated :Feb 20, 2024, 2:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.