ETV Bharat / state

ಬರ್ತಡೇ ಪಾರ್ಟಿ ವೇಳೆ ಗಲಾಟೆ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

author img

By ETV Bharat Karnataka Team

Published : Jan 29, 2024, 10:54 PM IST

ಬರ್ತ್​ ಡೇ ಪಾರ್ಟಿ ವೇಳೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ರಾಮನಗರ: ಹುಟ್ಟು ಹಬ್ಬ ಆಚರಿಸುವ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮೇಗೌಡನ ಪಾಳ್ಯದಲ್ಲಿ ನಡೆದಿದೆ.

ಕುದೂರು ಹೋಬಳಿಯ ತಿಮ್ಮೇಗೌಡನ ಪಾಳ್ಯದ ಕಾರ್ಪೋರೇಟರ್ ಮಂಜುನಾಥ್ ಅವರ ತೋಟದಲ್ಲಿ ಕಳೆದ ಭಾನುವಾರ ರಾತ್ರಿ ಸ್ನೇಹಿತರೆಲ್ಲರೂ ಸೇರಿ ಬರ್ತ್​ ಡೇ ಪಾರ್ಟಿ ಮಾಡುತ್ತಿದ್ದಾಗ ಗಲಾಟೆ ನಡೆದಿದೆ. ಈ ವೇಳೆ ಅಶೋಕ್ (30) ಎಂಬಾತನಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದಿಲೀಪ್ ಎಂಬುವವರ ಬರ್ತ್ ಡೇ ಪಾರ್ಟಿ ವೇಳೆ ಕೊಲೆ ನಡೆದಿದೆ. ಗಲಾಟೆ ಮಾಡಿಕೂಂಡ ಬಗ್ಗೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಡಿವೈಎಸ್​ಪಿ ಪ್ರವೀಣ್, ಸಿಪಿಐ ನವೀನ್ ಭೇಟಿ ನೀಡಿ ಮಹಜರು ನಡೆಸಿದ್ದು, ಈ ಸಂಬಂಧ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಶೋಧ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಹುಡುಗಿ ಚುಡಾಯಿಸಿದ್ದಕ್ಕೆ ಗಲಾಟೆ, ಯುವಕನ ಕೊಲೆ

ಸೈಟು ವಿಚಾರಕ್ಕೆ ಗಲಾಟೆ: ಮನೆಗೆ ಬಂದ ವ್ಯಕ್ತಿ ಎದೆನೋವಿನಿಂದ ಸಾವು- (ಬೆಂಗಳೂರು):- ಸೈಟು ವಿಚಾರಕ್ಕೆ ಕ್ಯಾತೆ ತೆಗೆದಿದ್ದ ವ್ಯಕ್ತಿಯೊಂದಿಗೆ ಜಗಳವಾಡಿ ಮನೆಗೆ ಬಂದಿದ್ದವನು ಏಕಾಏಕಿ ಎದೆನೋವು ಎಂದು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಮೃತನ ಕುಟುಂಬಸ್ಥರು ಹತ್ಯೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕಾಶ್ ಸಾವನ್ನಪ್ಪಿದ್ದ ವ್ಯಕ್ತಿಯಾಗಿದ್ದು, ಕೆಲ ವರ್ಷಗಳ ಹಿಂದೆ ಕೊಡಿಗೆಹಳ್ಳಿ ಬಳಿಯ ಎನ್.ಟಿ.ಐ.ಕಾಲೋನಿಯಲ್ಲಿ ಕೆಲ ನಿವೇಶನ ಖರೀದಿಸಿದ್ದ.

ನಿವೇಶನ ಬಳಿಯಿರುವ ಪಾರ್ಕ್ ಬಳಿ ಇಂದು ಕಾಮಗಾರಿ ನಡೆಸುತ್ತಿರುವ ಬಗ್ಗೆ ಖುದ್ದು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಈ ವೇಳೆ, ಕಾಲೋನಿಯ ಅಧ್ಯಕ್ಷನಾಗಿದ್ದ ನಾಗರಾಜ್ ಎಂಬುವರಿಗೆ ತಾವು ಖರೀದಿಸಿದ ನಿವೇಶನದ ಬಗ್ಗೆ ಕ್ಯಾತೆ ತೆಗೆದಿದ್ದರು. ಜಾಗದ ವಿಚಾರದಲ್ಲಿ ಇಬ್ಬರು ನಡುವಿನ ಜಟಾಪಟಿ ಕೆಲ ತಿಂಗಳಿಂದ ನಡೆಯುತ್ತಿದ್ದು, ಈ ಬಗ್ಗೆ ಪ್ರಕಾಶ್ ಕೋರ್ಟ್ ಮೊರೆ ಹೋಗಿದ್ದರು. ಇಂದು ಮಧ್ಯಾಹ್ನ ಪಾರ್ಕ್ ಬಳಿ ಕಾಮಗಾರಿ ನಡೆಯುತ್ತಿರುವುದನ್ನ ವಿರೋಧಿಸಿದ್ದಾರೆ. ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು. ಈ ಬಗ್ಗೆ ಪೊಲೀಸ್ ನಿಯಂತ್ರಣ ಕಚೇರಿಗೆ ಕರೆ ಮಾಡಿ ತಮ್ಮ ನಿವೇಶನ ಸ್ಥಳದಲ್ಲಿ ಮನೆ ಕಟ್ಟುತ್ತಿರುವ ಬಗ್ಗೆ ಪ್ರಸ್ತಾಪಿಸಿ ಸ್ಥಳಕ್ಕೆ ಪೊಲೀಸರನ್ನ ಕರೆಯಿಸಿಕೊಂಡಿದ್ದರು.

ಪರಿಶೀಲನೆ ನಡೆಸಿದ್ದ ಪೊಲೀಸರು ಜಾಗದ ವಿಚಾರವಾಗಿ ಕೋರ್ಟ್​ನಲ್ಲಿದ್ದು, ಈ ಬಗ್ಗೆ ಅಲ್ಲೇ ಇತ್ಯರ್ಥಪಡಿಸಿಕೊಳ್ಳಿ. ಸುಖಾಸುಮ್ಮನೆ ಗಲಾಟೆ ಮಾಡಿಕೊಳ್ಳಬೇಡಿ ಎಂದು ಎರಡು ಕಡೆಯವರಿಗೆ ಗಲಾಟೆ ಮಾಡಿಕೊಳ್ಳದಂತೆ ತಿಳಿಹೇಳಿ ಕಳುಹಿಸಿದ್ದರು. ಮಧ್ಯಾಹ್ನ ಬಳಿಕ ಮನೆಗೆ ಬಂದ ಪ್ರಕಾಶ್, ಏಕಾಏಕಿ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ.

ಕುಟುಂಬಸ್ಥರು ಕೂಡಲೇ ಸ್ಥಳೀಯ ಕ್ಲಿನಿಕ್​ಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಾರ್ಗಮಧ್ಯೆ ಪ್ರಕಾಶ್ ಅಸುನೀಗಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ಪ್ರಕಾಶ್​ ನನ್ನ ಹತ್ಯೆ ಮಾಡಿರುವುದಾಗಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್, ಏಕಾಏಕಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ನಮ್ಮ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಪ್ರಕಾಶ್​ಗೆ ಸೇರಿದೆ ಎನ್ನಲಾಗುತ್ತಿರುವ ನಿವೇಶನದ ಬಗ್ಗೆ ಸ್ಥಳೀಯರ ನಡುವೆ ಜಟಾಪಟಿಯಿದ್ದು, ಈ ವಿಚಾರ ಕೋರ್ಟ್ ನಲ್ಲಿದೆ. ಇಂದು ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಮನೆಗೆ ಹೋಗಿದ್ದ ಪ್ರಕಾಶ್ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: ತಂಗಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಹತ್ಯೆ: ಸ್ನೇಹಿತರಿಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.