ETV Bharat / state

ಮೈಸೂರು: ಹುಡುಗಿ ಚುಡಾಯಿಸಿದ್ದಕ್ಕೆ ಗಲಾಟೆ, ಯುವಕನ ಕೊಲೆ

author img

By ETV Bharat Karnataka Team

Published : Jan 28, 2024, 6:44 AM IST

ಮೈಸೂರಿನ ಮಂಡಕಳ್ಳಿ ಗ್ರಾಮದಲ್ಲಿ ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಲಾಗಿದೆ.

ಮೈಸೂರು
ಮೈಸೂರು

ಮೈಸೂರು: ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಉಂಟಾದ ಗಲಾಟೆಯಲ್ಲಿ ಗೂಡ್ಸ್ ಆಟೋ ಚಾಲಕ ಹತ್ಯೆಯಾಗಿರುವ ಘಟನೆ ಮೈಸೂರು ತಾಲೂಕಿನ ಮಂಡಕಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಂಡಕಳ್ಳಿ ನಿವಾಸಿ ರವಿಚಂದ್ರ (33) ಕೊಲೆಯಾದ ವ್ಯಕ್ತಿ. ರೌಡಿಶೀಟರ್ ಸುನಿಲ್ ರಾಜ್ ಹಾಗೂ ಈತನ ಸಹೋದರ ನಿಖಿಲ್ ರಾಜ್, ಚಿಕ್ಕಪ್ಪ ನಾರಾಯಣ ಆರೋಪಿಗಳು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಘಟನೆಯ ವಿವರ: ರವಿಚಂದ್ರನ ಸಹೋದರ ಶಿವರಾಜ್ ಗಾರೆ ಕೆಲಸ ಮಾಡುತ್ತಿದ್ದು, ಈತನ ಸ್ನೇಹಿತನೊಬ್ಬ ಸುನಿಲ್‌ ರಾಜ್‌ಗೆ ಪರಿಚಯವಿರುವ ಹುಡುಗಿಯನ್ನು ಚುಡಾಯಿಸಿದ್ದಾನೆ. ಈ ಸಂಬಂಧ ಗಲಾಟೆ ನಡೆದಿದೆ. ಶಿವರಾಜ್ ಮಧ್ಯಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ. ಇದರಿಂದ ದ್ವೇಷ ಬೆಳೆಸಿಕೊಂಡ ಸುನಿಲ್ ರಾಜ್ ಹಾಗೂ ನಿಖಿಲ್ ರಾಜ್ ಶುಕ್ರವಾರ ರಾತ್ರಿ ಚಿಕ್ಕಪ್ಪ ನಾರಾಯಣ ಜತೆ ರವಿಚಂದ್ರನ ಮನೆ ಬಳಿ ಬಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಎರಡು ಗುಂಪುಗಳ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.

ಸುನಿಲ್ ರಾಜ್ ಡ್ಯಾಗರ್‌ನಿಂದ ರವಿಚಂದ್ರನ ಹೊಟ್ಟೆಗೆ ಚುಚ್ಚಿದ್ದಾನೆ. ಮಧ್ಯಪ್ರವೇಶಿಸಿದ ಶಿವರಾಜ್ ಹಾಗೂ ಕುಟುಂಬಸ್ಥರಿಗೂ ಗಾಯವಾಗಿದೆ. ಚಾಕು ಇರಿತದಿಂದ ಗಾಯಗೊಂಡ ರವಿಚಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುನಿಲ್ ರಾಜ್, ನಿಖಿಲ್ ರಾಜ್ ಹಾಗೂ ನಾರಾಯಣ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನದಿಗೆ ಬಿದ್ದು ಮಹಿಳೆ ಸಾವು: ನಂಜನಗೂಡು ತಾಲೂಕಿನ ಮಹದೇವತಾತ ಗದ್ದುಗೆ ಪೂಜೆಗೆ ಬಂದಿದ್ದ ಮಹಿಳೆ ಕಪಿಲಾ ನದಿಯಲ್ಲಿ ಕಾಲು ತೊಳೆಯಲು ಹೋಗಿ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಹುಳಿಮಾವು ಗ್ರಾಮದ ನಂಜಪ್ಪ ಸ್ವಾಮಿ ಎಂಬವರ ಪತ್ನಿ ಶಕುಂತಲಾ (46) ಎಂದು ಗುರುತಿಸಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮದ್ಯಪಾನಕ್ಕೆ ಹಣ ನೀಡದ ಮಗನಿಗೆ ಗುಂಡಿಕ್ಕಿ ಕೊಂದ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.