ETV Bharat / state

ನಾನು ಸಿಎಂ ಆದರೆ ಪ್ರತಿ ಕುಟುಂಬಕ್ಕೆ ಮಾಸಿಕ 5 ಸಾವಿರ ರೂ. ನೀಡುತ್ತೇನೆ: ಶಾಸಕ ಬಸನಗೌಡ ಯತ್ನಾಳ್ - Basangouda Yatnal

author img

By ETV Bharat Karnataka Team

Published : Apr 14, 2024, 9:48 AM IST

Updated : Apr 14, 2024, 1:17 PM IST

ಶಾಸಕ ಬಸನಗೌಡ ಯತ್ನಾಳ್
ಶಾಸಕ ಬಸನಗೌಡ ಯತ್ನಾಳ್

"ನಾನು ಸಿಎಂ ಸ್ಥಾನಕ್ಕೆ ಅರ್ಹ ಇದ್ದೇನೆ. ನಾನು ಸಿಎಂ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ" ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.

ಶಾಸಕ ಬಸನಗೌಡ ಯತ್ನಾಳ್

ಚಿಕ್ಕೋಡಿ: ಕರ್ನಾಟದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸಮರ್ಥನಿದ್ದೇನೆ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಿಸಿ ನಾನು ಪ್ರತಿ ಕುಟುಂಬಕ್ಕೆ ಐದು ಸಾವಿರ ರೂಪಾಯಿ ಕೊಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.

ಅವರು ಶನಿವಾರ ರಾತ್ರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಸಾಬ್​ ಜೊಲ್ಲೆ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಸಿಎಂ ಸ್ಥಾನಕ್ಕೆ ಅರ್ಹ ಇದ್ದೇನೆ. ಸಿಎಂ ಸ್ಥಾನ ನೀಡಿದರೆ ಪ್ರಾಮಾಣಿಕವಾಗಿ ಪಾರದರ್ಶಕ ಆಡಳಿತ ನಡೆಸುತ್ತೇನೆ. ಜನರು ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ವ್ಯವಸ್ಥೆ ತರುತ್ತೇನೆ. ಭ್ರಷ್ಟಾಚಾರ ಕಡಿಮೆ ಮಾಡುತ್ತೇನೆ. ಆದರೆ ಸಿಎಂ ಪದವಿ ಕೊಡದಿದ್ದರೆ ಏನು ಮಾಡುವುದು. ನಾನು ಸಿಎಂ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಎರಡು ಸಾವಿರ ಕೊಡುತ್ತಿದ್ದಾರೆ. ನಾನು ಸಿಎಂ ಆದರೆ ಮಾಸಿಕವಾಗಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ" ಎಂದು ಶಾಸಕ ಬಸನಗೌಡ ಯತ್ನಾಳ್ ಆಶ್ವಾಸನೆ ನೀಡಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, 'ಇನ್ನು ಒಂದು ವರ್ಷದಲ್ಲಿ ಶಾಸಕರಿಗೆ ಸಂಬಳ ಸಿಗದಂತಹ ಪರಿಸ್ಥಿತಿ ಬರುತ್ತದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ನವರು ಬೇರೆ ರೀತಿಯಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಖುದ್ದು ಡಿ.ಕೆ.ಶಿವಕುಮಾರ್​ ಅವರೇ ತಮ್ಮ ಪಕ್ಷದ ಶಾಸಕರು ಯಾರೂ ಅಭಿವೃದ್ಧಿ ಕೇಳಬೇಡಿ. ನಮಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ಕಠಿಣವಾಗಿದೆ ಎಂದು ಹೇಳಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್​ ವಿರುದ್ಧ ಕುಟುಂಬ ರಾಜಕಾರಣ ಟೀಕೆ: "ಕಾಂಗ್ರೆಸ್ ಪಕ್ಷ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಹಾಲುಮತ ಸಮುದಾಯಕ್ಕೆ ಟಿಕೆಟ್ ಕೊಟ್ಟು ಅಭ್ಯರ್ಥಿಯನ್ನು ನಿಲ್ಲಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ತಮ್ಮ ಮಕ್ಕಳಿಗೆ ಬಿ ಫಾರಂ ಕೊಟ್ಟು ಕಾಂಗ್ರೆಸ್​ ಕಾರ್ಯಕರ್ತರನ್ನು ಕಡೆಗಣಿಸಿದೆ. ಯಾರಾದರೂ ಟಿಕೆಟ್ ಕೇಳಿದರೆ ಅವರು ಅಸಮರ್ಥರು ಎಂದು ತಮ್ಮ ಕುಟುಂಬದ ರಾಜಕಾರಣ ಬೆಳೆಸುತ್ತಿದ್ದಾರೆ ಎಂದು ಬಸನಗೌಡ ಯತ್ನಾಳ್ ಪರೋಕ್ಷವಾಗಿ ಸಚಿವ ಸತೀಶ್​ ಜಾರಕಿಹೊಳಿ ವಿರುದ್ಧ ಹಾಲುಮತ ಅಸ್ತ್ರ ಪ್ರಯೋಗಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಟ್ಯೂನ್ ಬದಲಾವಣೆ: "ಪಂಚಮಸಾಲಿ ಸಮಾಜಕ್ಕೆ ಕಾಂಗ್ರೆಸ್​ ಸರ್ಕಾರದಿಂದ 2ಎ ಮೀಸಲಾತಿ ಕೊಡುವುದಕ್ಕೆ ಆಗುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ನನ್ನ ಮುಂದೆ ಹೇಳಿದ್ದಾರೆ. ಸಮುದಾಯ ಮೀಸಲಾತಿ ವಿಚಾರದಲ್ಲಿ ಅವರು ಎಲ್ಲಾ ಕಡೆ ಬಂದು ಭಾಷಣ ಮಾಡಿದರು. ಆದರೆ ಇವತ್ತು ಕಾಂಗ್ರೆಸ್​ ಸರ್ಕಾರ ಬರುತ್ತಿದ್ದಂತೆ ತಮ್ಮ ಟ್ಯೂನ್ ಬದಲಾವಣೆ ಮಾಡಿದ್ದಾರೆ" ಎಂದು ಯತ್ನಾಳ್ ಟಾಂಗ್​ ನೀಡಿದರು.

ಇದನ್ನೂ ಓದಿ: ಲೋಕಸಭೆ ಚುನಾವಣಾ ಪ್ರಚಾರ; ಇಂದು ಮೈಸೂರಿನಲ್ಲಿ ಪ್ರಧಾನಿ ಮೋದಿ - ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಮಾಗಮ - Modi Campaign

Last Updated :Apr 14, 2024, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.