ETV Bharat / state

ಲೋಕಸಭೆ ಚುನಾವಣಾ ಪ್ರಚಾರ; ಇಂದು ಮೈಸೂರಿನಲ್ಲಿ ಪ್ರಧಾನಿ ಮೋದಿ - ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಮಾಗಮ - Modi Campaign

author img

By ETV Bharat Karnataka Team

Published : Apr 13, 2024, 6:17 PM IST

Updated : Apr 14, 2024, 8:04 AM IST

prime-minister-narendra-modi-will-visit-mysuru-tomorrow
ಮೈಸೂರಿನಲ್ಲಿ ಪ್ರಧಾನಿ ಮೋದಿ - ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಮಾಗಮ

ಭಾನುವಾರ ಸಿಎಂ ಸಿದ್ದರಾಮಯ್ಯ ತವರಲ್ಲಿ ನಡೆಯಲಿರುವ ಬೃಹತ್​ ಸಮಾವೇಶದಲ್ಲಿ ಪ್ರಧಾನಿ ಮೋದಿ ಎನ್​ಡಿಎ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಮೈಸೂರು: ರಾಜ್ಯದಲ್ಲಿ ಲೋಕಸಭೆ ಚುನಾವಣಾ ಕಣ ರಂಗೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಸೂರು, ಮಂಗಳೂರಲ್ಲಿ ಮತಯಾಚನೆ ಮಾಡಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬಿಜೆಪಿಯ ವಿಜಯಸಂಕಲ್ಪ ಬೃಹತ್ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಈ ಕುರಿತು ಮಹಾರಾಜ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ, ಭಾನುವಾರ ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆ ಮುಂಭಾಗ 60 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಲಿದ್ದಾರೆ ಎಂದರು.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಭಾಗಗಳಿಂದ ಬಿಜೆಪಿ -ಜೆಡಿಎಸ್ ಕಾರ್ಯಕರ್ತರು ಆಗಮಿಸುತ್ತಾರೆ. ಈ ವೇಳೆ ನಾಲ್ಕು ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳು ಇರುತ್ತಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಸಮಾವೇಶ ಇದಾಗಲಿದೆ. ಕಾರ್ಯಕರ್ತರನ್ನ ಉದ್ದೇಶಿಸಿ ಮೋದಿಯವರು ಮಾತನಾಡಲಿದ್ದಾರೆ. ಪ್ರತಿ ವಾರ್ಡ್‌ನಿಂದ 300 ಮಂದಿಯನ್ನು ಕರೆ ತರುವ ಕೆಲಸ ಮಾಡುತ್ತೇವೆ. ಈಗಾಗಲೇ ಮನೆ ಮನೆಗೂ ಕರಪತ್ರ ನೀಡಿ ಆಹ್ವಾನಿಸಿದ್ದೇವೆ. ಈ ಮೂಲಕ ನಾಲ್ಕು ಹಂತದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದರು.

ಬೃಹತ್​ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಂಡ್ಯ ಜಿಲ್ಲೆಯಿಂದ 20 ಸಾವಿರ, ಹಾಸನದಿಂದ 15 ಸಾವಿರ, 65 ವಾರ್ಡಿನಿಂದ ಒಟ್ಟು ಸೇರಿ 25,000, ಚಾಮರಾಜನಗರದಿಂದ 25 ಸಾವಿರ ಮಂದಿಯನ್ನು ಕರೆತರುವ ಪ್ರಯತ್ನ ನಡೆಸುತ್ತೇವೆ. 15ಕ್ಕೂ ಹೆಚ್ಚು ಮಂದಿ ಎನ್​ಆರ್‌ಐಗಳು ಸಹ ಇರಲಿದ್ದಾರೆ. ಸಮಾವೇಶ ಇಂದು ಸಂಜೆ 4 ಗಂಟೆಗೆ ಆರಂಭವಾಗಿ 5.5ಕ್ಕೆ ಮುಕ್ತಾಯಗೊಳ್ಳಲಿದೆ. ಮೈಸೂರಿನಲ್ಲಿ ಯಾವುದೇ ರೋಡ್ ಶೋ ಇರುವುದಿಲ್ಲ. ಪ್ರಧಾನಿ ಮೋದಿ ಭಾಷಣ ಮುಗಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವೇಳೆ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಜೋಗಿಮಂಜು ಮತ್ತಿತರರು ಇದ್ದರು.

ಮೈಸೂರಿನಲ್ಲಿ ಮೋದಿ ವೇಳಾಪಟ್ಟಿ: ಭಾನುವಾರ ಮಧ್ಯಾಹ್ನ 3.55ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಅಲ್ಲಿಂದ ಸಂಜೆ 4ಕ್ಕೆ ರಸ್ತೆ ಮೂಲಕ ಹೊರಟು, ಮಹಾರಾಜ ಕಾಲೇಜು ಮೈದಾನಕ್ಕೆ 4.15ಕ್ಕೆ ತಲುಪುತ್ತಾರೆ. ಸಾರ್ವಜನಿಕ ಸಭೆಯ ನಂತರ ರಸ್ತೆ ಮೂಲಕ ಮತ್ತೆ ಮೈಸೂರು ವಿಮಾನ ನಿಲ್ದಾಣಕ್ಕೆ 5.10ಕ್ಕೆ ತೆರಳಿ, ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪ್ರಧಾನಿ ಮೋದಿ ಮೈಸೂರಿನಿಂದ ನೇರವಾಗಿ ಮಂಗಳೂರಿಗೆ ಬಂದು ರಾತ್ರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ನಡೆಸಲಿದ್ದಾರೆ. ಮಂಗಳೂರಿನ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ತೆರೆದ ವಾಹನದಲ್ಲಿ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ. ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೈಸೂರು ಹಾಗೂ ಮಂಗಳೂರಿನಲ್ಲಿ ಇಂದು ನಡೆಯಲಿರುವ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಸುಳ್ಳು ಹೇಳಿದರೆ ಜನರು ತಮ್ಮ ಪರ ಜೈಕಾರ ಹಾಕುತ್ತಾರೆ ಅನ್ನೋದು ಮೋದಿಗೆ ಗೊತ್ತಾಗಿದೆ: ಸಿಎಂ ಸಿದ್ದರಾಮಯ್ಯ ​ - CONGRESS JANADWANI

Last Updated :Apr 14, 2024, 8:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.