ETV Bharat / state

ದಿಂಗಾಲೇಶ್ವರ ಶ್ರೀ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ: ಶಿರಹಟ್ಟಿ ಭಕ್ತ ವೃಂದ - Dingaleshwar Swamiji

author img

By ETV Bharat Karnataka Team

Published : Apr 12, 2024, 8:25 PM IST

Updated : Apr 12, 2024, 8:52 PM IST

ಶಿರಹಟ್ಟಿ ಭಕ್ತ ವೃಂದ
ಶಿರಹಟ್ಟಿ ಭಕ್ತ ವೃಂದ

ದಿಂಗಾಲೇಶ್ವರ ಸ್ವಾಮೀಜಿಗಳು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಶಿರಹಟ್ಟಿ ಭಕ್ತ ವೃಂದ ಒತ್ತಾಯಿಸಿದೆ.

ದಿಂಗಾಲೇಶ್ವರ ಶ್ರೀ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ: ಶಿರಹಟ್ಟಿ ಭಕ್ತ ವೃಂದ

ಗದಗ: ''ರಾಜ್ಯದಲ್ಲಿರುವ ಮಠ-ಮಾನ್ಯಗಳು ಮತ್ತು ಪೀಠಾಪತಿಗಳಾದವರಿಗೆ ರಾಜಕೀಯ ಪ್ರವೇಶ ನಿಷಿದ್ಧ. ಅವರು ಕೇವಲ ಧರ್ಮಪ್ರಚಾರ ಮಾಡಬೇಕು. ದಿಂಗಾಲೇಶ್ವರ ಸ್ವಾಮೀಜಿಗಳು ಬಾಲೇಹೊಸೂರಿನಲ್ಲಿ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿದ್ದರಿಂದ ಅವರನ್ನು ಶಿರಹಟ್ಟಿ ಮಠಕ್ಕೆ ಕರೆತರುವುದರ ಮೂಲಕ ಸಿದ್ಧಗಂಗಾ ಹಾಗೂ ಸುತ್ತೂರು ಮಠದಂತೆ ಶಿರಹಟ್ಟಿ ಮಠವೂ ಆಗಬೇಕೆನ್ನುವ ಆಸೆಯಿತ್ತು. ಆದರೆ, ಇದೀಗ ಧಾರವಾಡ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಘೋಷಣೆ ಮಾಡಿದ್ದು ಸರಿಯಲ್ಲ. ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಹಿಂದೆ ಸರಿಯಬೇಕು'' ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.

ಶಿರಹಟ್ಟಿಯ ಶಿಕ್ಷಕರ ಭವನದಲ್ಲಿ ಶುಕ್ರವಾರ ಭಕ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಏ.18ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಶ್ರೀಗಳು ಹೇಳಿದ್ದಾರೆ. ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಾ ಒಂದು ಸಮಾಜ ನಮ್ಮನ್ನು ಆಳುತ್ತಿದೆ ಅಂತೆಲ್ಲ ಕೆಲವು ಮಾತುಗಳನ್ನೂ ಸಹ ಅವರು ಪ್ರಸ್ತಾಪಿಸಿದ್ದಾರೆ. ಫಕೀರೇಶ್ವರ ಮಠ ಭಾವೈಕ್ಯತೆಯ ತಾಣ. ಶ್ರೀಗಳು ಎಲ್ಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಈ ರೀತಿ ಹೇಳಿಕೆ ನೀಡುವುದು ಅವರಿಗೆ ತರವಲ್ಲ. ಅದೇನೇ ಇರಲಿ, ಅವರು ಚುನಾವಣೆಗೆ ಸ್ಪರ್ಧಿಸುವುದಾದರೆ ಕಾವಿ ಬಟ್ಟೆ ಬಿಟ್ಟು ಚುನಾವಣೆ ಎದುರಿಸಲಿ. ಮತದಾರ ಪ್ರಭುಗಳು ಅಂತಿಮ ನಿರ್ಣಯ ಮಾಡುತ್ತಾರೆ. ಆದ್ದರಿಂದ ಈ ಕೂಡಲೇ ಶ್ರೀಗಳು ತಮ್ಮ ನಿಲುವನ್ನು ಬದಲಾಯಿಸಿ ಚುನಾವಣೆಯಿಂದ ಹಿಂದೆ ಸರಿಯಬೇಕು. ಇಲ್ಲದೇ ಹೋದಲ್ಲಿ ನಮ್ಮ ನಿಲುವನ್ನು ಸಹ ತೆಗೆದುಕೊಳ್ಳಲಾಗುವುದು'' ಎಂದರು.

ಜಿ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡಿ, ''ದಿಂಗಾಲೇಶ್ವರ ಸ್ವಾಮೀಜಿ ಈ ಹಿಂದೆ ಮಾಜಿ ಸಚಿವ ಸಿ.ಸಿ.ಪಾಟೀಲ ಅವರೊಂದಿಗೂ ಸಹ ವಿನಾಕಾರಣ ಸುದ್ದಿಯಲ್ಲಿದ್ದರು. ಇತ್ತೀಚೆಗೆ ಗದಗದ ತೋಂಟದಾರ್ಯ ಮಠದ ವಿಷಯದಲ್ಲೂ ಸಹ ವ್ಯತಿರಿಕ್ತ ನಿಲುವನ್ನು ಹೊಂದಿರುವುದು ಸರಿಯಲ್ಲ. ಹುಬ್ಬಳ್ಳಿಯಲ್ಲಿ ಸಿದ್ದರಾಮ ಶ್ರೀಗಳ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿದ್ದಾಗ ತಾವು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವತ್ತೇ ಏಕೆ ಹೇಳಲಿಲ್ಲ? ಈಗ ಯಾಕೆ ಚುನಾವಣೆಗೆ ನಿಲ್ಲತ್ತಿದ್ದೀರಿ? ಜೋಶಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಶಿರಹಟ್ಟಿಯ ಫಕೀರೇಶ್ವರ ಮಠ ಭಾವೈಕ್ಯತೆ ಮಠವಾಗಿದ್ದು, ಇಲ್ಲಿ ಎಲ್ಲಾ ಜಾತಿ-ಜನಾಂಗದವರು ಭಕ್ತರಿದ್ದಾರೆ. ಆದ್ದರಿಂದ ದಿಂಗಾಲೇಶ್ವರ ಸ್ವಾಮೀಜಿಗಳು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕು. ಸ್ಪರ್ಧಿಸುವುದಾದರೆ ಪೀಠತ್ಯಾಗ ಮಾಡಿ ಸ್ಪರ್ಧಿಸಲಿ'' ಎಂದು ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ''ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ಪ್ರವೇಶ ಮಾಡಬಾರದು. ಅವರ ಮೇಲೆ ಶಿರಹಟ್ಟಿ ಮಠದ ಅಭಿವೃದ್ಧಿ ವಿಷಯದಲ್ಲಿ ಭಕ್ತರು ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ. ಭಕ್ತರ ಮನಸ್ಸು ನೋಯಿಸುವ ಕೆಲಸವನ್ನು ಶ್ರೀಗಳು ಮಾಡಬಾರದು. ಈ ಬಗ್ಗೆ ಅಂತಿಮವಾಗಿ ಹಿರಿಯ ಶ್ರೀಗಳಾದ ಸಿದ್ದರಾಮ ಶ್ರೀಗಳ ಜತೆಗೆ ಚರ್ಚಿಸಿ ಮತ್ತೊಮ್ಮೆ ಸುದ್ದಿಗೋಷ್ಠಿ ಕರೆದು ನಮ್ಮೆಲ್ಲರ ನಿಲುವನ್ನು ಸಹ ತಿಳಿಸಲಾಗುವುದು'' ಎಂದರು.

ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದ್ರಗೌಡ್ರ, ಸಣ್ಣವೀರಪ್ಪ ಹಳ್ಳೆಪ್ಪನವರ, ಚಂದ್ರಕಾಂತ ನೂರಶೆಟ್ಟರ, ಬಿ.ಡಿ.ಪಲ್ಲೇದ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಬಸವಾಜ ತುಳಿ, ಯಲ್ಲಪ್ಪ ಇಂಗಳಗಿ, ಶಿವು ಕಲ್ಯಾಣಿ, ಮಹೇಶ ಕಲ್ಲಪ್ಪನವರ, ಅಶೋಕ ವರವಿ, ಎಂ.ಸಿ.ಹಿರೇಮಠ, ಚನ್ನವೀರಪ್ಪ ಕಲ್ಯಾಣಿ, ಸಂದೀಪ ಕಪ್ಪತ್ತನವರ, ಸುರೇಶ ಹವಳದ, ಶಿವರಾಜಗೌಡ ಪಾಟೀಲ. ಅಕ್ಬರಸಾಬ ಯಾದಗಿರಿ, ಜಗದೀಶ ತೇಲಿ, ಶರಣು ಹೊಸೂರ, ಬಸವರಾಜ ವಡವಿ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸೋ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ: ದಿಂಗಾಲೇಶ್ವರ ಸ್ವಾಮೀಜಿ - Dingaleshwar Swamiji

Last Updated :Apr 12, 2024, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.