ETV Bharat / state

ದಾವಣಗೆರೆಯ ಹರಿಹರೇಶ್ವರ ದೇವಾಲಯ ನಿರ್ಮಾಣವಾಗಿ 800 ವರ್ಷ!

author img

By ETV Bharat Karnataka Team

Published : Mar 1, 2024, 10:38 PM IST

ದಾವಣಗೆರೆ
ದಾವಣಗೆರೆ

ತುಂಗಭದ್ರಾ ನದಿ ತಟದಲ್ಲಿರುವ ಹರಿಹರೇಶ್ವರ ದೇವಾಲಯ ನಿರ್ಮಾಣಕ್ಕೆ ಇಪ್ಪತ್ತು ವರ್ಷ ಬೇಕಾಯಿತಂತೆ!.

ದಾವಣಗೆರೆ: ಅದು ಅತ್ಯಂತ ಪುರಾತನವಾದ ಐತಿಹಾಸಿಕ ದೇವಾಲಯ. ಚಾಲುಕ್ಯರು, ಕದಂಬರು, ಹೊಯ್ಸಳರು ಸೇರಿದಂತೆ ಈ ಮೂರು ಸಾಮ್ರಾಜ್ಯದ ರಾಜರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ. ತುಂಗಭದ್ರಾ ನದಿ ತಟದಲ್ಲಿರುವ ಭವ್ಯ ದೇವಾಲಯ ನಿರ್ಮಿಸಲು ಇಪ್ಪತ್ತು ವರ್ಷಗಳೇ ಬೇಕಾಯಿತು. ಹೊಯ್ಸಳನ ಎರಡನೇ ನರಸಿಂಹನ ಸೇನಾದಂಡ ನಾಯಕ ಪೊಳಾಲ್ವನು ಕೊನೆಯದಾಗಿ ಈ ದೇವಾಲಯ ಪೂರ್ಣಗೊಳಿಸಿದನು ಎಂಬ ಇತಿಹಾಸವಿದೆ. ಇದೀಗ ಈ ದೇವಸ್ಥಾನ ನಿರ್ಮಿಸಿ 800 ವರ್ಷಗಳಾಗುತ್ತಿವೆ.

1021ರಲ್ಲಿ ಚಾಲುಕ್ಯರು, ಕದಂಬರು, ಹೊಯ್ಸಳರು ಸಾಮ್ರಾಜ್ಯದ ರಾಜರು ಹಂತಹಂತವಾಗಿ ತಮ್ಮ ಆಡಳಿತವಾಧಿಯಲ್ಲಿ ಈ ದೇವಾಲಯ ನಿರ್ಮಾಣ ಮಾಡಿದ್ದರು ಎಂದು ಹಿರಿಯರು ಹೇಳುತ್ತಿದ್ದಾರೆ. ಹೊಯ್ಸಳರ ಕಾಲದಲ್ಲಿ 2ನೇ ವೀರ ಬಲ್ಲಾಳ ಮುಂದೆ ನಿಂತು ಈ ದೇವಾಲಯ ಕಟ್ಟಲು ಆರಂಭಿಸುತ್ತಾನೆ. ಅದನ್ನು ಹೊಯ್ಸಳರ ಎರಡನೇ ನರಸಿಂಹನ ಸೇನಾದಂಡನಾಯಕ ಪೊಳಾಲ್ವ ಎಂಬವನು ಕ್ರಿ.ಶ 1224ರಲ್ಲಿ ಪೂರ್ಣಗೊಳಿಸಿದ್ದಾನೆ ಎಂದು ಶಾಸನದಲ್ಲಿ ಉಲ್ಲೇಖವಿದೆ.

''ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಆಗಿದ್ದರಿಂದ ನಕ್ಷತ್ರ ಅಥವಾ ಚೌಕಾರದಲ್ಲಿ ಕಟ್ಟಲಾಗಿದೆ. ಭವ್ಯ ದೇವಾಲಯದಲ್ಲಿ ಒಟ್ಟು 66 ಕಂಬಗಳಿವೆ. ದೇವಸ್ಥಾನದಲ್ಲಿ ನಿಂತು ನೋಡಿದರೆ ಎಲ್ಲಾ ಕಂಬಗಳು ಏಕಕಾಲಕ್ಕೆ ಕಾಣುವುದು ವಿಶೇಷವಾಗಿದೆ. ಹರಿಹರೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಗರ್ಭಗುಡಿ ಮಾತ್ರ ನಿರ್ಮಿಸಿ ಒಟ್ಟು 1,200 ವರ್ಷ ಕಳೆದಿವೆ.

ಸ್ಥಳೀಯರಾದ ಶ್ರೀನಿವಾಸ್ ಮೂರ್ತಿ

ಆದರೆ ವಾಸ್ತುಶಿಲ್ಪ, ಪ್ರಾಂಗಣ, ಕಂಬಗಳು ಗೋಪುರ ಸೇರಿದಂತೆ ಇಡೀ ದೇವಾಲಯ ನಿರ್ಮಾಣವಾಗಿ ಒಟ್ಟು 800 ವರ್ಷಗಳಾಗಿವೆ. ಒಂದೊಂದು ಸಾಮ್ರಾಜ್ಯದ ರಾಜರು ಅಧಿಕಾರದಲ್ಲಿದ್ದಾಗ ಒಬ್ಬೊಬ್ಬ ರಾಜ ದೇವಾಲಯದ ಒಂದೊಂದು ಭಾಗ ಕಟ್ಟಿದ್ದರಿಂದ ಕಾಮಗಾರಿ ಪೂರ್ಣವಾಗಲು ಒಟ್ಟು ಇಪ್ಪತ್ತು ವರ್ಷಗಳಾಗಿವೆ'' ಎಂದು ಇಲ್ಲಿನ ಹಿರಿಯರಾದ ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿದರು.

ಇಲ್ಲಿ ನೆಲೆಸಿ ಭಕ್ತರನ್ನು ಕಾಯುತ್ತಿರುವ ಹರಿಹರೇಶ್ವರ ಮೂರ್ತಿಯ ಎತ್ತರ ಒಟ್ಟು 6.5 ಅಡಿಯಷ್ಟಿದೆ. ಐತಿಹಾಸಿಕ ಕ್ಷೇತ್ರಕ್ಕೆ ಗುಹಾರಣ್ಯ ಕ್ಷೇತ್ರ ಎಂದೂ ಕರೆಯುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಮೊದಲಿಗೆ ಹರಿಹರ ನಗರಕ್ಕೆ ದಂಡಕಾರಣ್ಯ ಎಂಬ ಹೆಸರಿತ್ತಂತೆ. ಇಲ್ಲಿ ನೆಲೆಸಿದ್ದ ರಾಕ್ಷಸನೊಬ್ಬನಿಂದ ಈ ದಂಡಕರಾಣ್ಯ ಎಂಬ ಹೆಸರು ಬಂದಿದೆ. ಆ ರಾಕ್ಷಸನ ಮೇಲೆ ಹರಿಹರೇಶ್ವರ ಪಾದ ಇಟ್ಟಾಗ ಪಾತಾಳಕ್ಕೆ ಹೋಗುತ್ತಾನೆ. ಆದ್ದರಿಂದ ದೇವರ ಪಾದ ಕೂಡ ಪಾತಾಳಕ್ಕೆ ಹೋಗಿದ್ದರಿಂದ ಮೊಣಕಾಲಿನ ಮೇಲೆ ದೇವರ ಮೂರ್ತಿ ಇದೆ. ಹರಿಹರೇಶ್ವರ ರಾಕ್ಷಸನನ್ನು ಸಂಹಾರ ಮಾಡಿದಕ್ಕಾಗಿ ಇದಕ್ಕೆ ಗುಹಾರಣ್ಯ ಎಂಬ ಹೆಸರು ಬಂತು ಎಂದು ಶ್ರೀನಿವಾಸ್ ಮೂರ್ತಿ ತಿಳಿಸಿದರು.

ದೇವಾಲಯದ ವಿಶೇಷತೆ: ವಿಸ್ತಾರವಾದ ಆವರಣವುಳ್ಳ ದೇಗುಲವು ತುಂಗಾಭದ್ರಾ ನದಿಯ ಬಲದಂಡೆಯಲ್ಲಿದೆ. ಉಚ್ಚಂಗಿಯ ಪಾಂಡ್ಯರು ಹಾಗೂ ವಿಜಯ ನಗರದ ಅರಸರು ನೀಡಿದ ದಾನದತ್ತಿಗಳ ಬಗ್ಗೆ ಇಲ್ಲಿನ ಶಾಸನಗಳಲ್ಲಿ ಉಲ್ಲೇಖವಿದೆ. ತಲ ವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮಹಾಮಂಟಪವಿದ್ದು, ಸ್ತಂಭಗಳುಳ್ಳ ಮಹಾ ಮಂಟಪವಿದೆ. ದೇವಾಲಯ ಪೂರ್ವಾಭಿಮುಖವಾಗಿದ್ದು, ಉತ್ತರ ಮತ್ತು ದಕ್ಷಿಣಕ್ಕೆ ಪ್ರವೇಶ ಮತ್ತು ಮುಖಮಂಟಪ ಇದೆ.

ಇವುಗಳಲ್ಲಿ ಉತ್ತರದ ಮುಖಮಂಟಪವನ್ನು ಅಂತರಾಳವಾಗಿ ಉಪಮಂದಿರವಾಗಿ ಮಾರ್ಪಡಿಸಲಾಗಿದೆ. ಮಂಟಪದ ಗೋಡೆಯು ಪ್ಯಾರಪೆಟ್ ಗೋಡೆಯಾಗಿದ್ದು, ಅದರ ಮೇಲೆ ಛಾವಣಿಯ ಹೊರ ತುದಿಗಳನ್ನು ಬೆಂಬಲಿಸುವ ಅರ್ಧ ಕಂಬಗಳಿವೆ. ದೇವಾಲಯಕ್ಕೆ ಸಾಬೂನು ಕಲ್ಲು (ಇದನ್ನು ಪಾಟ್‌ಸ್ಟೋನ್ ಎಂದೂ ಕರೆಯುತ್ತಾರೆ) ನಿರ್ಮಿಸಲಾಗಿದೆ. ಮೇಲಿನ ಮೂಲ ಗೋಪುರ ಕಾಣೆಯಾಗಿದ್ದು, ಆಧುನಿಕ ಕಾಲದಲ್ಲಿ ಅದನ್ನು ಇಟ್ಟಿಗೆ ಮತ್ತು ಗಾರೆಯಿಂದ ನೂತನವಾಗಿ ಬದಲಾಯಿಸಲಾಗಿದೆ. ಆವರಣದಲ್ಲಿ ಹಲವಾರು ಹಳೆಯ ಕನ್ನಡ ಶಾಸನಗಳು ಮತ್ತು ವೀರಗಲ್ಲುಗಳನ್ನು ಸಂರಕ್ಷಿಸಲಾಗಿದೆ.

ಭಕ್ತಾರದ ನೇತ್ರಾವತಿ ಮಂಜುನಾಥ್​

ಹರಿಹರೇಶ್ವರ ಮೂರ್ತಿಯ ವಿಶೇಷತೆ: ಹರಿಹರೇಶ್ವರ ದೇವರ ಮೂರ್ತಿಯ ಎಡಪಾರ್ಶ್ವದಲ್ಲಿ ವಿಷ್ಣುವಿನ ಅಂಶವನ್ನು ಕಾಣಬಹುದು. ಇನ್ನು ಎಡಭಾಗದ ಎರಡು ಕೈಗಳಲ್ಲಿ ಶಂಖ ಮತ್ತು ಚಕ್ರವನ್ನು ಹಿಡಿದಿದ್ದಾನೆ. ಬಲಭಾಗವು ಶಿವನ ಅಂಶವನ್ನು ಒಳಗೊಂಡಿದ್ದಾನೆ. ಬಲಭಾಗದ ಕೈಗಳಲ್ಲಿ ತ್ರಿಶೂಲ ಮತ್ತು ಜಪಮಾಲೆಯನ್ನು ಹಿಡಿದಿದ್ದಾನೆ. ವಿಷ್ಣುವಿನ ಭಾಗವು ಕಿರೀಟ ಪೀತಾಂಭರ ಧರಿಸಿದ್ದು, ಶಿವನ ಭಾಗವು ಕರಂಡ ಮತ್ತು ಜಟಾಮುಕುಟ ಹೊಂದಿದ್ದಾನೆ. ಮಹಾಮಂಟಪಕ್ಕೆ ಹೊಂದಿಕೊಂಡಂತೆ ಸಭಾಮಂಟಪವಿದೆ. ಈ ಮಂಟಪದಲ್ಲಿ 66 ವಿವಿಧ ವಿನ್ಯಾಸದ ಹಾಗೂ ನಯನವಾದ ಸ್ತಂಭಗಳಿವೆ. ಈ ದೇವಾಲಯದ ವಾಯುವ್ಯ ಭಾಗದಲ್ಲಿ ಒಂದು ಸಣ್ಣ ಗುಡಿ ಇದೆ. ಅಲ್ಲದೆ ಉತ್ತರಕ್ಕೆ ಮತ್ತೊಂದು ಮಂದಿರವಿದ್ದು, ಅದರಲ್ಲಿ ಮಹಾಲಕ್ಷ್ಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಭಕ್ತರಾದ ನೇತ್ರಾವತಿ ಎಂಬವರು ಪ್ರತಿಕ್ರಿಯಿಸಿ, "ಇಲ್ಲಿ ಹರಕೆ ಹೊತ್ತುಕೊಂಡರೆ ಆ ಸ್ವಾಮಿ ಈಡೇರಿಸುತ್ತಾನೆ. ಗೋವಾ, ಆಂಧ್ರ, ಮಂಗಳೂರು, ತುಮಕೂರು, ರಾಜ್ಯಾದ್ಯಂತ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ" ಎಂದರು.

ಇದನ್ನೂ ಓದಿ : ನಂಬಿದವರ ಕೈಬಿಡಲ್ಲ 'ಹರಿಹರೇಶ್ವರ'.. ಸು'ಗಂಧ' ಹಚ್ಚಿದ್ರೆ ಸಿಗುತ್ತಂತೆ ಸಂತಾನ ಫಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.