ETV Bharat / bharat

ರಾಮಮಂದಿರ ಉದ್ಘಾಟನೆಗೆ ವಿಪಕ್ಷಗಳು ಗೈರು, 10 ವರ್ಷದಲ್ಲಿ 60 ವರ್ಷಗಳ ಸಾಧನೆ: ಮೋದಿ - PM Narendra Modi

author img

By PTI

Published : Apr 7, 2024, 2:29 PM IST

ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಭವ್ಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಗೈರಾಗಿದ್ದವು. ಇದನ್ನು ನೆನಪಿಟ್ಟುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಇಂದು ನಡೆದ ರ್ಯಾಲಿಯಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವಾಡ (ಬಿಹಾರ): ಸ್ವಾತಂತ್ರ್ಯದ ಬಳಿಕ 60 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ದೇಶ ಕಳೆದ 10 ವರ್ಷಗಳಲ್ಲಿ ಸಾಧಿಸಿ ತೋರಿಸಿದೆ. ಕೇಂದ್ರ ಸರ್ಕಾರವು ದೇಶಕ್ಕಾಗಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯು ತುಷ್ಟೀಕರಣವನ್ನೇ ಒಳಗೊಂಡಿದೆ. ಇದು ಮುಸ್ಲಿಂ ಲೀಗ್‌ನ ಚುನಾವಣಾ ಪ್ರಣಾಳಿಕೆಯಂತೆ ಕಾಣುತ್ತಿದೆ. ಮೋದಿ ನೀಡಿರುವ ಗ್ಯಾರಂಟಿಗಳನ್ನು ಕಂಡು ಕಾಂಗ್ರೆಸ್​ ಬೆದರಿದೆ. ಹೀಗಾಗಿ ತುಷ್ಟೀಕರಣ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.

ದೇಶದಿಂದ ಬಡತನವನ್ನು ತೊಡೆದುಹಾಕಲು ಸರ್ಕಾರ ಸರ್ವಪ್ರಯತ್ನ ಮಾಡಿದೆ. 2014 ರ ಹಿಂದಿನ ದೇಶದ ಪರಿಸ್ಥಿತಿಯನ್ನು ಮರೆಯಲು ಸಾಧ್ಯವಿಲ್ಲ. ಹೆಚ್ಚಿನ ದೇಶವಾಸಿಗಳು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಎಷ್ಟೋ ಜನ ನಿರಾಶ್ರಿತರಾಗಿದ್ದರು. ಬಡವರಿಗೆ ಗ್ಯಾಸ್ ಸಂಪರ್ಕ ಲಭ್ಯವಿರಲಿಲ್ಲ. ಬಡತನದಲ್ಲೇ ಬದುಕುವಂತಾಗಿತ್ತು. ಈಗ ದೇಶ ಬದಲಾಗಿದೆ. ಬಡವನ ಈ ಮಗ 'ಸೇವಕ'ನಾಗಿ ಕೆಲಸ ಮಾಡಿ 10 ವರ್ಷಗಳಲ್ಲಿ 60 ವರ್ಷಗಳಿಗಿಂತಲೂ ಹೆಚ್ಚು ಅಭಿವೃದ್ಧಿ ಸಾಧಿಸಿದ್ದೇವೆ ಎಂದು ಹೇಳಿದರು.

ಶುಭ ಗಳಿಗೆ ಬಂದಿದೆ: ದೇಶವು ಅಭಿವೃದ್ಧಿ ಪಥದಲ್ಲಿ ಸಾಗುವ ಶುಭ ಗಳಿಗೆ ಬಂದಿದೆ. ಅದನ್ನು ನಾನು ಈ ಹಿಂದೆಯೂ ಕೆಂಪುಕೋಟೆಯಲ್ಲಿ ಹೇಳಿದ್ದೇನೆ. ಅದನ್ನು ಕಳೆದುಕೊಳ್ಳಬಾರದು. ಆದ್ದರಿಂದ 2024 ರ ಈ ಚುನಾವಣೆ ಬಹಳ ಮಹತ್ವದ್ದಾಗಿದೆ. ದೇಶದ ಹಿತಾಸಕ್ತಿಗಾಗಿ ತೆಗೆದುಕೊಂಡ ಅನೇಕ ದೊಡ್ಡ ನಿರ್ಧಾರಗಳನ್ನು ಜನರು ನೋಡಿದ್ದಾರೆ. ಇಂದು ದೇಶ ಮತ್ತು ಬಿಹಾರದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಕಟ್ಟಿಕೊಡಲಾಗಿದೆ. ಆಧುನಿಕ ಎಕ್ಸ್‌ಪ್ರೆಸ್‌ವೇಗಳು, ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ವಂದೇ ಭಾರತ್‌ನಂತಹ ರೈಲುಗಳು ಹೆಚ್ಚುತ್ತಿವೆ ಎಂದು ಪ್ರಧಾನಿ ಹೇಳಿದರು.

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್​ ಬಂದಿಲ್ಲ: ಶತಮಾನದ ಕನಸಾಗಿದ್ದ ರಾಮಮಂದಿರ ನಿರ್ಮಾಣವು ನಡೆದು ಭಾರತೀಯರ ಆಸೆ ಪೂರೈಕೆಯಾಗಿದೆ. ದೇಶವೇ ಆರಾಧಿಸುವ ಪುರುಷೋತ್ತಮನ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಬಂದಿಲ್ಲ. ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಚುನಾವಣೆಯಲ್ಲಿ ಇದು ಪ್ರತಿಫಲಿಸಬೇಕು ಎಂದರು.

ಏಪ್ರಿಲ್​ 19 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಬಿಹಾರದ ನವಾಡ, ಗಯಾ, ಔರಂಗಾಬಾದ್ ಮತ್ತು ಜಮುಯಿ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎನ್‌ಡಿಎ ಸೀಟು ಹಂಚಿಕೆಯ ಪ್ರಕಾರ, ಬಿಜೆಪಿ 17 ಸ್ಥಾನಗಳಲ್ಲಿ, ಅದರ ಮಿತ್ರಪಕ್ಷ ಜೆಡಿಯು 16 ಸ್ಥಾನ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 5, ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ(ಹೆಚ್​ಎಎಮ್​) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ (RLSP) 1 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿವೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ರಾಜಕೀಯ ಅಳಿವು ಉಳಿವಿಗಾಗಿ ಉದ್ಧವ್​ ಠಾಕ್ರೆ, ಶರದ್​ ಪವಾರ್​ ಹೋರಾಟ - lok sabha election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.