ETV Bharat / bharat

ಲೋಕಸಭೆ ಚುನಾವಣೆ: ರಾಜಕೀಯ ಅಳಿವು ಉಳಿವಿಗಾಗಿ ಉದ್ಧವ್​ ಠಾಕ್ರೆ, ಶರದ್​ ಪವಾರ್​ ಹೋರಾಟ - lok sabha election

author img

By ETV Bharat Karnataka Team

Published : Apr 7, 2024, 2:12 PM IST

ಮಹಾರಾಷ್ಟ್ರದ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಮತ್ತು ಎನ್​ಸಿಪಿ ಈ ಬಾರಿ ಭಾರೀ ಸಂದಿಗ್ಧ ಸ್ಥಿತಿಯಲ್ಲಿವೆ. ಅದರಲ್ಲೂ ಶರದ್​​ ಪವಾರ್​ ಮತ್ತು ಉದ್ಧವ್​ ಠಾಕ್ರೆ ರಾಜಕೀಯ ಜೀವನವನ್ನು ಈ ಚುನಾವಣೆ ನಿರ್ಧರಿಸಲಿದೆ.

ಲೋಕಸಭೆ ಚುನಾವಣೆ
ಲೋಕಸಭೆ ಚುನಾವಣೆ

ಮುಂಬೈ (ಮಹಾರಾಷ್ಟ್ರ): ಲೋಕಸಭೆ ಚುನಾವಣೆ ಪ್ರಚಾರದ ಕಾವು ಜೋರಾಗಿದೆ. ಮಹಾರಾಷ್ಟ್ರದ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಮತ್ತು ಎನ್​ಸಿಪಿ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಇದಕ್ಕೆ ಕಾರಣ ಅದು ಎರಡು ಬಣಗಳಾಗಿ ಹೋಳಾಗಿದ್ದು. ಎನ್​ಸಿಪಿಯ ಶರದ್​ ಪವಾರ್​ ಮತ್ತು ಶಿವಸೇನೆಯ ಉದ್ಧವ್​ ಠಾಕ್ರೆ ಈ ಚುನಾವಣೆಯಲ್ಲಿ ಅಳಿವು ಉಳಿವಿಗಾಗಿ ಹೋರಾಟ ನಡೆಸಲಿದ್ದಾರೆ.

ಶಿವಸೇನೆಯಿಂದ ಬಂಡೆದ್ದು ಬಿಜೆಪಿ ಜೊತೆ ಸೇರಿ ಸಿಎಂ ಆಗಿರುವ ಏಕನಾಥ್​ ಶಿಂಧೆ ಮತ್ತು ಎನ್​ಸಿಪಿಯಿಂದ ದೂರವಾಗಿ ಸರ್ಕಾರದಲ್ಲಿ ಡಿಸಿಎಂ ಆಗಿರುವ ಅಜಿತ್​ ಪವಾರ್​ ಎರಡೂ ಪ್ರಾದೇಶಿಕ ಪಕ್ಷಗಳಿಗೆ ಮರ್ಮಾಘಾತ ನೀಡಿದ್ದಾರೆ. ಪಕ್ಷದ ಮೇಲಿನ ನಿಜವಾದ ಹಕ್ಕು ಕೂಡ ಇಲ್ಲವಾಗಿದೆ. ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಅವರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಸಿಎಂ ಏಕನಾಥ್​ ಶಿಂಧೆ ಅವರ ನೇತೃತ್ವದ ಸೇನೆಯನ್ನು ನಿಜವಾದ ಎನ್‌ಸಿಪಿ ಮತ್ತು ಶಿವಸೇನೆ ಪಕ್ಷ ಎಂದು ತೀರ್ಪು ನೀಡಿದ್ದಾರೆ. ಇದರಿಂದ ಪಕ್ಷ ಮತ್ತು ಅಧಿಕಾರ ಕಳೆದುಕೊಂಡಿರುವ ಈರ್ವರು ನಾಯಕರು ಭಾರೀ ಸವಾಲು ಎದುರಿಸುತ್ತಿದ್ದಾರೆ.

ರಾಜಕೀಯ ವಿಶ್ಲೇಷಕ ಪ್ರಕಾಶ್ ಅಕೋಲ್ಕರ್ ಹೇಳುವಂತೆ, ಇಬ್ಬರೂ ನಾಯಕರು ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕಿದೆ. ಇಲ್ಲದಿದ್ದರೆ ಅವರು ರಾಜಕೀಯ ಅಳಿವಿನ ಅಪಾಯವನ್ನು ಎದುರಿಸಬೇಕಾಗಿ ಬರಬಹುದು. ಉದ್ಧವ್ ಠಾಕ್ರೆ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯವರೆಗೆ ತಮ್ಮ ಬಲವನ್ನು ಕಾಪಾಡಿಕೊಳ್ಳಲು ಕನಿಷ್ಠ ಆರರಿಂದ ಏಳು ಕ್ಷೇತ್ರಗಳನ್ನು ಗೆಲ್ಲಲೇಬೇಕಿದೆ ಎಂದಿದ್ದಾರೆ.

2019 ರಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿದ್ದಾಗ ಅದು ಸ್ಪರ್ಧಿಸಿದ ಕ್ಷೇತ್ರಗಳಷ್ಟು ಶಿವಸೇನೆ ಸ್ಪರ್ಧೆ ಮಾಡುತ್ತಿತ್ತು. ಈಗ ರಾಜಕೀಯ ವರ್ತಮಾನ ಬದಲಾಗಿದ್ದು, ಪಕ್ಷ ಹೋಳಾಗಿದೆ. ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಂಡು 21 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಎನ್​ಸಿಪಿ 10 ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಡಿ ಸ್ಫರ್ಧೆ ಮಾಡುತ್ತಿದೆ. ಉಳಿದಂತೆ ಕಾಂಗ್ರೆಸ್​ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಾರಾಮತಿ ಕಣ ಕುತೂಹಲ: ಎನ್​ಸಿಪಿಗೆ ಇರುವ ದೊಡ್ಡ ಸವಾಲೆಂದರೆ ಅದು ಬಾರಾಮತಿ ಕ್ಷೇತ್ರ. ಇಲ್ಲಿ ಮೂರು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಶರದ್​ ಪವಾರ್​ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಡಿಸಿಎಂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರ ಸವಾಲನ್ನು ಎದುರಿಸುತ್ತಿದ್ದಾರೆ. ಇಲ್ಲಿ ಕುಟುಂಬಗಳ ಮಧ್ಯೆ ಹೋರಾಟ ನಡೆಯಲಿದೆ. ಈ ಕ್ಷೇತ್ರವನ್ನು ಕಳೆದುಕೊಂಡಲ್ಲಿ ಶರದ್ ಪವಾರ್ ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ. ಕಾರಣ ತಮ್ಮ ರಾಜಕೀಯ ಉತ್ತರಾಧಿಕಾರಿ ಪುತ್ರಿಯ ಸೋಲು ಪಕ್ಷವನ್ನು ಮುಳುಗಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್ ಅಕೋಲ್ಕರ್ ಅವರ ಅಭಿಮತವಾಗಿದೆ.

ಇನ್ನೂ, ಉದ್ಧವ್ ಠಾಕ್ರೆ ಅವರು ನೇರ ಚುನಾವಣೆಯಲ್ಲಿ ಎಂದೂ ಸ್ಪರ್ಧಿಸಿಲ್ಲ. ಮುಖ್ಯಮಂತ್ರಿಯಾದಾಗಲೂ ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಸ್ಪರ್ಧೆ ಮಾಡದ್ದನ್ನು ವಿಪಕ್ಷಗಳು ಹಲವು ಬಾರಿ ಲೇವಡಿ ಮಾಡಿವೆ. ಚುನಾವಣಾ ಪ್ರಚಾರಕ್ಕಾಗಿ ಠಾಕ್ರೆ ಅವರು ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದು, ರ್ಯಾಲಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಬಂಧನ ವಿರೋಧಿಸಿ ಆಪ್​ ನಾಯಕರಿಂದ ಸಾಮೂಹಿಕ ಉಪವಾಸ - AAP collective fast protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.