ETV Bharat / state

ವಿಜಯಪುರ: ಗೋಲ್ಲಾಳೇಶ್ವರ, ಬಸವೇಶ್ವರ ರಥೋತ್ಸವದಲ್ಲಿ ಇಬ್ಬರು ಭಕ್ತರ ಸಾವು

author img

By

Published : Apr 6, 2023, 9:35 PM IST

Updated : Apr 7, 2023, 6:43 AM IST

ವಿಜಯಪುರ ಜಿಲ್ಲೆಯಲ್ಲಿ ರಥೋತ್ಸವದ ವೇಳೆ ಇಬ್ಬರು ಮೃತಪಟ್ಟ ಎರಡು ಪ್ರತೇಕ ಘಟನೆಗಳು ನಡೆದಿವೆ. ಗೋಲ್ಲಾಳೇಶ್ವರ ಮತ್ತು ಬಸರಕೋಡ ಪವಾಡ ಬಸವೇಶ್ವರ ಜಾತ್ರೆಯ ರಥೋತ್ಸವದ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.

ಗೋಲ್ಲಾಳೇಶ್ವರ ಜಾತ್ರೆ ರಥೋತ್ಸವ
ಗೋಲ್ಲಾಳೇಶ್ವರ ಜಾತ್ರೆ ರಥೋತ್ಸವ

ಗೋಲ್ಲಾಳೇಶ್ವರ ರಥೋತ್ಸವದಲ್ಲಿ ಭಕ್ತ ಸಾವು

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿಂದು ನಡೆಯುತ್ತಿದ್ದ ಗೋಲ್ಲಾಳೇಶ್ವರ ರಥೋತ್ಸವದಲ್ಲಿ ನಡೆದ ಅವಘಡದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತನನ್ನು ಸಾಹೇಬ ಪಟೇಲ(ಮುದುಕಣ್ಣ) ಖಾಜಾಪಟೇಲ ಕಾಚಾಪೂರ(55) ಎಂದು ಗುರುತಿಸಲಾಗಿದೆ.

ಇವರು ತಮ್ಮ 18ನೇ ವಯಸ್ಸಿನಿಂದಲೂ ತೇರಿಗೆ ಕಳಶ ಮತ್ತು ಕೊಡೆ ಕಟ್ಟುತ್ತಿದ್ದಾರೆ. ಆದರೆ ಈ ಘಟನೆಯಲ್ಲಿ ಕೈಯಲ್ಲಿದ್ದ ಹಗ್ಗ ಕೊಸರಿದ ಕಾರಣ ರಥದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಅವರು ಬಿದ್ದರು. ಇದೇ ಸಂದರ್ಭದಲ್ಲಿ ಓರ್ವ ವ್ಯಕ್ತಿಯ ಕಾಲು ಮುರಿದಿದೆ ಎಂದು ತಿಳಿದುಬಂದಿದೆ.

ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ಇಂದಿನಿಂದ ಆರಂಭಗೊಂಡ ಗೋಲ್ಲಾಳೇಶ್ವರ ಜಾತ್ರೆಯು ರಥೋತ್ಸವದೊಂದಿಗೆ ಮೊದಲ್ಗೊಂಡು ಐದು ದಿನಗಳ‌ ನಂತರ ಕಳಸದ ಮೆರವಣಿಗೆ ಆದ ಬಳಿಕ ಸಂಪನ್ನಗೊಳ್ಳಬೇಕಿತ್ತು.‌ ಜಾತ್ರೆಗೆ ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಸೇರುತ್ತಾರೆ.

ಧರ್ಮದರ್ಶಿ ವರಪುತ್ರ ಹೊಳೆಪ್ಪನವರ ದೇವರಮನಿ ಮಾತನಾಡಿ, "ಮುದುಕಣ್ಣ ಕಾಚಾಪುರ ಗೋಲ್ಲಾಳೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದರು. ಘಟನೆಯಿಂದ ಭಕ್ತರು ಧೃತಿಗೆಡಬಾರದು. ಶಾಂತಿ ಕಾಪಾಡಬೇಕು" ಎಂದು ಮನವಿ ಮಾಡಿದ್ದಾರೆ.

ರಥದ ಚಕ್ರಕ್ಕೆ ಸಿಲುಕಿದ ಭಕ್ತ ಸಾವು: ಬಸರಕೋಡ ಪವಾಡ ಬಸವೇಶ್ವರ ಜಾತ್ರೋತ್ಸವದ ಅಂಗವಾಗಿ ಸಂಜೆ ರಥೋತ್ಸವ ಜರುಗುತ್ತಿದ್ದ ವೇಳೆ ಗ್ರಾಮಸ್ಥ ನಾಗಪ್ಪ ಯಲ್ಲಪ್ಪ ವಣಕ್ಯಾಳ (24) ಎಂಬಾತ ರಥಕ್ಕೆ ಕಟ್ಟಿದ್ದ ಹಗ್ಗ ಹಿಡಿದು ಆಯತಪ್ಪಿ ಜಾರಿ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಅಕ್ಕಪಕ್ಕದಲ್ಲಿದ್ದ ಜನರು, ಪೊಲೀಸರು ತಾಲೂಕಾಸ್ಪತ್ರೆಗೆ ದಾಖಲಿಸಿದ್ದರು. ಚಕ್ರ ಹರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತ ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪಿಎಸ್​ಐ ಆರೀಫ್ ಮುಶಾಪುರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ಪೂರದ ಜ್ವಾಲೆಗೆ ವಾಹನಗಳು ಕರಕಲು: ಇತಿಹಾಸ ಪ್ರಸಿದ್ಧ ಬೆಂಗಳೂರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಇಂದು ಕರಗ ಆಚರಣೆಯ ಸಂದರ್ಭದಲ್ಲಿ ಭಕ್ತರು ಭಾರಿ ಪ್ರಮಾಣದ ಕರ್ಪೂರಕ್ಕೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಸಾಕಷ್ಟು ವಾಹನಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿವೆ.

ಇದನ್ನೂ ಓದಿ: ಬೆಂಗಳೂರು ಕರಗ: ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಿದ ಭಕ್ತರು, 20ಕ್ಕೂ ಹೆಚ್ಚು ವಾಹನಗಳಿಗೆ ಹಾನಿ

Last Updated :Apr 7, 2023, 6:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.