ETV Bharat / state

ಬೆಂಗಳೂರು ಕರಗ: ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಿದ ಭಕ್ತರು, 20ಕ್ಕೂ ಹೆಚ್ಚು ವಾಹನಗಳಿಗೆ ಹಾನಿ

author img

By

Published : Apr 6, 2023, 7:29 PM IST

Updated : Apr 6, 2023, 7:40 PM IST

ಕರಗ ಆಚರಣೆಯ ಸಂದರ್ಭದಲ್ಲಿ ಭಕ್ತರು ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಿದ ಪರಿಣಾಮ ಅವಘಡ ಸಂಭವಿಸಿದೆ.

ಬೈಕ್ ಹಾಗೂ ಆಟೋ ಭಸ್ಮ
ಬೈಕ್ ಹಾಗೂ ಆಟೋ ಭಸ್ಮ

ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಇಂದು ಕರಗ ಆಚರಣೆಯ ಸಂದರ್ಭದಲ್ಲಿ ಭಕ್ತರು ಭಾರಿ ಪ್ರಮಾಣದ ಕರ್ಪೂರಕ್ಕೆ ಬೆಂಕಿ ಹಚ್ಚಿದ್ದು, ಹಲವು ವಾಹನಗಳು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ. ಕರಗೋತ್ಸವ ಪ್ರಯುಕ್ತ ಇಂದು ಪೂಜಾ ವಿಧಿವಿಧಾನ ಆರಂಭಗೊಳ್ಳುತ್ತಿದ್ದಂತೆ ಎನ್‌.ಆರ್.ಸಿಗ್ನಲ್​ನಿಂದ ಧರ್ಮರಾಯ ದೇವಸ್ಥಾನದವರೆಗೆ ಸುಮಾರು 700 ಮೀಟರ್​ ದೂರ ಭಕ್ತರು ಕರ್ಪೂರ ಹಚ್ಚಿ ಸೇವೆ ಸಲ್ಲಿಸುತ್ತಿದ್ದರು. ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಿದ ಕಾರಣ ಬೆಂಕಿ ಆವರಿಸಿಕೊಂಡಿತು. ನೋಡು ನೋಡುತ್ತಿದ್ದಂತೆ ಬೆಂಕಿ ರಸ್ತೆ ಪಕ್ಕ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಬೈಕ್ ಹಾಗೂ ಆಟೋಗಳಿಗೆ ತಗುಲಿದೆ. ಕ್ಷಣಾರ್ಧದಲ್ಲಿ ವಾಹನಗಳು ಸುಟ್ಟು ಹೋಗಿವೆ. ‌

ದೇವಸ್ಥಾನ ಆಡಳಿತ ಮಂಡಳಿ ಕರ್ಪೂರ ಹಚ್ಚಬೇಡಿ ಎಂದು ವಿನಂತಿಸಿದ್ದರೂ ಭಕ್ತರು ದೊಡ್ಡ ಪ್ರಮಾಣದಲ್ಲಿ ಕರ್ಪೂರ ಬೆಳಗಿದ್ದರಿಂದ ಅನಾಹುತ ಸಂಭವಿಸಿದೆ. ಜನರು ಬೆಂಕಿ ನಂದಿಸಲು ಪ್ರಯತ್ನಿಸಲು ಪ್ರಯತ್ನಿಸಿದರೂ ತಹಬದಿಗೆ ಬಾರದೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ತುರ್ತು ಸೇವಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಗ್ನಿಯನ್ನು ಸಂಪೂರ್ಣವಾಗಿ ನಂದಿಸಿದರು.

ಇದನ್ನೂ ಓದಿ: ಆನೇಕಲ್ ಕರಗಕ್ಕೆ ನೀತಿ ಸಂಹಿತೆ ಅಡ್ಡಿ: ಕರಗ ರಹಿತ ಪೂಜಾ ವಿಧಿ ವಿಧಾನಗಳಿಗೆ ಅವಕಾಶ

ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನ ರಾತ್ರಿಯಲ್ಲಿ ಸಂಭ್ರಮದ ಕರಗೋತ್ಸವ ನಡೆಯುತ್ತದೆ. ಇಂದು ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಹೊರಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕರಗ ಉತ್ಸವ : ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ನಗರದ ತಿಗಳರಪೇಟೆಯ ಕರಗೋತ್ಸವ ಕೋಮು ಸೌಹಾರ್ದತೆಗೂ ಹೆಸರುವಾಸಿ. ಉತ್ಸವದಂದು ಕರಗಕರ್ತರು ಮಧ್ಯರಾತ್ರಿ ಅಕ್ಕಿಪೇಟೆಯ ಮಸ್ತಾನ್‌ ಸಾಹೇಬರ ದರ್ಗಾಕ್ಕೆ ತೆರಳಿ ಪದ್ಧತಿಯಂತೆ ಪೂಜೆ ಸಲ್ಲಿಸಲಿದ್ದಾರೆ. ಯಾವುದೇ ಭೇದ-ಭಾವವಿಲ್ಲದೆ ಹಿಂದೂ-ಮುಸ್ಲಿಂ ಜನಾಂಗದವರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: 11 ದಿನಗಳ ಕಾಲ ನಡೆಯುವ ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಕರಗದ ವೇಳೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.‌ ಮಾರ್ಚ್ 29ಕ್ಕೆ ಕರಗ ಉತ್ಸವ ಆರಂಭವಾಗಿದ್ದು, 11 ದಿನಗಳ ಕಾಲ ಅಂದರೆ ಏಪ್ರಿಲ್‌ 8ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.

ಇದನ್ನೂ ಓದಿ: ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ!

Last Updated : Apr 6, 2023, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.