ETV Bharat / state

ರಾಜ್ಯದ ಕುಣಬಿಗಳಿಗೆ ಸಿಗದ ಎಸ್​ಟಿ ಮಾನ್ಯತೆ : ಗೋವಾ ಸ್ಪೀಕರ್‌ ಜೊತೆ ಸೇರಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಕೆ

author img

By

Published : Jan 21, 2023, 4:12 PM IST

Updated : Jan 21, 2023, 4:44 PM IST

2ಎ ಪ್ರವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿ - ಪ್ರತಿಭಟನಕಾರರು ಜೋಯಿಡಾದಿಂದ ಕಾರವಾರದವರೆಗೆ ಸುಮಾರು 100 ಕಿ.ಮೀ ಪಾದಯಾತ್ರೆ - ಕುಣಬಿ ಸಮುದಾಯದವರು ಮೂಲತಃ ಗೋವಾ ರಾಜ್ಯದವರು.

unable-to-get-st-recognition-for-the-kunbis-of-the-state
ರಾಜ್ಯದ ಕುಣಬಿಗಳಿಗೆ ಸಿಗದ ಎಸ್​ಟಿ ಮಾನ್ಯತೆ: ಗೋವಾ ಸ್ಪೀಕರ್‌ ಜೊತೆ ಸೇರಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಕೆ!

ರಾಜ್ಯದ ಕುಣಬಿಗಳಿಗೆ ಸಿಗದ ಎಸ್​ಟಿ ಮಾನ್ಯತೆ : ಗೋವಾ ಸ್ಪೀಕರ್‌ ಜೊತೆ ಸೇರಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಕೆ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಳೆದ ಎರಡು ಮೂರು ದಶಕಗಳಿಂದ ಬೇಡಿಕೆ ಕೇಳಿಬರುತ್ತಿದೆ. ಆದರೆ ಇದುವರೆಗೂ ಯಾವುದೇ ಸರ್ಕಾರಗಳೂ ಕುಣಬಿ ಸಮುದಾಯದವರ ಬೇಡಿಕೆಗೆ ಮನ್ನಣೆ ನೀಡಿರಲಿಲ್ಲ. ಇದೀಗ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಮುಂದಾಗಿರುವ ಕುಣಬಿ ಸಮುದಾಯದವರು ಜೋಯಿಡಾದಿಂದ ಕಾರವಾರದವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ, ಕುಣಬಿ, ಗೌಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಎರಡು-ಮೂರು ದಶಕಗಳಿಂದ ಕೇಳಿ ಬರುತ್ತಿರುವ ಕೂಗು.‌ ಅದರಲ್ಲೂ ಕುಣಬಿ ಸಮಾಜ ತಮ್ಮನ್ನು 2ಎ ಪ್ರವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಸಮಯಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಹಲವರ ಬಳಿ ಮನವಿಯನ್ನ ಮಾಡಿಕೊಂಡು ಬರುತ್ತಿದ್ದರು ದಶಕಗಳಿಂದಲೂ ಸಮುದಾಯಕ್ಕೆ ಆಶ್ವಾಸನೆ ದೊರೆಯುತ್ತಿದೆ ಹೊರತು ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಕುಣಬಿ ಸಮುದಾಯದವರು ಜೋಯಿಡಾದಿಂದ ಕಾರವಾರದವರೆಗೆ ಸುಮಾರು 100 ಕಿ.ಮೀ ಪಾದಯಾತ್ರೆ ಮೂಲಕ ಆಗಮಿಸಿ ಹೋರಾಟಕ್ಕೆ ಮುಂದಾದರು. ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕು ಎಂದು ಪಟ್ಟು ಹಿಡಿದರು.

ಸಾಮಾಜಿಕ ಹಾಗೂ ರಾಜಕೀಯ ಹಿನ್ನಡೆಯಾಗಿದೆ : ಈ ವೇಳೆ ಮಾತನಾಡಿದ ಕುಣಬಿ ಸಮುದಾಯದ ಜಿಲ್ಲಾಧ್ಯಕ್ಷ ಸುಭಾಷ್ ಗಾವಡಾ, ಕಳೆದ 30 ವರ್ಷಗಳಿಂದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದರೂ ಸರ್ಕಾರ ಇಂದಿಗೂ ಪರಿಗಣಿಸಿಲ್ಲ. ನಮಗೆ ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲಾ ಅರ್ಹತೆಗಳಿದೆ. 2003ರಲ್ಲಿ ಗೋವಾದ ನಮ್ಮ ಕುಲಬಾಂದವರಾದ ಅಲ್ಲಿನ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಆದರೆ ಅದೇ ಸಮುದಾಯದ ನಮ್ಮನ್ನು ಸೇರಿಸಿಲ್ಲ. ಇದರಿಂದ ನಮ್ಮ ಬುಡಕಟ್ಟು ಕುಣಬಿ ಸಮುದಾಯದ ಸಾಮಾಜಿಕ ಹಾಗೂ ರಾಜಕೀಯ ಹಿನ್ನಡೆಗೆ ಕಾರಣವಾಗಿದೆ. ಕೂಡಲೇ ಕೇಂದ್ರ ಸರ್ಕಾರ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಇಂದು ಪಾದಯಾತ್ರೆ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದು ಆಗ್ರಹಿಸಿದರು.

ಉತ್ತರಕನ್ನಡ ಜಿಲ್ಲೆಯಲ್ಲಿರುವ ಕುಣಬಿ ಸಮುದಾಯದವರು ಮೂಲತಃ ಗೋವಾ ರಾಜ್ಯದವರು. ಪೋರ್ಚಗೀಸರ ಕಾಲದಲ್ಲಿ ಮತಾಂತರಕ್ಕೆ ಹೆದರಿ ಜೋಯಿಡಾ ತಾಲೂಕಿನ ಅರಣ್ಯ ಪ್ರದೇಶಕ್ಕೆ ಬಂದು ನೆಲೆಸಿದ್ದರು. ಗೋವಾದಲ್ಲಿರುವ ಕುಣಬಿ ಸಮುದಾಯಕ್ಕೆ 2007ರಲ್ಲೇ ಪರಿಶಿಷ್ಟ ಪಂಗಡದ ಮಾನ್ಯತೆ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿರುವ ಕುಣಬಿ ಸಮುದಾಯದ ಬೇಡಿಕೆಯನ್ನು ರಾಜ್ಯ, ಕೇಂದ್ರ ಸರ್ಕಾರಗಳು ನಿರ್ಲಕ್ಷಿಸಿವೆ ಎನ್ನುವುದು ಪ್ರತಿಭಟನಕಾರರ ಆರೋಪವಾಗಿದೆ.

ಗೋವಾ ಮತ್ತು ಕರ್ನಾಟಕದ ಕುಣಬಿಗಳು ಒಂದೇ ಪ್ರದೇಶದಲ್ಲಿ ನೆಲೆಸಿದ್ದರು : ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ ಗೋವಾ ವಿಧಾನಸಭೆಯ ಸ್ಪೀಕರ್ ರಮೇಶ್ ತಾವಡಕರ್ ಮಾತನಾಡಿ, ಕೇಂದ್ರ ಸರ್ಕಾರ ಗೋವಾದ ಕುಣಬಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಭಾಷಾವಾರು, ಪ್ರಾಂತ್ಯಗಳು ರಾಜ್ಯ ರಚನೆ ಆಗುವ ಪೂರ್ವದಲ್ಲಿ ಗೋವಾ ಮತ್ತು ಕರ್ನಾಟಕದ ಕುಣಬಿಗಳು ಒಂದೇ ಪ್ರದೇಶದಲ್ಲಿ ನೆಲೆಸಿದ್ದರು. ಈಗ ಎರಡೂ ರಾಜ್ಯಗಳಲ್ಲಿ ಹಂಚಿಹೋಗಿದ್ದರೂ ಆಚಾರ, ವಿಚಾರಗಳು ಒಂದೇ ಆಗಿವೆ. ಕರ್ನಾಟಕದಲ್ಲಿರುವ ಕುಣಬಿಗಳಿಗೆ ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲ ಅರ್ಹತೆ ಇದೆ ಎಂದರು. ಕರ್ನಾಟಕದ ಕುಣಬಿಗಳಿಗೆ ವಂಚನೆ ಆಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಒಟ್ಟಾರೆ, ಬಹಳಷ್ಟು ಹಿಂದುಳಿದಿರುವ ಕುಣಬಿ ಸಮಾಜ ತಮ್ಮ ಸಮುದಾಯದ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡಕ್ಕೆ ಪರಿಗಣಿಸಲು ಬೇಡಿಕೆ ಇಟ್ಟಿ ಹೋರಾಟ ನಡೆಸುತ್ತಿದ್ದರು ಇಂದಿಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸದಿರುವ ನಿಜಕ್ಕೂ ದುರಂತ. ಕೇವಲ 70 ಸಾವಿರ ಜನಸಂಖ್ಯೆ ಹೊಂದಿರುವ ಪುಟ್ಟ ಅರಣ್ಯವಾಸಿ ಕುಣಬಿ ಸಮುದಾಯ ಪರಿಶಿಷ್ಟ ಪಂಗಡ ಸೇರ್ಪಡೆ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಾಗಿದೆ.

ಇದನ್ನೂ ಓದಿ: 'ಉಟ್ಟಬಟ್ಟೆಯಲ್ಲಿಯೇ ಹೊರ ಹಾಕಿ ಭೂಸ್ವಾಧೀನ': 25 ವರ್ಷಗಳಾದ್ರೂ ಸೀಬರ್ಡ್​ ನಿರಾಶ್ರಿತರ ಕೈ ಸೇರದ ಪರಿಹಾರ

Last Updated :Jan 21, 2023, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.