'ಉಟ್ಟಬಟ್ಟೆಯಲ್ಲಿಯೇ ಹೊರ ಹಾಕಿ ಭೂಸ್ವಾಧೀನ': 25 ವರ್ಷಗಳಾದ್ರೂ ಸೀಬರ್ಡ್​ ನಿರಾಶ್ರಿತರ ಕೈ ಸೇರದ ಪರಿಹಾರ

author img

By

Published : Jan 20, 2023, 1:26 PM IST

ins kadamba project refugees

ಸೀಬರ್ಡ್ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದು. ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ಸುಮಾರು 400 ಕುಟುಂಬಗಳ ನಿರಾಶ್ರಿತರಿಗೆ 25 ವರ್ಷ ಕಳೆದರೂ ಇನ್ನೂ ಪರಿಹಾರ ಕೈ ಸೇರಿಲ್ಲ.

ಕಾರವಾರ: ಕದಂಬ ನೌಕಾನೆಲೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದು. ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿ ತಲೆ ಎತ್ತಿದ ಈ ಯೋಜನೆ ನಿರ್ಮಾಣಕ್ಕೆ ಸಾವಿರಾರು ಜನರು ತಮ್ಮ ಭೂಮಿಯನ್ನು ನೀಡಿದ್ದರು. ಹತ್ತಾರು ಗ್ರಾಮಗಳು ಯೋಜನೆ ವ್ಯಾಪ್ತಿಗೆ ಒಳಪಟ್ಟ ಕಾರಣ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು.

ಆದರೆ, ಕದಂಬ ನೌಕಾನೆಲೆ ಸ್ಥಾಪನೆಗೆ ಭೂಮಿ ನೀಡಿದ್ದ ಸುಮಾರು 400 ಕುಟುಂಬಗಳಿಗೆ ಇಂದಿಗೂ ಸರಿಯಾದ ಪರಿಹಾರ ಬಂದಿಲ್ಲ. ಒಂದೆಡೆ, ಸೂಕ್ತ ಪರಿಹಾರ ಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಇನ್ನೊಂದೆಡೆ, ಯೋಜನೆಗೆ ಭೂಮಿ ನೀಡಿದವರಿಗೆ ಪರಿಹಾರ ಕೊಡಲು ಮಂಜೂರಾಗಿದ್ದ ಹಣವನ್ನ ಪಡೆಯಲು ನಿತ್ಯ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಇಂದಿಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಯೋಜನೆ ಪ್ರಾರಂಭದ ವೇಳೆ ಭೂಮಿ ನೀಡಿದವರಿಗೆ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಅಲ್ಲದೇ, ಸೂಕ್ತ ಪರಿಹಾರ ಕೊಡುವುದಾಗಿಯೂ ಹೇಳಿದ್ದರು. ಸದ್ಯ ಉದ್ಯೋಗವೂ ಇಲ್ಲದೇ, ಪರಿಹಾರವೂ ಸಿಗದೇ ಜನ ಪರದಾಟ ನಡೆಸುತ್ತಿದ್ದು ಸರ್ಕಾರದ ನಡೆಗೆ ಕಿಡಿಕಾರುತ್ತಿದ್ದಾರೆ.

'ನೌಕಾನೆಲೆ ಆರಂಭದಲ್ಲಿ ಮನೆಗೊಂದು ಉದ್ಯೋಗ, ಸೂಕ್ತ ಪರಿಹಾರ ಮೊತ್ತ ನೀಡುವ ಭರವಸೆ ನೀಡಿದ್ದರು. ಆದರೆ ಯಾವುದನ್ನೂ ಸರಿಯಾಗಿ ನೀಡಿಲ್ಲ. ಇವರ ಮಾತು ನಂಬಿ ಸಾಲಮಾಡಿಕೊಂಡಿದ್ದು, ಇದೀಗ ಬಡ್ಡಿ ತೀರಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ, ಪರಿಹಾರದ ಹಣ ಬರುವುದಾಗಿ ನಂಬಿದ್ದ ತಾಯಿ, ನಾಲ್ವರು ಅಣ್ಣಂದಿರು ಸಾವನ್ನಪ್ಪಿದ್ದಾರೆ. ನಮಗೂ ಸಾಕಷ್ಟು ಅನಾರೋಗ್ಯ ಸಮಸ್ಯೆ ಇದ್ದು, ಪರಿಹಾರಕ್ಕಾಗಿ ಕಾಯುತ್ತಿದ್ದೇವೆ. ಸರ್ಕಾರ ಕೂಡ ಹೆಚ್ಚುವರಿ ಪರಿಹಾರವನ್ನು ನೀಡಬೇಕು' ಎಂದು ನಿರಾಶ್ರಿತರಾದ ವಾಣಿ ಗಣಪತಿ ನಾಯ್ಕ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸೀಬರ್ಡ್ ನಿರಾಶ್ರಿತರಿಗೆ ಸಿಗದ ಉದ್ಯೋಗ: ಗುತ್ತಿಗೆ ಕಂಪೆನಿಗಳ ವಿರುದ್ಧ ಪ್ರತಿಭಟನೆ

'ಕದಂಬ ನೌಕನೆಲೆಗೆ ಭೂಮಿ ನೀಡುವ ವೇಳೆ ಗುಂಟೆ ಜಮೀನಿಗೆ 150 ರೂ. ಪರಿಹಾರ ನೀಡಿದ್ದರು. ಅದರಲ್ಲಿ ಕೆಲವರು ನ್ಯಾಯಲಯದ ಮೊರೆ ಹೋಗಿದ್ದು, ಸುಪ್ರಿಂ ಕೋರ್ಟ್‌ನಲ್ಲಿ ಗುಂಟೆಗೆ 11,500 ರೂ. ಹಾಗೂ ಇಷ್ಟು ದಿನಗಳ ಕಾಲದ ಬಡ್ಡಿ ನೀಡುವಂತೆ ಆದೇಶ ಬಂದಿದ್ದು ನ್ಯಾಯಾಲಯದ ಮೊರೆ ಹೋದವರಿಗೆ ಪರಿಹಾರವನ್ನು ಸರ್ಕಾರ ನೀಡಿತ್ತು. ಆದರೆ ಸುಮಾರು 400 ಕುಟುಂಬಗಳಿಗೆ ನಾನಾ ಕಾರಣಗಳನ್ನು ನೀಡಿ ಇಂದಿಗೂ ಪರಿಹಾರ ನೀಡಿಲ್ಲ. ಅಂದು ನಾವು ಭೂಮಿ ನೀಡಲು ಒಪ್ಪದೆ ಇದ್ದಾಗ ಉಟ್ಟ ಬಟ್ಟೆಯಲ್ಲಿಯೇ ಹೊರ ಹಾಕಿದ್ದರು. ಇದೀಗ 25 ವರ್ಷಗಳಿಂದ ಪರಿಹಾರಕ್ಕಾಗಿ ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಡಿ, ಅಲೆದಾಡಿ ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನಾದರೂ ತಮಗೆ ನ್ಯಾಯ ಕೊಡಿಸಿ' ಎನ್ನುತ್ತಾರೆ ನಿರಾಶ್ರಿತರಾದ ಕೃಷ್ಣಾನಂದ ನಾಯ್ಕ.

ಇದನ್ನೂ ಓದಿ: 2023ಕ್ಕೆ ಸೀಬರ್ಡ್ 2ನೇ ಹಂತದ ವಿಸ್ತರಣೆ ಪೂರ್ಣ; ಹೇಗಿರುತ್ತೆ ಗೊತ್ತಾ ಕಾರವಾರ ಕದಂಬ ನೌಕಾನೆಲೆ?

ಕಾರವಾರ ಜಿಲ್ಲಾಧಿಕಾರಿಯಾಗಿ ಯಾರೇ ಬಂದರೂ ಅವರ ಬಳಿ ಪರಿಹಾರ ಕೊಡಿಸುವಂತೆ ಸುಮಾರು 400 ಕುಟುಂಬದ ನಿರಾಶ್ರಿತರು ಮನವಿ ಮಾಡಿಕೊಂಡು ಬರುತ್ತಲೇ ಇದ್ದಾರೆ. ಆದರೆ ಯಾವ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಮನಸ್ಸು ಮಾಡಿದ್ರೆ ತಮಗೆ ಪರಿಹಾರ ಒದಗಿಸಬಹುದು. ಇನ್ನಾದರೂ ಸಂಭಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ದೇಶದ ಭದ್ರತೆಯ ಯೋಜನೆಗೆ ಭೂಮಿ ನೀಡಿದವರಿಗೆ ನ್ಯಾಯ ಒದಗಿಸಬೇಕು ಎಂದು ನಿರಾಶ್ರಿತರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.