ಶಿವಮೊಗ್ಗ: 7 ವರ್ಷ ಹಿಂದೆ ನಡೆದ ತೀರ್ಥಹಳ್ಳಿಯ ವಿದ್ಯಾರ್ಥಿನಿ ನಂದಿತಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ, ಜನವರಿ 30 ರಂದು ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯ ನಂದಿತಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿದರು. ಸಿಬಿಐ ತನಿಖೆಗೆ ಆಗ್ರಹಿಸಿ ಜ. 30 ರಂದು 24 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತೇನೆ. ನಂದಿತಾ ಕುಟುಂಬಕ್ಕೆ ನಾನು ನೀಡಿದಷ್ಟು ನೆರವು ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ನೀಡಿಲ್ಲ. ಈ ಪ್ರಕರಣವನ್ನು ನಾನು ಸಚಿವನಾಗಿದ್ದಾಗ ಸಿಐಡಿಗೆ ವಹಿಸಿದ್ದೆ ಎಂದರು.
ಸಿಐಡಿ ತನಿಖೆ ವರದಿ ಬಂದಿದ್ದು ಸರಿಯಾಗಿತ್ತು. ಆದರೆ ಈ ವರದಿಯನ್ನು ಬಿಜೆಪಿ ಒಪ್ಪಿರಲಿಲ್ಲ. ಅದೇ ರೀತಿ ಫೆ. 3 ರಂದು ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ಗುಡ್ಡೆಕೊಪ್ಪದಿಂದ ತೀರ್ಥಹಳ್ಳಿ ಎಸಿಎಫ್ ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಗುವುದು. ಅರಸಾಳು, ಮಂಡಗದ್ದೆ ಮೊದಲಾದ ಕಡೆಗಳಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ ಮಿತಿ ಮೀರಿದೆ. ಇದನ್ನು ಖಂಡಿಸಿ ಪಾದಯಾತ್ರೆ ನಡೆಸಲಾಗುವುದು. ಮತಾಂತರದ ಬಗ್ಗೆ ಗಾಂಧಿ ನಿಲುವು ಏನು ಎಂಬ ಬಗ್ಗೆ ನಾಲ್ಕು ಪುಸ್ತಕಗಳಿದ್ದು, ಅದನ್ನು ಎಲ್ಲರೂ ಓದಬೇಕು. ಕಾಂಗ್ರೆಸ್ ನಿಲುವು ಕೂಡ ಗಾಂಧೀಜಿಯವರ ನಿಲುವೇ ಆಗಿದೆ ಎಂದು ಕಿಮ್ಮನೆ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ನವರು ರಾಜ್ಯದ ಜನತೆಗೆ ಕೊರೊನಾ ಅಂಟಿಸುತ್ತಿದ್ದಾರೆ: ಸಚಿವ ಈಶ್ವರಪ್ಪ
ಬಿಜೆಪಿ ಬದುಕಿರುವುದು ಜಾತಿ-ಧರ್ಮದ ಆಧಾರದ ಮೇಲೆಯೇ ಹೊರತು ಸಾಮಾಜಿಕ ನ್ಯಾಯದ ಮೇಲೆ ಅಲ್ಲ. ಜೀವನಕ್ಕೆ ಕಾಸು ಇಲ್ಲದೆ ಜನ ಸಾಯ್ತಾ ಇದ್ದಾರೆ. ಆದರೆ ಬಿಜೆಪಿಯವರ ಬಳಿ ಮಾತ್ರ ದುಡ್ಡಿದೆ ಎಂದು ಟೀಕಿಸಿದರು.
ತನ್ನ ಜೀವಕ್ಕೆ ಭಾರತದಲ್ಲಿ ಭಯ ಇದೆ ಎಂದು ಪ್ರಧಾನಿ ಮೋದಿ ಅವರಿಗೆ ಅನ್ನಿಸಿದರೆ, ಪ್ರಧಾನಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು. ಮೋದಿಯವರ ಎಲ್ಲೇ ಪ್ರವಾಸ ಮಾಡಿದರು ಸಹ ಅದರ ಜವಾಬ್ದಾರಿ ಎಸ್.ಪಿ.ಜಿ ಯವರದ್ದಾಗಿರುತ್ತದೆಯೇ ಹೊರತು ಸ್ಥಳೀಯ ಆಡಳಿತದ್ದಾಗಿರುವುದಿಲ್ಲ. ಹೀಗಾಗಿ ಕೇಂದ್ರದ ಗೃಹ ಸಚಿವ ಅಮಿತಾ ಶಾ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಒತ್ತಾಯಿಸಿದರು.