ETV Bharat / state

ಚುನಾವಣೆ ಮುಂದೂಡುವ ಹುನ್ನಾರ ನಡೆಯುತ್ತಿದೆ: ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ

author img

By

Published : Mar 8, 2023, 4:04 PM IST

Updated : Mar 8, 2023, 4:12 PM IST

there-is-an-uproar-ahead-of-the-election-kjp-state-president-padmanabha
ಚುನಾವಣೆ ಮುಂದುಡೂವ ಹುನ್ನಾರ ನಡೆಯುತ್ತಿದೆ: ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಸ್ಫೋಟಕ ಹೇಳಿಕೆ

ಬಿಜೆಪಿಯವರಿಗೆ ಭಯ ಶುರುವಾಗಿದ್ದು. ಕರ್ನಾಟಕದಲ್ಲಿ ಬಿಜೆಪಿ ರಾಜ್ಯ ನಾಯಕರ ಮುಖ ಇಟ್ಟುಕೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಚುನಾವಣೆ ಮುಂದೂಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಆರೋಪಿಸಿದರು.

ಮಂಡ್ಯ: ಬಿಜೆಪಿಯಿಂದ 2023ರ ಚುನಾವಣೆ ಮುಂದೂಡುವ ಹುನ್ನಾರ ಹಾಗೂ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಮೆಗಾ ಪ್ಲಾನ್ ನಡೆಯುತ್ತಿದೆ ಎಂದು ಮಂಡ್ಯದಲ್ಲಿ ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಭಯ ಶುರುವಾಗಿದೆ. ಕರ್ನಾಟಕದಲ್ಲಿ ಅವರು ತಮ್ಮ ಮುಖ ಇಟ್ಟುಕೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಕೇಂದ್ರದವರನ್ನು ಕರೆದುಕೊಂಡು ಬರ್ತಿದ್ದಾರೆ. ಉನ್ನತ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಚುನಾವಣೆ ಮುಂದೂಡುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ನಾಳೆ ರಾಜ್ಯಕ್ಕೆ ಚುನಾವಣೆ ಆಯೋಗದವರು ಬರುತ್ತಿದ್ದಾರೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ವನಾಶ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಜನರಿಗೆ ಹತ್ತು ಸಾವಿರ ಕೊಟ್ಟು ಅವರನ್ನ ಭ್ರಷ್ಟರನ್ನಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಬಾರಿ
ಕರ್ನಾಟಕ ಜನತಾ ಪಕ್ಷ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬುದ್ಧಿ ಕಲಿಸುತ್ತದೆ. ಚುನಾವಣೆ ಮುಂದೂಡಲು ರಾಷ್ಟ್ರೀಯ ವಿಪತ್ತುಗಳು, ಗಲಭೆಗಳು, ಭೂಕಂಪ ಆಗಬೇಕು, ಅದು ಏನು ಆಗದೇ ಇದ್ದರೆ ರಾಜ್ಯಪಾಲರನ್ನು ಬಳಸಿಕೊಂಡು 6 ತಿಂಗಳು ಸದನವನ್ನ ಕತ್ತಲಿನಲ್ಲಿ ಇಟ್ಟು ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಹೊರಟಿದ್ದಾರೆ ಮತ್ತು ಚುನಾವಣೆ ಮುಂದೂಡುವ ಹುನ್ನಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ನಾವು ಇದರ ವಿರುದ್ಧ ಕೋರ್ಟ್​ಗೆ ಹೋಗುತ್ತೇವೆ. ರಾಜ್ಯಪಾಲರನ್ನು ಬಳಸಿಕೊಂಡು ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಸಾಧ್ಯತೆ ಇದೆ. ಕರ್ನಾಟಕ ಬಿಟ್ಟುಹೋದರೆ ಬಿಜೆಪಿ ದಕ್ಷಿಣ ಭಾರತದಲ್ಲಿ ಇರುವುದಿಲ್ಲ. ದಕ್ಷಿಣದಲ್ಲಿ ಬಿಜೆಪಿ ಪಕ್ಷ ಉಳಿಸಿಕೊಳ್ಳಲು ಶತಾಯಗತಾಯ ಏನು ಬೇಕಾದರು ಮಾಡಲು ತಯಾರಿದ್ದಾರೆ. ಬೇರೆ ಪಕ್ಷದ ಶಾಸಕರನ್ನು ಕೋಟಿ ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಕಳೆದ ಬಾರಿ ಸರ್ಕಾರ ರಚಿಸಲು 100 ಕೋಟಿ ಕೊಟ್ಟು 17 ಜನರನ್ನು ಕರೆಸಿಕೊಂಡರಲ್ಲ. ಹಾಗೇ ಏನು ಬೇಕಾದರೂ ಮಾಡುತ್ತಾರೆ. ಅವರ ಬಳಿ ದುಡ್ಡು, ಅಧಿಕಾರ, ಇಡಿ, ಸಿಬಿಐ ಎಲ್ಲಾ ಇದೆ ಎಂದು ಪದ್ಮನಾಭ ಪ್ರಸನ್ನ ಆರೋಪಿಸಿದರು.

ಜನಾರ್ದನ ರೆಡ್ಡಿ ವಿರುದ್ಧವೂ ವಾಗ್ದಾಳಿ : ಅವರ ವಿಚಾರ ಮಾತನಾಡಬಾರದು, ಅವರು ತಪ್ಪು ಮಾಡಿಲ್ಲ, ಕೆಟ್ಟದು ಮಾಡಿಲ್ಲ ಎಂದು ಹೇಳುತ್ತಾರೆ. ಮಸೀದಿ, ದೇವಸ್ಥಾನಗಳಿಗೆ ದುಡ್ಡು ಕೊಡುತ್ತಿದ್ದಾರೆ. ಆ ದುಡ್ಡು ಕರ್ನಾಟಕದ ಮಣ್ಣನ್ನು ಲೂಟಿ ಮಾಡಿ ಸಂಪಾದಿಸಿದ ದುಡ್ಡು, ಅವರು ತಪ್ಪು ಮಾಡಿಲ್ಲವಾದರೆ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಏಕೆ ಜೈಲಿಗೆ ಕಳುಹಿಸಿದ್ದರು. ಜನಾರ್ದನ ರೆಡ್ಡಿ ಒಳ್ಳೆಯವರಾಗಿದ್ದರೆ ಯಾಕೆ 5 ವರ್ಷ ಜೈಲಿನಲ್ಲಿ ಇರುತ್ತಿದ್ದರು? ಎಂದು ಪ್ರಶ್ನಿಸಿದರು. ಇವಾಗ ಕಾಂಗ್ರೆಸ್-ಬಿಜೆಪಿಯನ್ನು ಬ್ಲಾಕ್ ಮೇಲ್ ಮಾಡುವುದಕ್ಕಾಗಿ ಅವರು ಹೊಸ ಪಕ್ಷವನ್ನು ಕಟ್ಟಿದ್ದಾರೆ. ಒಂದು ಪರ್ಸೆಂಟ್​ ತೆಗೆದುಕೊಳ್ಳಲ್ಲ. ಜನಾರ್ದನ ರೆಡ್ಡಿ ಬಗ್ಗೆ ಜನರಿಗೆ ಗೊತ್ತಿದೆ ಅವರೇ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಉಘೇ ಮಾದಪ್ಪ ಈಗ ಇನ್ನಷ್ಟು ಶ್ರೀಮಂತ.. ಮಹದೇಶ್ವರನಿಗೆ ಹರಿದುಬಂತು ಕೋಟಿ ಕೋಟಿ ಹಣ

Last Updated :Mar 8, 2023, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.