ETV Bharat / state

'ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ': ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

author img

By ETV Bharat Karnataka Team

Published : Nov 24, 2023, 7:33 PM IST

Sumalatha offered pooja to Ambareesh grave
ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್

ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ದೊಡ್ಡರಸಿನಕೆರೆಗೆ ಸುಮಲತಾ ಅಂಬರೀಶ್ ಭೇಟಿ ನೀಡಿ ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್

ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಅಂಬರೀಶ್ ಹುಟ್ಟೂರಾದ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಗೆ ಪತ್ನಿ, ಸಂಸದೆ ಸುಮಲತಾ ಅಂಬರೀಶ್ ಅವರು ಭೇಟಿ ಕೊಟ್ಟು ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಮಲತಾ ಅವರ ಜೊತೆ ಹಿರಿಯ ನಟ ದೊಡ್ಡಣ್ಣ, ರಾಕ್​ಲೈನ್ ವೆಂಕಟೇಶ್ ಸಹ ಭಾಗಿಯಾಗಿದ್ದರು.

ಮಾಧ್ಯಮದವರ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಇಂದು ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ. ಮಂಡ್ಯದಲ್ಲಿಂದು ಅಂಬಿ ಕನಸಿನ ಫೌಂಡೇಶನ್ ಲೋಕಾರ್ಪಣೆಯಾಗುತ್ತಿದೆ. ಅಭಿಮಾನಿಗಳು ಅಂಬಿ ಅವರನ್ನು ಕಲಿಯುಗದ ಕರ್ಣ ಎಂದು ಕರೆದರು. ಅದೇ ಹಾದಿಯಲ್ಲಿ ಅವರ ಲೆಗೆಸಿ ಮುಂದುವರೆಸುತ್ತೇವೆ. ಹಾಗಾಗಿ, ಅವರ ಪುಣ್ಯಸ್ಮರಣೆಯ ದಿನದಂದು ಅಂಬರೀಶ್ ಫೌಂಡೇಶನ್ ಉದ್ಘಾಟನೆಯಾಗುತ್ತಿದೆ. ಅಂಬಿ ಅವರನ್ನು ಯಾರೂ ಮರೆತಿಲ್ಲ. ನಾನು ಹೋದ ಕಡೆಯಲ್ಲಾ ಅಂಬರೀಶ್ ಅವರನ್ನು ನೆನೆಯುತ್ತಾರೆ. ಅವರ ಬಗ್ಗೆ ಪ್ರತಿದಿನ, ಪ್ರತಿಕ್ಷಣ ಮಾತನಾಡುತ್ತಾರೆ. ಅಂಬಿ ನೆನಪಾಗದ ದಿನ, ಕ್ಷಣವೇ ಇಲ್ಲ ಎಂದು ತಿಳಿಸಿದರು.

ಅಭಿ ನಟನೆಯ ಸಿನಿಮಾ ಈ ದಿನವೇ ರಿಲೀಸ್‌ ಆಗುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ. ಅಂಬರೀಶ್ ಅವರ ಆಶೀರ್ವಾದದಿಂದಲೇ ಇಂದು ಬ್ಯಾಡ್​ ಮ್ಯಾನರ್ಸ್​ ಚಿತ್ರ ರಿಲೀಸ್​ ಆಗಿದೆ ಎನಿಸುತ್ತಿದೆ. ಅಭಿಮಾನಿಗಳು ಅಂಬರೀಶ್ ಅವರನ್ನು ಅಭಿಯಲ್ಲಿ ಕಾಣ್ತಾರೆ. ಹಂತಹಂತವಾಗಿ ಕಷ್ಟಪಟ್ಟು ಅಭಿ ಬೆಳೆದು ಬರಬೇಕು. ತಂದೆಯಂತೆ ಅಭಿ ಕೂಡ ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡಬೇಕು. ಇಂದಿನ ಸಂಪೂರ್ಣ ದಿನ ಅಂಬರೀಶ್ ಅವರಿಗಾಗೇ ಮೀಸಲು. ಹಾಗಾಗಿ ಇಂದು ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಲ್ಲ. ಅಂಬರೀಶ್ ಅವರ ಕನಸನ್ನು ಮುಂದುವರಿಸುವುದಷ್ಟೇ ನಮ್ಮ ಕೆಲಸ ಎಂದು ತಿಳಿಸಿದರು.

ಬಳಿಕ ಮಂಡ್ಯಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ ಅವರು ಡಾ. ಅಂಬರೀಶ್ ಫೌಂಡೇಶನ್ ಲೋಕಾರ್ಪಣೆ ಮಾಡಿದರು. ಮಂಡ್ಯದ ಸಂಜಯ ಥಿಯೇಟರ್ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸುಮಲತಾ ಅವರೂ ಸೇರಿದಂತೆ ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉದ್ಘಾಟನೆ ಮಾಡಿದರು. ಡಾ. ಅಂಬರೀಶ್ ಫೌಂಡೇಶನ್ ವತಿಯಿಂದ ವಿವಿಧ ಗಣ್ಯರಿಗೆ ಸನ್ಮಾನ ಮಾಡಲಾಯಿತು. ವೈದ್ಯ ಡಾ. ಶಂಕರಗೌಡ, ಅಂತಾರಾಷ್ಟ್ರೀಯ ವೀಲ್ ಚೇರ್ ಟೆನ್ನಿಸ್ ಪ್ಲೇಯರ್ ಶಿಲ್ಪಾ, ಸಮಾಜ ಸೇವಕಿ ಅರುಣ ಕುಮಾರಿ ಅವರಿಗೆ ಸತ್ಕಾರದ ನಗದು ಜೊತೆಗೆ ಅಂಬಿ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ಅಂಬರೀಶ್ ಪುಣ್ಯಸ್ಮರಣೆಯಂದು ಪುತ್ರನ ಹೊಸ ಸಿನಿಮಾ ಬಿಡುಗಡೆ; ಸುಮಲತಾ, ದರ್ಶನ್​​ ಭಾವುಕ

ಇದೇ ಸಂದರ್ಭದಲ್ಲಿ ಅಂಬರೀಶ್ ಅವರ ಸಾಧನೆಯನ್ನು, ಗುಣವನ್ನು ಹಿರಿಯ ನಟ ದೊಡ್ಡಣ್ಣ ನೆನೆದರು. ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಕೂಡ ಇಂದೇ ತೆರೆಕಂಡಿದೆ. ಸಂಜಯ್ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿ, ಮಗನ ಸಿನಿಮಾಗೆ ಆಶೀರ್ವದಿಸುವಂತೆ ಸುಮಲತಾ ಅಂಬರೀಶ್ ಮನವಿ ಮಾಡಿಕೊಂಡರು.

ಇದನ್ನೂ ಓದಿ: ಪ್ರಬುದ್ಧತೆ ಮೆರೆದ ತ್ರಿಶಾ ಕೃಷ್ಣನ್: ಮನ್ಸೂರ್​​ ಕ್ಷಮಿಸಿದ ಜನಪ್ರಿಯ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.