ETV Bharat / state

ಅಂಜನಾದ್ರಿಯಲ್ಲಿ ಹನುಮ ಜಯಂತಿ ಮಾಲವಿರಮಣ: ಒಂದು ಲಕ್ಷ ಭಕ್ತರ ಆಗಮನ

author img

By

Published : Apr 6, 2023, 1:36 PM IST

Updated : Apr 6, 2023, 2:28 PM IST

ಕೊಪ್ಪಳದ ಗಂಗಾವತಿ ಅಂಜನಾದ್ರಿಯಲ್ಲಿ ಹನುಮ ಮಾಲೆ ವಿರಮಣ ಕಾರ್ಯಕ್ರಮ ನಡೆದಿದ್ದು ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

hanuman
ಹನುಮಂತ

ಹನುಮ ಜಯಂತಿ ಮಾಲವಿರಮಣ

ಗಂಗಾವತಿ(ಕೊಪ್ಪಳ): ಹನುಮ ಜಯಂತಿಯ ಭಾಗವಾಗಿ ಧರಿಸಿದ್ದ ಹನುಮ ಮಾಲೆ ವಿರಮಣ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಯಲ್ಲಿ ಗುರುವಾರ ಸುಮಾರು ಒಂದು ಲಕ್ಷ ಜನ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ ಹನುಮಂತ ದೇವರ ದರ್ಶನ ಪಡೆದರು. ಹನುಮ ಜಯಂತಿ ಅಂಗವಾಗಿ ದೇಗುಲದಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ಬೆಳಗ್ಗೆ ಮೂರು ಗಂಟೆಯಿಂದಲೇ ಭಕ್ತರು 575ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಹನುಮಪ್ಪನ ದರ್ಶನ ಮಾಡಿ ಧರಿಸಿದ್ದ ಮಾಲೆ ತೆಗೆದರು. ಕೆಲವರು ರಾತ್ರಿಯೇ ಬೆಟ್ಟ ಹತ್ತಿ ದೇವಸ್ಥಾನದ ಪ್ರಾಂಗಣದಲ್ಲಿ ಮಲಗಿ ಬೆಳಗ್ಗೆ ಎರಡು-ಮೂರು ಗಂಟೆಯಲ್ಲಿಯೇ ದೇವರ ದರ್ಶನ ಮಾಡಿ ಮಾಲೆ ತೆಗೆದರು. ಬೆಟ್ಟದ ಮೇಲೆ ಹಬ್ಬದ ಸಂಭ್ರಮ ಮನೆ ಮಾಡಿದ್ದಲ್ಲದೆ, ಭಕ್ತರ ದಟ್ಟಣೆಯಿಂದಾಗಿ ಅಂಜನಾದ್ರಿಯಲ್ಲಿ ಸಂಚಾರ ಸಮಸ್ಯೆ ನಿರ್ಮಾಣವಾಗಿತ್ತು.

ಹೊರ ರಾಜ್ಯದ ಭಕ್ತರ ದಂಡು: ಕರ್ನಾಟಕದ ನಾನಾ ಜಿಲ್ಲೆಗಳಿಂದ ಮಾತ್ರವಲ್ಲ, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಿಂದಲೂ ಭಕ್ತರು ಹನುಮನ ಮಾಲೆ ಧರಿಸಿಕೊಂಡು ಬಂದಿದ್ದರು. ಉತ್ತರ ಭಾರತದ ರಾಜಾಸ್ತಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಪ್ರವಾಸಕ್ಕೆಂದು ಬಂದಿದ್ದ ಹಲವರು ಹನುಮ ಜಯಂತಿ ಅಂಗವಾಗಿ ಬೆಟ್ಟ ಏರಿ ದೇವರ ದರ್ಶನ ಮಾಡಿದರು. ಚುನಾವಣೆಯ ನೀತಿ ಸಂಹಿತೆ ಇರುವ ಕಾರಣಕ್ಕೆ ದೇಗುಲದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸದೇ ಇದ್ದರಿಂದ ಭಕ್ತರು ಉಪಹಾರ, ಊಟಕ್ಕೆ ಪರದಾಡುವಂತಾಗಿತ್ತು. ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಹನುಮನ ಭಕ್ತರು ಅಂಜನಾದ್ರಿಗೆ ಬಂದಿದ್ದರ ಪ್ರಭಾವ ಸಾಮಾನ್ಯ ಪ್ರವಾಸಿಗರಿಗೆ ಭಾರಿ ಸಮಸ್ಯೆಯಾಗಿತ್ತು.

ಇದನ್ನೂ ಓದಿ: ಹನುಮ ಜಯಂತಿ ಆಚರಣೆ: ದೆಹಲಿಯ ಜಹಂಗೀರ್​ಪುರಿಯಲ್ಲಿ ಬಿಗಿ ಬಂದೋಬಸ್ತ್​

ಭಾರಿ ಸಂಚಾರ ದಟ್ಟಣೆ: ಗಂಗಾವತಿಯಿಂದ ಹುಲಿಗಿ ಮಾರ್ಗದಲ್ಲಿ ಭಾರಿ ವಾಹನಗಳ ದಟ್ಟಣೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಗಂಗಾವತಿಯಿಂದ ಕೇವಲ 27 ಕಿ.ಮೀ. ಅಂತರದಲ್ಲಿರುವ ಮತ್ತೊಂದು ಧಾರ್ಮಿಕ ಕ್ಷೇತ್ರ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಹೋಗಲು ಸುಮಾರು ಎರಡು ಗಂಟೆಗೂ ಅಧಿಕ ಸಮಯ ಹಿಡಿಯಿತು. ಸಂಚಾರಿ ದಟ್ಟಣೆ ನಿವಾರಿಸುವಲ್ಲಿ ಪೊಲೀಸರು ಹೈರಾಣಾಗಿದ್ದರು. ಬೇಸಿಗೆಯಾಗಿದ್ದರಿಂದ ಶೇ.70-80 ರಷ್ಟು ಭಕ್ತರು ಬೆಳಗಿನ ಜಾವದಲ್ಲಿಯೇ ದರ್ಶನ ಪಡೆದರು. ಮಾಜಿ ಸಚಿವ ಶಿವರಾಜ ತಂಗಡಗಿ ಬೆಂಬಲಿಗರೊಂದಿಗೆ ಆಗಮಿಸಿ ಮಾಲೆ ವಿರಮಣ ಮಾಡಿದರು.

ನದಿ ಪಾತ್ರದಲ್ಲಿ ಬಟ್ಟೆ: ಹನುಮ ಜಯಂತಿ ಅಂಗವಾಗಿ ಮಾಲೆ ಧರಿಸಿಕೊಂಡು ತಲೆಯ ಮೇಲೆ ಮುಡಿ ಇಟ್ಟುಕೊಂಡು ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರಿಗೆ ಸ್ನಾನ, ಶೌಚಕ್ಕೆ ಸರಿಯಾದ ಸೌಲಭ್ಯ ಕಲ್ಪಿಸದ್ದರಿಂದಾಗಿ ಸಮಸ್ಯೆ ಉಂಟಾಗಿತ್ತು. ಬಯಲು ಪರಿಸರದಲ್ಲಿ ಹಲವರು ಮಲ-ಮೂತ್ರ ವಿಸರ್ಜನೆಗೆ ಮೊರೆ ಹೋದರು. ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದ ಹಲವರು ವ್ರತಾಚರಣೆಯ ಸಂದರ್ಭದಲ್ಲಿ ಧರಿಸಿದ ಕೇಸರಿ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಿರುವುದು ಕಂಡು ಬಂತು.

ಇದನ್ನೂ ಓದಿ: ಹನುಮಂತನ ಫಸ್ಟ್​ ಲುಕ್​ ಬಿಡುಗಡೆ​ ಮಾಡಿದ 'ಆದಿಪುರುಷ್​'

Last Updated :Apr 6, 2023, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.