ETV Bharat / health

ಸಾವಿನಲ್ಲೂ ಸಾರ್ಥಕತೆ; ಬ್ರೈನ್​ ಡೆಡ್​ ಆದ ವ್ಯಕ್ತಿಯ ಹೃದಯ 29ರ ಯುವಕನಿಗೆ ಜೋಡಣೆ.. ಹಲವರ ಬಾಳಿಗೆ ಬೆಳಕು! - telangana brain dead person

author img

By ETV Bharat Karnataka Team

Published : May 24, 2024, 3:29 PM IST

ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ಯುವಕನ ಹೃದಯವನ್ನು ಹಸಿರು ಮಾರ್ಗದ ಮೂಲಕ ರವಾನೆ ಮಾಡುವ ಮೂಲಕ, ಮತ್ತೊಬ್ಬನಿಗೆ ಹೃದಯ ಕಸಿ ಮಾಡಲು ಅನುವು ಮಾಡಿಕೊಡಲಾಗಿದೆ.

before-stopping-the-heart-of-a-brain-dead-person-is-successfully-transplanted-into-another-man
before-stopping-the-heart-of-a-brain-dead-person-is-successfully-transplanted-into-another-man (Etv bharat)

ಹೈದರಾಬಾದ್​: ರಸ್ತೆ ಅಪಘಾತದಲ್ಲಿ ಬ್ರೈನ್​ ಡೆಡ್​ ಆದ ಯುವಕನ ಹೃದಯ ಸೇರಿದಂತೆ ವಿವಿಧ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು, ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ತೆಲಂಗಾಣದ 21 ವರ್ಷದ ಯುವಕನ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಆತನ ಮಿದುಳು ನಿಷ್ಕ್ರಿಯಗೊಂಡಿತ್ತು. ಆದರೆ, ಆತನ ಹೃದಯ ಬಡಿತ ಇನ್ನು ನಿಂತಿರಲಿಲ್ಲ. ಈ ವೇಳೆ ಈತನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ. ಇದೀಗ ಆತನ ಹೃದಯವನ್ನು ಮುಳುಗು ಜಿಲ್ಲೆಯ ಏತೂರುನಗರದ 29 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.

ಹಸಿರು ಮಾರ್ಗದ ಮೂಲಕ ಹೃದಯ ರವಾನೆ: ಜೀವನಂದನ್​ ಎಂಬ ತೆಲಂಗಾಣದ ಯುವಕ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಈ ವೇಳೆ ಆತನನ್ನು ಸಿಂಕದ್ರಾಬಾದ್​ನ ಯಶೋಧ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಯುವಕನ ಮಿದುಳು ನಿಷ್ಕ್ರಿಯವಾಗಿದ್ದರಿಂದ ಆತ ಬುದುಕುಳಿಯುವುದು ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದಿತ್ತು. ಹೀಗಾಗಿ ಆತನ ಹೃದಯ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ.

ಇದೇ ಸಂದರ್ಭದಲ್ಲಿ ಡೈಲೇಟೆಡ್ ಕಾರ್ಡಿಯೊಪತಿ ಎಂಬ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಶೇಖ್​ ಶಹನಾಸ್​ (29) ಎಂಬ ವ್ಯಕ್ತಿ, ತನಗೆ ಹೃದಯ ಕಸಿ ಮಾಡಿಸಿಕೊಳ್ಳುವುದಕ್ಕೋಸ್ಕರ ಅಂಗಾಂಗಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದ. ಇದೇ ವೇಳೆ ಜೀವನಂದನ್​ ಪೋಷಕರು ಆತನ ಅಂಗಾಂಗ ದಾನಕ್ಕೆ ಮುಂದಾಗಿದ್ದರಿಂದ ವೈದ್ಯರು ಹೃದಯ ಕಸಿಗೆ ನಿರ್ಧರಿಸಿದ್ದರು. ಈ ಹಿನ್ನಲೆ ಟ್ರಾಫಿಕ್​ ಪೊಲೀಸರಿಗೆ ಮಾಹಿತಿ ನೀಡಿ ಹಸಿರು ಮಾರ್ಗ ಸ್ಥಾಪನೆಗೆ ಮನವಿ ಮಾಡಲಾಯಿತು. ಯಶೋಧಾ ಆಸ್ಪತ್ರೆಯಿಂದ ಬೆಳಗ್ಗೆ 8.10ಗಂಟೆಗೆ ಹೃದಯವನ್ನು ಅಂಬ್ಯುಲೆನ್ಸ್​​ ಮೂಲಕ 7.1 ಕಿ.ಮೀ ದೂರದ ಎನ್​ಐಎಂಇಎಸ್​​ಗೆ 8 ನಿಮಿಷದಲ್ಲಿ ಸಾಗಿಸಲಾಯಿತು.

ಹೃದ್ರೋಗ ವಿಭಾಗದ ಅಮರೇಶ್ವರ ರಾವ್​ ಅಡಿ ಕಾರ್ಯನಿರ್ವಹಿಸುವ ಡಾ ಗೋಪಾಲ್​ ನೇತೃತ್ವದ ತಂಡ ಈ ಹೃದಯವನ್ನು ಯಶಸ್ವಿಯಾಗಿ ಕಸಿ ಚಿಕಿತ್ಸೆ ನಡೆಸಿದರು. ಎನ್​ಐಎಂಎಸ್​​ ನಿರ್ದೇಶಕ ನಗರಿ ಬೈರಪ್ಪ ಮತ್ತು ಮೆಡಿಕಲ್​ ಸೂಪರಿಡೆಂಟೆಟ್​​ ನಿಮ್ಮ ಸತ್ಯನಾರಾಯಣ ಅವರು ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಿಗೆ ಶುಭಾಶಯ ತಿಳಿಸಿದ್ದಾರೆ. ಜೀವನಂದನ್​ ಹೃದಯ ಮಾತ್ರವಲ್ಲದೇ, ಆತನ ಒಂದು ಶ್ವಾಸಕೋಶ, ಯಕೃತ್​ ಮತ್ತು 2 ಕಿಡ್ನಿಯನ್ನು ಇತರರಿಗೆ ಕಸಿ ಮಾಡಲಾಗಿದೆ.

ಈ ಮೂಲಕ ಜೀವನಂದ ಹಲವರು ಬದುಕಿಗೆ ಆಸರೆ ಆಗಿದ್ದಾರೆ. ಈ ನಡುವೆ ಪೋಷಕರು ಮಗನನ್ನು ಕಳೆದುಕೊಂಡಿದ್ದರೂ, ಆತನ ಅಂಗಾಂಗಗಳು ಬೇರೆಯವರಿಗೆ ಬದುಕು ನೀಡಿದ್ದರಿಂದ ದುಃಖದಲ್ಲೂ ಸಂತಸವನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮೊದಲ ಕೃತಕ ಹೃದಯ ಕಸಿ ಯಶಸ್ವಿ; ಬದುಕುಳಿದ 2 ವರ್ಷದ ಪುಟಾಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.