ETV Bharat / state

ನಮ್ಮ ಪಕ್ಷಕ್ಕೂ, ಚೈತ್ರಾ ಕುಂದಾಪುರ ಅವರಿಗೂ ಸಂಬಂಧ ಇಲ್ಲ: ಪ್ರಹ್ಲಾದ್‌ ಜೋಶಿ

author img

By ETV Bharat Karnataka Team

Published : Sep 22, 2023, 8:18 PM IST

Union Minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಚೈತ್ರಾ ಕುಂದಾಪುರ ಬಿಜೆಪಿ ಸ್ಟಾರ್ ಪ್ರಚಾರಕಿ ಅಲ್ಲ. ಸ್ಟಾರ್ ಪ್ರಚಾರಕಿ ಆಗಲು ಪದಾಧಿಕಾರಿಗಳಾಗಿರಾಬೇಕು. ನಮ್ಮ ಪಕ್ಷಕ್ಕೂ ಅವರಿಗೂ ಸಂಬಂಧ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರತಿಕ್ರಿಯೆ

ಹುಬ್ಬಳ್ಳಿ: ಚೈತ್ರಾ ಕುಂದಾಪುರ ತಪ್ಪು ಮಾಡಿದರೆ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಯಾರ್ ಯಾರೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕಿರುತ್ತಾರೆ. ಇದನ್ನು ಒಂದು ಪಕ್ಷಕ್ಕೆ ಜೋಡಿಸೋದು ಸರಿಯಲ್ಲ. ಚೈತ್ರಾ ಕುಂದಾಪುರ ಬಿಜೆಪಿ ಸ್ಟಾರ್ ಪ್ರಚಾರಕಿ ಅಲ್ಲ. ಸ್ಟಾರ್ ಪ್ರಚಾರಕಿ ಆಗಲು ಪದಾಧಿಕಾರಿಗಳಾಗಿರಾಬೇಕು. ನಮ್ಮ ಪಕ್ಷಕ್ಕೂ ಅವರಿಗೂ ಸಂಬಂಧ ಇಲ್ಲ. ಅದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ಈ ಬಗ್ಗೆ ತುಂಬಾ ಮಾತನಾಡುತ್ತಿದೆ. ಕಳೆದ ಹಲವು ವರ್ಷಗಳ ಹಿಂದೆ ಮಾರ್ಗರೇಟ್ ಆಳ್ವ ಅವರು ಟಿಕೆಟ್ ಮಾರಿದ್ದಾರೆ ಎಂದಿದ್ದರು. ನಿಮ್ಮ ನಡುವಳಿಕೆ ನೋಡಿಕೊಳ್ಳಿ. ಚೈತ್ರಾ ಕುಂದಾಪುರ ಅವರ ಬಗ್ಗೆ ತನಿಖೆ ಆಗಲಿ. ಅವರಿಗೆ ಶಿಕ್ಷೆಯಾಗಲಿ. ಕಾಂಗ್ರೆಸ್​ನವರು ತಲೆತಲಾಂತರದಿಂದ ಟಿಕೆಟ್ ಮಾರಾಟ ಮಾಡ್ತಾ ಇದ್ದೀರಿ. 20 ಸಾವಿರಕ್ಕಿಂತ ಹೆಚ್ಚು ಹಣವನ್ನು ವಹಿವಾಟು ಮಾಡಬಾರದು ಎಂದು ಸರ್ಕಾರದ ಕಟ್ಟುನಿಟ್ಟಿನ ಕಾನೂನು ಇದೆ. ದುಡ್ಡು ಕೊಟ್ಟ ಉದ್ಯಮಿಗೆ ಬುದ್ಧಿ ಬೇಡವಾ? ಎಂದು ಪ್ರಶ್ನಿಸಿದರು.

ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ: ಚೈತ್ರಾ ಅವರ ಬಗ್ಗೆ ಯಾರಿಗೂ ಅನುಕಂಪ ಬರುವಂತಹ ಪ್ರಶ್ನೆಯೇ ಇಲ್ಲ. ವಿಶೇಷ ತಂಡ ಈ ಬಗ್ಗೆ ತನಿಖೆ ಮಾಡಬೇಕು. ಇಷ್ಟು ದುಡ್ಡು ಎಲ್ಲಿಂದ ಬಂತು ಎಂಬುವುದು ಗಂಭೀರ ವಿಷಯ. ರಾಜಕಾರಣದಲ್ಲೂ ಇದು ನಡೆದಿದೆ ಅಂತಾ ದೊಡ್ಡ ಸುದ್ದಿಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲಿ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.

ಕೇಂದ್ರದ ಮಧ್ಯಸ್ಥಿಕೆ ಪ್ರಶ್ನೆಯೇ ಇಲ್ಲ: ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, " ಈ ವಿಚಾರದಲ್ಲಿ ರಾಜ್ಯ ಸರ್ಕಾರ ಆರಂಭದಿಂದಲೇ ತಪ್ಪು ಹೆಜ್ಜೆ ಇಟ್ಟಿದೆ. ಕಾವೇರಿ ವಿಚಾರದಲ್ಲಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ಪ್ರಶ್ನೆ ಬರಲ್ಲ. ಇಷ್ಟರ ನಡುವೆಯೂ ನಾವು ಸಾಧ್ಯವಾದಷ್ಟು ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ 2,500 ಕ್ಯೂಸೆಕ್​ ನೀರು ಬಿಡುವುದಾಗಿ ಹೇಳುವ ಅವಶ್ಯಕತೆ ಇರಲಿಲ್ಲ. ತಮಿಳುನಾಡು ಮತ್ತು ಕರ್ನಾಟಕದ ಸಿಎಂಗಳು ಒಂದೆಡೆ ಕುಳಿತು ಚರ್ಚೆ ಮಾಡಬೇಕು. ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಮುಂದೆಯೂ ರಾಜ್ಯ ಸರ್ಕಾರದ ಜತೆಗೆ ಇರಲಿದ್ದೇವೆ" ಎಂದರು.

ಸದ್ಯದ ನೀರಿನ ಪರಿಸ್ಥಿತಿ ಕುರಿತು ಸಮಗ್ರ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡವನ್ನು ಕಳುಹಿಸಿ ಕೊಡುವಂತೆ ಕೇಳಿದ್ದಾರೆ. ಅದನ್ನು ಕೇಂದ್ರ ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಿದ್ದೇವೆ. ಮತ್ತೊಮ್ಮೆ ಸದ್ಯದ ನೀರಿನ ಸಂಗ್ರಹದ ಅಧ್ಯಯನ ಮಾಡಲು ಹೇಳಿದ್ದೇವೆ. ಅದಕ್ಕೆ ಕೇಂದ್ರ ಸಚಿವರು ಸಹ ಒಪ್ಪಿಕೊಂಡಿದ್ದಾರೆ. ಕಾವೇರಿ ಸೇರಿದಂತೆ ಯಾವುದೇ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ಸರ್ವ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ. ಆದರೆ ರಾಜ್ಯ ಸರ್ಕಾರ ಆರಂಭದಿಂದಲೂ ಎಡವುತ್ತ ಬಂದಿದೆ. ಆದಷ್ಟು ಬೇಗ ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಕಾವೇರಿ ವಿಚಾರಕ್ಕೆ ಜೋಶಿ ರಾಜೀನಾಮೆ ಕೊಡಬೇಕು ಎಂಬ ಮಹದೇವಪ್ಪ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಮಹದೇವಪ್ಪ ಅವರು ಹಿಂದೊಂದು, ಮುಂದೊಂದು ಮಾತನಾಡುತ್ತಾರೆ. ನಾವೇನು ಸಹಕಾರ ಕೊಟ್ಟಿದ್ದೇವೆ ಎಂಬುವುದನ್ನು ಡಿಕೆಶಿ ಅವರಿಗೆ ಕೇಳಲಿ. ತಮ್ಮ ಘಟಬಂಧನ್ ಉಳಿಸಿಕೊಳ್ಳೋಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದೆ. ಡಿಎಂಕೆ ಸರ್ಕಾರದ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳ್ಳೆಯ ನಂಟಿದೆ. 'ಇಂಡಿಯಾ' ಒಕ್ಕೂಟಕ್ಕಾಗಿ ಪರಸ್ಪರ ಆಲಂಗಿಸಿಕೊಂಡಿದ್ದರು. ಅವರಿಬ್ಬರೂ ಪರಸ್ಪರ ಕುಳಿತು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬಹುದು. ಆದರೆ ಆ ಕೆಲಸವನ್ನು ಇಬ್ಬರು ಮಾಡುತ್ತಿಲ್ಲ" ಎಂದರು.

ಮುತಾಲಿಕ್ ವಿರುದ್ಧ ಎಫ್​ಐಆರ್ ಸರಿಯಲ್ಲ: ಇನ್ನು ಸನಾತನ ಧರ್ಮದ ವಿಚಾರದಲ್ಲಿ ಅಸಭ್ಯವಾಗಿ ಮಾತನಾಡಿದಾಗಲು ಕಾಂಗ್ರೆಸ್ ಅದನ್ನು ಖಂಡಿಸುವ ಪ್ರಯತ್ನ ಮಾಡಲಿಲ್ಲ. ಎಲ್ಲ ರೀತಿಯ ಸಹಕಾರವನ್ನು ನಾವು ಕೊಡಲು ಬದ್ಧ ಎಂದರು. ಆದರೆ ಪ್ರಮೋದ್​ ಮುತಾಲಿಕ್ ಮೇಲೆ ಕ್ರಮ ಕೈಗೊಳ್ಳುವದು ಸರಿಯಲ್ಲ. ಈ ಹಿಂದೆ ಸಾಕಷ್ಟು ಜನ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಮುತಾಲಿಕ್ ಅವರ ಮೇಲೆ ಎಫ್​ಐಆರ್ ದಾಖಲಿಸುವುದು, ಗಡಿಪಾರು ಮಾಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಹಾಲಶ್ರೀ ಬಂಧನ ಬಳಿಕ ದೊಡ್ಡವರ ಹೆಸರು ಬಹಿರಂಗ ಎಂದಿದ್ದ ಚೈತ್ರಾ ಕುಂದಾಪುರ ಈಗ ಮೌನಕ್ಕೆ ಶರಣು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.