ETV Bharat / state

ಹಾಲಶ್ರೀ ಬಂಧನ ಬಳಿಕ ದೊಡ್ಡವರ ಹೆಸರು ಬಹಿರಂಗ ಎಂದಿದ್ದ ಚೈತ್ರಾ ಕುಂದಾಪುರ ಈಗ ಮೌನಕ್ಕೆ ಶರಣು..

author img

By ETV Bharat Karnataka Team

Published : Sep 21, 2023, 10:01 PM IST

ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಸಿಸಿಬಿ ವಿಚಾರಣೆ ವೇಳೆ ಮೌನಕ್ಕೆ ಶರಣಾಗಿದ್ದಾರೆ.

ಬೆಂಗಳೂರು : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಿದರೆ, ದೊಡ್ಡವರ ಹೆಸರು ಬಹಿರಂಗವಾಗಲಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಬಂಧಿತೆ ಚೈತ್ರಾ ಕುಂದಾಪುರ ಸಿಸಿಬಿ ವಿಚಾರಣೆ ವೇಳೆ ಮೌನವಾಗಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿ 5 ಕೋಟಿ ರೂ. ವಂಚನೆ ಆರೋಪದಡಿ ಬಂಧಿತರಾಗಿದ್ದ ಚೈತ್ರಾ, ಮಾಧ್ಯಮಗಳ ಮುಂದೆ ಸ್ವಾಮೀಜಿ ಹಾಲಶ್ರೀ ಬಂಧಿಸಿದರೆ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿಕೆ‌ ನೀಡುವ ಮೂಲಕ ಪ್ರಕರಣಕ್ಕೆ ತಿರುವು ಕೊಟ್ಟಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು‌. ಸ್ವಾಮೀಜಿ ಬಂಧನ ಬಳಿಕ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ಶಂಕಿಸಿದ್ದರು.

ಎರಡು ದಿನಗಳ ಹಿಂದೆ ಹಾಲಶ್ರೀ ಬಂಧಿಸಿದ್ದರು. ಸ್ವಾಮೀಜಿ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ಹಾಗೂ ಗಗನ್ ಎಂಬುವರೇ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು, ಇದರ ಹಿಂದೆ ಯಾರು ದೊಡ್ಡವರಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ. ಮತ್ತೊಂದೆಡೆ ವಿಚಾರಣೆ ಎದುರಿಸುತ್ತಿರುವ ಚೈತ್ರಾಳನ್ನು ಪ್ರಶ್ನಿಸಿದರೆ ಮೌನಕ್ಕೆ ಜಾರಿದ್ದಾರೆ. ಅಲ್ಲದೆ‌ ಪ್ರಕರಣದಲ್ಲಿ ಅನ್ಯ ವ್ಯಕ್ತಿಗಳು ಯಾರಿಲ್ಲ. ಸ್ವಾಮೀಜಿ, ಗಗನ್ ಸೇರಿ ಇನ್ನಿತರ ಆರೋಪಿಗಳು ಕೃತ್ಯವೆಸಗಿದ್ದೇವೆ ಎಂದು ಚೈತ್ರಾ ಎಂದು ಒಪ್ಪಿಕೊಂಡಿರುವುದಾಗಿ ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.

ನಾಲ್ವರಿಗೆ ನೋಟಿಸ್ ನೀಡಿದ ಪೈಕಿ‌ ಓರ್ವ ಹಾಜರು: ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯೊಂದಿಗೆ ನಂಟು ಶಂಕೆ ಹಿನ್ನೆಲೆ ಪ್ರಣವ್ ಪ್ರಸಾದ್, ತಿಪ್ಪೇಸ್ವಾಮಿ, ತುಗೂಡುರು ಮಂಜುನಾಥ್ ಹಾಗೂ ಪ್ರಕರಣಕ್ಕೆ ಸಂಬಂಧ ಮಾಹಿತಿ ಇರುವುದಾಗಿ ಹೇಳಿಕೆ‌ ನೀಡಿದ್ದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರಿಗೆ ಸಿಸಿಬಿಯು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ಪೈಕಿ ಪ್ರಣವ್ ಹಾಜರಾಗಿ ಮಾಹಿತಿ ನೀಡಿದರು.‌ ಗೈರು ಹಾಜರಾದ ಮೂವರಿಗೂ ಮತ್ತೆ ನೋಟಿಸ್ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಬಿ ಪೊಲೀಸರಿಂದ ಮುಂದುವರೆದ ತನಿಖೆ : ಕೆ ಕೆ ಗೆಸ್ಟ್ ಹೌಸ್​ನಲ್ಲಿ‌ ರೂಮ್ ಬುಕ್ ಮಾಡಿದ್ದು ಯಾರ ಹೆಸರಿನಲ್ಲಿ? ಉದ್ಯಮಿ ಗೋವಿಂದಬಾಬು ನಂಬಿಸಲು ಕೇಂದ್ರ ಚುನಾವಣೆ ಸಮಿತಿ ಸದಸ್ಯನ ಪಾತ್ರಧಾರಿ ಚೆನ್ನನಾಯಕ‌ನನ್ನು ಕೆ ಕೆ ಗೆಸ್ಟ್ ಹೌಸ್​ನಲ್ಲಿ ಭೇಟಿ ಮಾಡಿದ್ದ. ಸಾಮಾನ್ಯವಾಗಿ ಗೆಸ್ಟ್ ಹೌಸ್ ಬುಕ್‌ ಮಾಡಬೇಕಾದರೆ ರಾಜಕೀಯ ಹಿನ್ನೆಲೆ ಹೊಂದಿದವರಿಗೆ ಆದ್ಯತೆ ಇರಲಿದೆ. ರೂಮ್ ಕೊಡಿಸಲು ಜನಪ್ರತಿನಿಧಿಗಳ ಅಥವಾ ಉನ್ನತ ಅಧಿಕಾರಿಗಳು ಶಿಫಾರಸು ಮಾಡಿದರೆ ರೂಮ್ ಸಿಗಲಿದೆ. ಆದರೆ ಇಲ್ಲಿನ ಆರೋಪಿಗಳು ಯಾರ ಹೆಸರು ಬಳಸಿ ಚೈತ್ರಾ ತನ್ನ ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದಳು ಎಂಬುದೇ ಯಕ್ಷಪ್ರಶ್ನೆಯಾಗಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಹಾಲಶ್ರೀ ಮಠದಲ್ಲಿದ್ದ 56 ಲಕ್ಷ ಸೇರಿ 76 ಲಕ್ಷ ನಗದು ವಶ: ಚೈತ್ರಾಳಿಂದ 2 ಕೋಟಿ ಹಣ, ಚಿನ್ನಾಭರಣ ಜಪ್ತಿ- ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.