ಉಳ್ಳಾಲ: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿನ ವ್ಯತ್ಯಾಸದಿಂದಾಗಿ ಗಡಿ ಭಾಗ ಕುಂಜತ್ತೂರು ಬಳಿಯಿರುವ ಕೇರಳದ ಪೆಟ್ರೋಲ್ ಪಂಪ್ ಗ್ರಾಹಕರಿಲ್ಲದೆ ಬಿಕೋ ಅನ್ನುತ್ತಿದ್ದರೆ, ತಲಪಾಡಿಯಲ್ಲಿರುವ ಪೆಟ್ರೋಲ್ ಪಂಪ್ ಗ್ರಾಹಕರಿಂದ ತುಂಬಿ ತುಳುಕುತ್ತಿದೆ.
'ದಿನಕ್ಕೆ 6,000 ರೂ. ಮೌಲ್ಯದ ಪೆಟ್ರೋಲ್ ಮಾರಾಟವಾಗುತ್ತಿದ್ದ ಪಂಪ್ನಲ್ಲಿ ಸದ್ಯ 2 ಸಾವಿರ ರೂ.ಗಳ ಪೆಟ್ರೋಲ್ ಹೋಗುತ್ತಿಲ್ಲ. ಇದರಿಂದ ಶೇ.75 ರಷ್ಟು ನಷ್ಟ ಉಂಟಾಗುತ್ತಿದೆ. ಆರು ಮಂದಿಯಿದ್ದ ಸಿಬ್ಬಂದಿಯನ್ನು 4 ಮಂದಿಗೆ ಇಳಿಸಲಾಗಿದೆ. ಹೀಗೆ ಮುಂದುವರಿದಲ್ಲಿ ಇರುವ ಸಿಬ್ಬಂದಿಗೆ ವೇತನ ಕೊಡಲು ಅಸಾಧ್ಯ' ಎನ್ನುತ್ತಾರೆ ಕೇರಳ ಪೆಟ್ರೋಲ್ ಪಂಪ್ ಪ್ರಬಂಧಕ ತಾಜುದ್ದೀನ್.
15 ವರ್ಷದಿಂದ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಆದರೆ, ಇದೀಗ ಗ್ರಾಹಕರು ಪಂಪ್ ಒಳಗೆ ಬಂದು ಬೆಲೆ ವಿಚಾರಿಸಿ ವಾಪಸ್ಸಾಗುತ್ತಿದ್ದಾರೆ. ಗಡಿ ಪ್ರದೇಶದ ಎಲ್ಲಾ ಪಂಪ್ಗಳಿಗೂ ಇದೇ ಕೊರಗು. ಕೇರಳ ಸರ್ಕಾರ ಇದನ್ನು ಮನಗಂಡು ಅಬಕಾರಿ ಸುಂಕವನ್ನು ಇಳಿಕೆ ಮಾಡಿದಲ್ಲಿ ವ್ಯವಹಾರ ಮುಂದುವರೆಸಲು ಸಾಧ್ಯ ಎನ್ನುತ್ತಾರೆ ಪಂಪ್ ಸಿಬ್ಬಂದಿ ಹರೀಶ್.
ಒಂದು ವಾರದಿಂದ ಅಬಕಾರಿ ಸುಂಕ ಕಡಿಮೆ ಮಾಡಿರುವುದರಿಂದ ಕೇರಳದ ಗ್ರಾಹಕರು ಕರ್ನಾಟಕದ ಪೆಟ್ರೋಲ್ ಪಂಪ್ ಅನ್ನು ಆಶ್ರಯಿಸುವಂತಾಗಿದೆ. ಕೇರಳ ಮತ್ತು ಕರ್ನಾಟಕ ನಡುವೆ ಡಿಸೇಲ್ಗೆ 8.5 ರೂ ಮತ್ತು ಪೆಟ್ರೋಲ್ಗೆ 5.5 ರೂ ವ್ಯತ್ಯಾಸ ಇರುವುದರಿಂದ ಕೇರಳದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ತಲಪಾಡಿ ಪೆಟ್ರೋಲ್ ಪಂಪ್ಗೆ ಬರುತ್ತಿದ್ದಾರೆ.
ಈ ಹಿಂದಿಗಿಂತ ಮಾರಾಟ ಅಧಿಕವಾಗಿದೆ. ಕೊರೊನಾ ಸಂದಿಗ್ಧ ಸಂದರ್ಭ ಕಂಗೆಟ್ಟು ಹೋಗಿದ್ದ ವ್ಯವಹಾರಕ್ಕೆ ಸದ್ಯ ಸಹಾಯವಾಗಿದೆ. ಈ ಹಿಂದೆ 200 ವಾಹನಗಳು ಬರುತಿತ್ತು. ಆದರೆ, ಇದೀಗ 600ಕ್ಕೂ ಅಧಿಕ ವಾಹನಗಳು ಬರುತ್ತಿದೆ. ಕೇರಳದವರು ಈ ಪೆಟ್ರೋಲ್ ಪಂಪ್ಗೆ ಬರಬೇಕಾದರೆ ಟೋಲ್ ಪಾವತಿಸಬೇಕಾಗಿಲ್ಲ. ಆದ್ದರಿಂದ, ಬಹುತೇಕ ಕೇರಳದ ಗ್ರಾಹಕರು ಇಲ್ಲೇ ಬರುತ್ತಿದ್ದಾರೆ.
ಹಲವರು ಕ್ಯಾನ್ನಲ್ಲಿ ಡೀಸೆಲ್ ಕೊಂಡೊಯ್ಯುತ್ತಿದ್ದಾರೆ. 35 ವರ್ಷಗಳಿಂದ ಪಂಪ್ ಕಾರ್ಯಾಚರಣೆಯಲ್ಲಿದ್ದು, ದೊಡ್ಡ ಮೊತ್ತದ ವ್ಯತ್ಯಾಸ ಇದೇ ಮೊದಲ ಬಾರಿಗೆ ಆಗಿದೆ. ಆದರೆ, ಈ ಹಿಂದೆ ಕೇರಳದಲ್ಲಿ ಸ್ವಲ್ಪ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಾಗ ನಮ್ಮ ಪಂಪ್ನಲ್ಲಿ ಬಹಳಷ್ಟು ನಷ್ಟ ಉಂಟಾಗಿತ್ತು. ಇದೀಗ ಸಿಬ್ಬಂದಿ ಕೊರತೆಯೂ ಇದ್ದು, ಹೆಚ್ಚುವರಿ ಇಬ್ಬರು ಸಿಬ್ಬಂದಿಯನ್ನು ನೇಮಿಸಬೇಕಿದೆ ಎಂದು ತಲಪಾಡಿ ಪೆಟ್ರೋಲ್ ಪಂಪ್ ಪ್ರಬಂಧಕ ಯಶೋದ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲನೇ ದಿನದ ಕೃಷಿ ಮೇಳಕ್ಕೆ ಮಳೆರಾಯನ ಅಡ್ಡಿ: ವ್ಯಾಪಾರಿಗಳಲ್ಲಿ ನಿರಾಸೆ