ETV Bharat / city

ಮೊದಲನೇ ದಿನದ ಕೃಷಿ ಮೇಳಕ್ಕೆ ಮಳೆರಾಯನ ಅಡ್ಡಿ: ವ್ಯಾಪಾರಿಗಳಲ್ಲಿ ನಿರಾಸೆ

author img

By

Published : Nov 11, 2021, 8:07 PM IST

Updated : Nov 11, 2021, 8:48 PM IST

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ (Bengaluru Agricultural Fair) ಮೊದಲನೇಯ ದಿನವೇ ಮಳೆರಾಯ ಅಡ್ಡಿಪಡಿಸಿದ್ದಾನೆ. ದಿನವಿಡೀ ಸುರಿದ ಮಳೆಗೆ ಜನರು, ವ್ಯಾಪಾರಸ್ಥರು ಪರದಾಡುವಂತಾಯಿತು.

no-business-in-agricultural-fair-due-to-heavy-rain
ಕೃಷಿ ಮೇಳ

ಬೆಂಗಳೂರು: ನಗರದ ಜಿಕೆವಿಕೆ ಆವರಣದಲ್ಲಿ ಆರಂಭವಾಗಿರುವ ಕೃಷಿ ಮೇಳಕ್ಕೆ (Bengaluru Agricultural Fair) ದಿನವಿಡೀ ಮಳೆ ಕಾಟ ಎದುರಾಯಿತು. ಇದರಿಂದಾಗಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದಿದ್ದ ವ್ಯಾಪಾರಿಗಳು ಪರದಾಡುವಂತಾಯಿತು. ಮಳೆಯಿಂದ ಮಳಿಗೆಗಳ ಆವರಣ ಕೆಸರುಗದ್ದೆಯಂತಾಗಿದ್ದು, ಜನರ ಒಡಾಟಕ್ಕೆ ಕಷ್ಟಸಾಧ್ಯವಾಗಿತ್ತು.

ಮೊದಲನೇ ದಿನದ ಕೃಷಿ ಮೇಳಕ್ಕೆ ಮಳೆರಾಯನ ಅಡ್ಡಿ

ಕೃಷಿ ಮೇಳದಲ್ಲಿ (Agricultural Fair) ಈ ಬಾರಿ 750ಕ್ಕೂ ಹೆಚ್ಚು ಮಳಿಗೆಗಳನ್ನು ನೀಡಲಾಗಿದೆ. ಕೃಷಿ ವಿವಿಗೆ ದುಬಾರಿ ಬೆಲೆಕೊಟ್ಟು ಹಲವು ವ್ಯಾಪಾರಿಗಳು ಮಳಿಗೆ ಸ್ಥಾಪಿಸಿದ್ದಾರೆ. ಆದರೆ ಮೊದಲ ದಿನ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಬಂದಿಲ್ಲ. ಕೋವಿಡ್ ಮೂರನೇ ಅಲೆಯ ಆತಂಕ ಹಾಗೂ ಕೆಲ ನಿರ್ಬಂಧಗಳ ಹಿನ್ನೆಲೆಯಲ್ಲಿ ಹೆಚ್ಚಿನ ಜನರಿಗೆ ಕೃಷಿ ವಿವಿಗೆ ಪ್ರವೇಶಾವಕಾಶ ಸಿಕ್ಕಿಲ್ಲ.

ಈ ಹಿನ್ನೆಲೆಯಲ್ಲಿ ಸಭಾ ಕಾರ್ಯಕ್ರಮ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕೃಷಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳೇ ಗೋಚರಿಸುತ್ತಿದ್ದರು. ಇವರು ಮಳಿಗೆಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆದರೇ ವಿನಃ ವ್ಯಾಪಾರಿಗಳಿಗೆ ವ್ಯಾಪಾರ ಆಗಿಲ್ಲ. ಬೆಳಗಿನಿಂದಲೇ ಆರಂಭವಾದ ಮಳೆ ಮಧ್ಯಾಹ್ನದ ನಂತರ ಮತ್ತಷ್ಟು ಜೋರಾದ ಕಾರಣ ನಾಗರಿಕರು ಕೃಷಿ ವಿವಿ ಯತ್ತ ಅಷ್ಟಾಗಿ ಮುಖ ಮಾಡಿಲ್ಲ.

ನಾಲ್ಕು ದಿನಗಳ ಮೇಳದಲ್ಲಿ ಮೊದಲ ದಿನ ಮುಕ್ತಾಯವಾಗಿದ್ದು, ಯಾವುದೇ ರೀತಿಯಲ್ಲೂ ವ್ಯಾಪಾರ ಆಗಿಲ್ಲ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಮೂರು ದಿನಗಳು ಸಹ ಮಳೆ ಬೀಳುವ ಸಾಧ್ಯತೆ ಇದೆ. ಮುಂದಿನ ದಿನಗಳು ಸಹ ಇದೇ ರೀತಿ ಇರಲಿವೆಯೇ ಎಂಬ ಆತಂಕ ವ್ಯಾಪಾರಿಗಳಲ್ಲಿ ಮೂಡಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಮತ್ತಿತರ ರಾಜ್ಯಗಳಿಂದಲೂ ಸಾಕಷ್ಟು ವ್ಯಾಪಾರಿಗಳು ಆಗಮಿಸಿದ್ದಾರೆ. ಆಧುನಿಕ ಕೃಷಿ ಯಂತ್ರೋಪಕರಣಗಳು, ಹೈಬ್ರಿಡ್ ಬಿತ್ತನೆ ಬೀಜಗಳು, ಕೃಷಿ ಕ್ಷೇತ್ರದ ಉಪ ಕಸುಬುಗಳಿಗೆ ಬಳಕೆಯಾಗುವ ವಿವಿಧ ಯಂತ್ರೋಪಕರಣಗಳು, ಟ್ರ್ಯಾಕ್ಟರ್​ಗಳು, ಟಿಲ್ಲರ್​ಗಳು, ಮಿನಿ ಜೆಸಿಬಿ ಮತ್ತಿತರ ಸಲಕರಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಕೃಷಿ ವಿವಿ ಆವರಣಕ್ಕೆ ತಂದು ಪ್ರದರ್ಶನಕ್ಕೆ ಇಡಲಾಗಿದೆ. ಎರಡು ವರ್ಷಗಳ ಕೋವಿಡ್ ಆತಂಕದ ನಂತರ ಈ ಸಾರಿಯ ಕೃಷಿಮೇಳ ನಡೆದಿದ್ದು, ಸಾಕಷ್ಟು ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಆಗಮಿಸಿದ್ದ ವ್ಯಾಪಾರಿಗಳಿಗೆ ಭ್ರಮನಿರಸನ ಉಂಟಾಗಿದೆ.

ಅವ್ಯವಸ್ಥೆಗೆ ಜನರ ಅಸಮಾಧಾನ:

ನಿನ್ನೆ ರಾತ್ರಿಯೇ ಆರಂಭವಾದ ಜಿಟಿಜಿಟಿ ಮಳೆ ಮಧ್ಯಾಹ್ನವಾದರೂ ನಿಂತಿಲ್ಲ. ಪ್ರತಿವರ್ಷ ಸಾವಿರಾರು ಜನರನ್ನು ಆಕರ್ಷಿಸುತ್ತಿದ್ದ ಕೃಷಿಮೇಳಕ್ಕೆ ಈ ಬಾರಿ ಮೊದಲ ದಿನವೇ ಕಡಿಮೆ ಪ್ರಮಾಣದಲ್ಲಿ ಜನ ಆಗಮಿಸಿದ್ದಾರೆ. ನವೆಂಬರ್ 11 ರಿಂದ 14 ರವರೆಗೆ ನಾಲ್ಕು ದಿನ ನಡೆಯಲಿರುವ ಕೃಷಿಮೇಳಕ್ಕೆ ಈ ಬಾರಿ ಮಳೆಯೇ ಅಡ್ಡಿಯಾಗುವ ಸಾಧ್ಯತೆ ಇದೆ.

ಮಳೆಯಿಂದಾಗಿ ನೆಲವೆಲ್ಲಾ ಕೊಚ್ಚೆಮಯವಾಗಿದೆ. ಇದರಿಂದ ವಿವಿಧ ಮಳಿಗೆಗಳಿಗೆ ಹೋಗಲು ಜನ ಪರದಾಡಬೇಕಾಯಿತು. ಕೆಸರಿನ ಮಧ್ಯೆಯೇ ಕಾಲು ಹಾಕುತ್ತಾ ಶೌಚಾಲಯಕ್ಕೆ ಹೋಗುವವರ ಕಷ್ಟದ ಸ್ಥಿತಿ ಅಂತೂ ಹೇಳತೀರದ್ದು. ಮತ್ತೊಂದೆಡೆ, ರೈತರಿಗೆ ಜಿಕೆವಿಕೆ ಆವರಣದೊಳಗೆ ಬರಲು ಸೂಕ್ತ ಬಸ್ ವ್ಯವಸ್ಥೆ ಇರಲಿಲ್ಲ. ಕೃಷಿಮೇಳ ವೀಕ್ಷಣೆಗೆ ಬಂದ ಸಾರ್ವಜನಿಕರು ಪಾರ್ಕಿಂಗ್ ವ್ಯವಸ್ಥೆ ಬಗ್ಗೆಯೂ ಅಸಮಾಧಾನ ಹೊರಹಾಕಿದರು.

Last Updated :Nov 11, 2021, 8:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.